ನವದೆಹಲಿ; ಭಾರತ ಬಿಟ್ಟು ಹೋಗಲಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ತಡೆಯುವಂತೆ ಕೋರಿ ಖಾಸಗಿ ವಲಯದ ಬ್ಯಾಂಕ್ ಗಳು ಮಂಗಳವಾರ ಸುಪ್ರೀಂಕೋರ್ಟ್ ಮೊರೆಹೋಗಿದೆ.
ಯುನೈಟೆಡ್ ಸ್ಪಿರಿಟ್ಸ್ ನ ಕಾರ್ಯ ನಿರ್ವಹಣೇತರ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ತಮ್ಮ ಸಮಯವನ್ನು ಬ್ರಿಟನ್ ನಲ್ಲಿರುವ ಮಕ್ಕಳ ಜೊತೆ ಕಳೆಯಲಿಚ್ಛಿಸುತ್ತೇನೆಂದು ಈ ಹಿಂದೆ ಮಲ್ಯ ಅವರು ಹೇಳಿದ್ದರು. ಇದೀಗ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಭಾರತ ಬಿಟ್ಟು ಹೋಗಲಿರುವ ಮಲ್ಯ ಅವರನ್ನು ತಡೆಯುವಂತೆ ಇದೀಗ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ. ಈ ಅರ್ಜಿಯನ್ನು ಸುಪ್ರೀಂ ನಾಳೆ ಪರಿಶೀಲನೆ ನಡೆಸುವುದಾಗಿ ಹೇಳಲಾಗುತ್ತಿದೆ.
ಕಿಂಗ್ ಆಫ್ ಗುಡ್ ಟೈಮ್ಸ್ ಎಂದೇ ಖ್ಯಾತಿ ಪಡೆದಿದ್ದ ಮಲ್ಯ ಅವರ ಮೇಲೆ ಬ್ಯಾಂಕ್ ಗಳ ವಕ್ರದೃಷ್ಟಿ ಬಿದ್ದಿದೆ. ತಲೆಯ ಮೇಲೆ ಸಾವಿರಾರು ಕೋಟಿ ರುಪಾಯಿ ಸಾಲ ಇದ್ದರೂ ಕೂಡ ಸದಾ ಕಾಲ ಮೋಜು, ಮಸ್ತಿ ಎಂದು ಕಾಲ ಕಳೆಯುತ್ತಿದ್ದ ಮಲ್ಯ ಅವರಿಗೆ ಇದೀಗ ಅವರೇ ಮಾಡಿಕೊಂಡ ಸಾಲ ತೂಗು ಕತ್ತಿಯಾಗಿ ಪರಿಣಮಿಸಿದೆ. ಒಂದು ಕಡೆ ಎಸ್ ಬಿಐ, ಸಾಲ ವಸೂಲಾತಿ ನ್ಯಾಯಾಧಿಕರಣದ ಮೂಲಕ ಡಿಯಾಜಿಯೋದಿಂದ ಬರಬೇಕಿದ್ದ ಹಣಕ್ಕೆ ತಡೆ ಒಡ್ಡಿದ್ದರೆ, ಮತ್ತೊಂದೆ ಐಡಿಬಿಐ ಬ್ಯಾಂಕ್ ಜಾರಿ ನಿರ್ದೇಶನಾಲಯದ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಡಿ ಮಲ್ಯ ಅವರು ಎತ್ತಲೂ ಹೋಗದಂತೆ ಕಟ್ಟಿ ಹಾಕಿದೆ. ಇದೀಗ ಖಾಸಗಿ ವಲ್ಯದ ಬ್ಯಾಂಕ್ ಗಳು ಸುಪ್ರೀಂ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಮಲ್ಯ ಭಾರತ ಬಿಟ್ಟು ಹೋಗದಂತೆ ನಿಲ್ಲಿಸುವಂತೆ ಮನವಿ ಮಾಡಿದೆ.
Advertisement