ಮುಂಬೈ: ಉದ್ಯೋಗ ಆಗ್ರಹಿಸಿ ರೈಲ್ವೆ ಹಳಿ ಮೇಲೆ ವಿದ್ಯಾರ್ಥಿಗಳ ಪ್ರತಿಭಟನೆ; ಪ್ರಯಾಣಿಕರ ಪರದಾಟ
ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕೆ ಆಗ್ರಹಿಸಿ ರೈಲ್ವೆ ಹಳಿ ಮೇಲೆ ಕುಳಿತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಮುಂಬೈ ಲೋಕಲ್ ರೈಲ್ವೇ ವ್ಯವಸ್ಥೆ ಮಂಗಳವಾರ ಅಸ್ತವ್ಯಸ್ತಗೊಂಡಿದೆ...
ಉದ್ಯೋಗ ಆಗ್ರಹಿಸಿ ರೈಲ್ವೆ ಹಳಿ ಮೇಲೆ ವಿದ್ಯಾರ್ಥಿಗಳ ಪ್ರತಿಭಟನೆ: ಪ್ರಯಾಣಿಕರ ಪರದಾಟ
ಮುಂಬೈ: ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕೆ ಆಗ್ರಹಿಸಿ ರೈಲ್ವೆ ಹಳಿ ಮೇಲೆ ಕುಳಿತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಮುಂಬೈ ಲೋಕಲ್ ರೈಲ್ವೇ ವ್ಯವಸ್ಥೆ ಮಂಗಳವಾರ ಅಸ್ತವ್ಯಸ್ತಗೊಂಡಿದೆ.
ರೈಲ್ವೇ ಇಲಾಖೆಯಲ್ಲಿ ಪರೀಕ್ಷೆ ಬರೆದಿದ್ದರೂ ಇನ್ನೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿರುವ ನೂರಾರು ಉದ್ಯೋಗಾಕಾಂಕ್ಷಿಗಳು, ಮಾತುಂಗಾ ಹಾಗಾ ದಾರಾ ರೈಲ್ವೇ ನಿಲ್ದಾಣದ ಮಧ್ಯದ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಿಂದ ದೇಶದ ವಿವಿಧ ಭಾಗಗಳಿಗೆ ದಿನನಿತ್ಯ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಪ್ರತಿಭಟನೆಯಿಂದಾಗಿ ರೈಲು ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಟುವಂತಾಗಿದೆ.
ಈ ನಡುವೆ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದು, ಸ್ಥಳದಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ವರದಿಗಳು ತಿಳಿಸಿವೆ. ಪೊಲೀಸ್ ಅಧಿಕಾರಿಗಳೂ ಕೂಡ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಯತ್ನ ನಡೆಸಿದ್ದು, ಈ ಯತ್ನವೂ ವಿಫಲಗೊಂಡಿದೆ ಎಂದು ಹೇಳಲಾಗುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ನೇಮಕಾತಿಗಳೂ ನಡೆದಿಲ್ಲ. ಉದ್ಯೋಗವಿಲ್ಲದೆ ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಉದ್ಯೋಗ ದೊರಕದ ಕಾರಣ 10 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೀತಿಯ ಘಟನೆಗಳು ಮತ್ತೆ ನಡೆಯಲು ನಾವು ಬಿಡುವುದಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಸ್ಥಳಕ್ಕೆ ಬಂದು ನಮ್ಮೊಂದಿಗೆ ಮಾತುಕತೆ ನಡೆಸುವವರೆಗೂ ನಾವು ನಮ್ಮ ಪ್ರತಿಭಟನೆಯಿಂದ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಹಿನ್ನಲೆಯಲ್ಲಿ ಮುಂಬೈ ಪೊಲೀಸರು ಹಾಗೂ ಆರ್'ಪಿಎಫ್ ಯೋಧರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ರೈಲ್ವೇ ಹಳಿಗಳಿಂದ ವಿದ್ಯಾರ್ಥಿಗಳನ್ನು ಹೊರತಂದು ಪ್ರಯಾಣಕ್ಕೆ ಸುಗಮ ಹಾದಿ ಮಾಡಿಕೊಡುವುದು ನಮ್ಮ ಆದ್ಯತೆಯಾಗಿದೆ ಎಂದು ಕೇಂದ್ರೀಯ ರೈಲ್ವೇ ನಿಲ್ದಾಣದ ಮುಖ್ಯ ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖ್ಯಸ್ಥ ಸುನಿಲ್ ಉದಾಸಿಯವರು ಹೇಳಿದ್ದಾರೆ.