1962ರ ಸೋಲು ಕಪ್ಪು ಚುಕ್ಕೆಯಲ್ಲ, ಅಂದೂ ಸೇನೆ ಕೆಚ್ಚೆದೆಯ ಶೌರ್ಯ ಪ್ರದರ್ಶಿಸಿದೆ, ಮುಂದೆಯೂ ಪ್ರದರ್ಶಿಸಲಿದೆ
ನವದೆಹಲಿ: 1962ರ ಯುದ್ಧವನ್ನು ನೆನಪು ಮಾಡಿಕೊಳ್ಳಿ ಎಂಬ ಚೀನಾದ ಹೇಳಿಕೆಗೆ ಖಡಕ್ ತಿರುಗೇಟು ನೀಡಿರುವ ಭಾರತೀಯ ಸೇನೆ 'ಇದು 1962ರ ಭಾರತವಲ್ಲ' ಎಂದು ಹೇಳಿದೆ.
ಚೀನಾದ ಯುದ್ಧೋನ್ಮಾದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂರ್ವ ವಿಭಾಗದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜೆನರಲ್ ಎಂಎಂ ನಾರವನೆ ಅವರು, ಚೀನಾ 1962ರ ಯುದ್ಧವನ್ನು ಪದೇ ಪದೇ ಪ್ರಸ್ತಾಪಿಸುವ ಮೂಲಕ ಭಾರತವನ್ನು ಪರೋಕ್ಷವಾಗಿ ಬೆದರಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿದೆ. ಆದರೆ ನಾನು ಒಂದು ಹೇಳುತ್ತೇನೆ. ಚೀನಾ ದೇಶ ಮೊದಲು ಒಂದು ಅಂಶವನ್ನು ನೆನಪಿಟ್ಟುಕೊಳ್ಳಬೇಕು. ಅದೇನೆಂದರೆ ಇದು 1962ರ ಭಾರತವಲ್ಲ.. ಯಾವುದೇ ರೀತಿಯ ಪರಿಸ್ಥಿತಿಗೂ ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ ಎಂದು ಹೇಳಿದರು.
ಅಂತೆಯೇ '1962ರ ಸೋಲು ಕಪ್ಪು ಚುಕ್ಕೆಯಲ್ಲ, ಅಂದೂ ಸೇನೆ ಕೆಚ್ಚೆದೆಯ ಶೌರ್ಯ ಪ್ರದರ್ಶಿಸಿದೆ, ಮುಂದೆಯೂ ಪ್ರದರ್ಶಿಸಲಿದೆ. ಭಾರತೀಯ ಸೇನೆಯಲ್ಲಿ ಸಾಕಷ್ಚು ಸುಧಾರಣೆಯಾಗಿದ್ದು, 1962ರ ಸೇನೆಗೂ ಹಾಲಿ ಇರುವ ಸೇನಾ ಸಾಮರ್ಥ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಅಂದಿನ ಸೈನಿಕರ ಕೆಚ್ಚೆದೆಯ ಹೋರಾಟವನ್ನು ನಾವು ಮರೆಯುವಂತಿಲ್ಲ. ನಾವೂ ಕೂಡ ಚೀನಾಗೆ ಹೇಳುತ್ತಿದ್ದೇವೆ. 1962ರ ಯುದ್ದವನ್ನು ಮರೆಯಬೇಡಿ. ಅಂದೂ ಸೇನೆ ಕೆಚ್ಚೆದೆಯ ಶೌರ್ಯ ಪ್ರದರ್ಶಿಸಿದೆ, ಮುಂದೆಯೂ ಪ್ರದರ್ಶಿಸಲಿದೆ.
ಚೀನಾಗೆ ಡೋಕ್ಲಾಂ ಪ್ರಕರಣ ಕಣ್ಣಮುಂದೆಯೇ ಇದೆ. ಅವರಿಗೆ ಹೇಗೆ ಬೇಕೋ ಹಾಗೆ ಭಾರತದ ಗಡಿ ಪ್ರವೇಶ ಮಾಡಬಹುದು ಎಂಬ ದಡ್ಡತನ ಸುಳ್ಳಾಗಿದೆ. ಆದರೆ ಚೀನಾ ಸೈನಿಕರು ಅಲ್ಲಿ ಭಾರತೀಯ ಸೈನಿಕರು ಇದ್ದಾರೆ ಎಂಬುದನ್ನು ಮರೆತು ಒಳ ನುಗ್ಗಿದ್ದರು. ಆದಕ್ಕೆ ಬಹುಶಃ ಪಶ್ಛಾತ್ಥಾಪ ಕೂಡ ಪಟ್ಟಿರಬೇಕು. ಭಾರತೀಯ ಸೇನೆ ಎಂತಹುದೇ ಬೆದರಿಕೆಗಳನ್ನು ಎದುರಿಸಲು ಮತ್ತು ಹಿಮ್ಮೆಟಿಸಲು ಸರ್ವಸನ್ನದ್ಧವಾಗಿದೆ ಎಂಬುದುನ್ನು ಚೀನಾ ಮರೆಯಬಾರದು ಎಂದು ಎಂಎಂ ನಾರವನೆ ಹೇಳಿದರು.
Advertisement