ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದವರನ್ನು ಹಿಡಿದು, ಮೊಬೈಲ್ ಕರೆ ವಿವರ ಪರಿಶೀಲಿಸಿ: ಯೋಗಿ ಆದಿತ್ಯನಾಥ್

ಕೊರೋನಾ ವೈರಸ್ ಭೀತಿಯ ನಡುವೆಯೇ ತಬ್ಲಿಘಿ ಜಮಾತ್ ನಲ್ಲಿ ಮಸೀದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಶದ ವಿವಿಧ ಭಾಗಗಳಿಗೆ ಸಂಚರಿಸಿ ಸೋಂಕು ಹರಡುತ್ತಿರುವವರ ಬಗ್ಗೆ ದೇಶಾದ್ಯಂತ ಆತಂಕ ಎದುರಾಗಿದೆ. 
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಕೊರೋನಾ ವೈರಸ್ ಭೀತಿಯ ನಡುವೆಯೇ ತಬ್ಲಿಘಿ ಜಮಾತ್ ನಲ್ಲಿ ಮಸೀದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಶದ ವಿವಿಧ ಭಾಗಗಳಿಗೆ ಸಂಚರಿಸಿ ಸೋಂಕು ಹರಡುತ್ತಿರುವವರ ಬಗ್ಗೆ ದೇಶಾದ್ಯಂತ ಆತಂಕ ಎದುರಾಗಿದೆ. 

ವೈದ್ಯರಿಕೆ ಅಸಹಕಾರ ನೀಡುತ್ತಿರುವುದು ಸೇರಿದಂತೆ ಹಲವು ಅಹಿತಕರ ಬೆಳವಣಿಗೆ ಮಧ್ಯೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಲ್ಲರ ಗಮನ ಸೆಳೆಯುವಂತಹ ಆದೇಶ ನೀಡಿದ್ದಾರೆ. 

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಹಿಡಿದು, ಮೊಬೈಲ್ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡು, ಕರೆ ವಿವರಗಳನ್ನು ಪರಿಶೀಲಿಸಬೇಕೆಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಕಳೆದ ತಿಂಗಳು ಲಾಕ್ ಡೌನ್ ಹೊರತಾಗಿಯೂ ಮಸೀದಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದ ಜನರು ದೇಶಾದ್ಯಂತ ಸಂಚರಿಸಿದ್ದು, ಕೊರೋನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡುವುದಕ್ಕೆ ಮೂಲವಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಲಾಕ್ ಡೌನ್ ಹೊರತಾಗಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘನೆ ಮಾಡಿರುವುದು, ಸಮಾಜದಲ್ಲಿ ಆತಂಕ ಮೂಡಿಸಿರುವುದು ಯೋಜಿತ ಷಡ್ಯಂತ್ರದ ಭಾಗವಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ವಶಕ್ಕೆ ಪಡೆಯಿರಿ, ಮೊಬೈಲ್ ಗಳನ್ನು ವಶಕ್ಕೆ ಪಡೆದು ಕರೆ ವಿವರಗಳನ್ನು ಪರಿಶೀಲಿಸಿ, ಅವರಿಗೆ ಸಂಬಂಧಪಟ್ಟಿದ್ದನ್ನು ತಪಾಸಣೆ ಮಾಡಿ, ಒಂದು ವೇಳೆ ಏನಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ ಅದನ್ನು ವಶಕ್ಕೆ ಪಡೆಯಿರಿ, ಸ್ಯಾನಿಟೈಸೇಷನ್, ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಯೋಗಿ ಆದಿತ್ಯನಾಥ್ ತಮ್ಮ ಸರ್ಕಾರ ರಚನೆ ಮಾಡಿರುವ ಟೀಂ-11 ಕ್ಕೆ ತಿಳಿಸಿದ್ದಾರೆ. 

ಕೋವಿಡ್-19 ಸೋಂಕು ಭಾರತದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಸಮರ್ಥವಾಗಿ ಎದುರಿಸುವುದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ 11 ಮಂದಿ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದಾರೆ. ಈ ತಂಡಕ್ಕೆ 
ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು ಎಂದು ಸೂಚಿಸಲಾಗಿದ್ದು, ಲಾಕ್ ಡೌನ್ ಮುಕ್ತಾಯಗೊಂಡ ನಂತರದ ಪರಿಸ್ಥಿತಿ ಸುಗಮವಾಗಿರುವಂತೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಕಾರ್ಯಸೂಚಿ ತಯಾರಿಸಲು ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com