ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಭಾರತವನ್ನು ದಿಟ್ಟಿಸಿ ನೋಡುವ ಧೈರ್ಯವನ್ನು ಯಾರೂ ಮಾಡಲಾರರು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಮಹತ್ವದ ಹೇಳಿಕೆ ನೀಡಿದ್ದಾರೆ.
ಯುದ್ಧಕ್ಕೆ ಸನ್ನದ್ದವಾಗಲು ತನ್ನ ಸೇನೆಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಸೂಚನೆ ನೀಡಿರುವ ಬೆನ್ನಲ್ಲೇ ಕೇಂದ್ರ ಸಚಿವರ ಈ ಹೇಳಿಕೆ ಡ್ರಾಗನ್ ದೇಶಕ್ಕೆ ನೀಡಿದ ಎಚ್ಚರಿಕೆ ಎಂದು ಪರಿಗಣಿಸಲಾಗಿದೆ.
ಮತ್ತೊಂದುಕಡೆ ಚೀನಾದೊಂದಿಗೆ ಉದ್ಭವವಾಗಿರುವ ಉದ್ರಿಕ್ತತೆ ಪರಿಸ್ಥಿತಿ ಶಮನಕ್ಕೆ ವಿವಾದಗಳನ್ನು ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಈ ಸಂಬಂಧ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ.
ಈ ಸಂಬಂಧ ಈಗಾಗಲೇ ರಕ್ಷಣಾ ಸಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಲ್ಲದೆ, ಭೂಸೇನೆ, ನೌಕಾದಳ, ವಾಯುಪಡೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಈ ತಂಡದೊಂದಿಗೆ ಪ್ರಧಾನಿ ಮೋದಿ ಕೂಡಾ ಸಭೆ ನಡೆಸಿ ಚರ್ಚಿಸಿದ್ದಾರೆ.
ಬಿಪಿನ್ ರಾವತ್, ಮೂರು ದಳಗಳ ಮುಖ್ಯಸ್ಥರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಚರ್ಚೆ ನಡೆಸಿದ್ದಾರೆ. ಮತ್ತೊಂದೆಡೆ ಬುಧವಾರದಿಂದ ಸೇನಾ ದಂಡ ನಾಯಕರು ಲಡಾಖ್ ಪರಿಸ್ಥಿತಿ ಕುರಿತು ಮೂರು ದಿನಗಳ ಕಾಲ ಸಮಗ್ರ ಸಮೀಕ್ಷೆ ನಡೆಸಲಿದ್ದಾರೆ.
20 ದಿನಗಳಿಂದ ಗಡಿಯಲ್ಲಿ ಚೀನಾ ಪ್ರಚೋದನಾತ್ಮಕ ಕ್ರಮಗಳಲ್ಲಿ ತೊಡಗಿದೆ. ಲಡಾಖ್ ನಲ್ಲಿರುವ ಪ್ಯಾಂಗಾಂಗ್, ಗಾಲ್ವನ್ ಕಣಿವೆ, ಡೆಮ್ ಚೌಕ್, ದೌಲತ್ ಬೇಗ್ ಪ್ರದೇಶಗಳ ಸಮೀಪ ಚೀನಾಬೃಹತ್ ಪ್ರಮಾಣದಲ್ಲಿ ಸೇನೆ ಜಮಾವಣೆ ನಡೆಸುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಭಾರತ ಚೀನಾಕ್ಕೆ ಪ್ರತಿಯಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆಯಾ ಪ್ರದೇಶಗಳಿಗೆ ಸೇನೆಯನ್ನು ರವಾನಿಸುತ್ತಿದೆ. ಚೈನಾದೊಂದಿಗಿನ ಗಡಿ ಪ್ರದೇಶದಲ್ಲಿ ಸೇನಾ ಗಸ್ತು ಹೆಚ್ಚಿಸಿದೆ. 2017 ಡೋಕ್ಲಾಮ್ ನಲ್ಲಿ ಭಾರತ ಚೀನಾಸೇನೆಗಳು ಮುಖಾಮುಖಿಯಾಗಿದ್ದವು. ಈಗ ಲಡಾಖ್ ನೈಜ ನಿಯಂತ್ರಣ ರೇಖೆ ಬಳಿ ಎರಡೂ ದೇಶಗಳ ನಡುವೆ ಅಂತಹದೇ ಪರಿಸ್ಥಿತಿ ನಿರ್ಮಾಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
Advertisement