ರಷ್ಯಾ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು
ರಷ್ಯಾ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು

ಮೋದಿ-ಪುಟಿನ್ ಮಾತುಕತೆ ಬೆನ್ನಲ್ಲೇ, ಆಫ್ಘಾನಿಸ್ತಾನ ಬೆಳವಣಿಗೆ ಕುರಿತು ಭಾರತ-ರಷ್ಯಾ ಭದ್ರತಾ ಸಲಹೆಗಾರರ ಮಾತುಕತೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಫ್ಘಾನಿಸ್ತಾನದ ಬೆಳವಣಿಗೆ ಕುರಿತು ಮಾತುಕತೆ ನಡೆಸಿದ ಬೆನ್ನಲ್ಲೇ ಇದೀಗ ಉಭಯ ದೇಶಗಳ ಭದ್ರತಾ ಸಲಹೆಗಾರರು ಇದೇ ವಿಚಾರವಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
Published on

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಫ್ಘಾನಿಸ್ತಾನದ ಬೆಳವಣಿಗೆ ಕುರಿತು ಮಾತುಕತೆ ನಡೆಸಿದ ಬೆನ್ನಲ್ಲೇ ಇದೀಗ ಉಭಯ ದೇಶಗಳ ಭದ್ರತಾ ಸಲಹೆಗಾರರು ಇದೇ ವಿಚಾರವಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಷ್ಯಾದ ಭದ್ರತಾ ಮುಖ್ಯಸ್ಥ ನಿಕೋಲಾಯ್ ಪತ್ರುಶೇವ್ ಅವರು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಕುರಿತು ಅಂತರ್ ಸರ್ಕಾರಿ ಸಮಾಲೋಚನೆಯ ಭಾಗವಾಗಿ ಇಂದು ಮಾತುಕತೆ ನಡೆಸಿದ್ದಾರೆ. 

ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಜನರಲ್ ನಿಕೋಲಾಯ್ ಪತ್ರುಶೇವ್, ಅಫ್ಘಾನಿಸ್ತಾನದ ಕುರಿತು ಮಾತುಕತೆಗಾಗಿ ಅಜಿತ್ ದೋವಲ್ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಅವರೊಡನೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಉನ್ನತ ಮಟ್ಟದ ನಿಯೋಗವಿದೆ.

ಭದ್ರತಾ ವಿಷಯಗಳ ಕುರಿತು ರಷ್ಯಾ-ಭಾರತ ಸಮಾಲೋಚನೆಗಳು ನವದೆಹಲಿಯಲ್ಲಿ ಆರಂಭವಾಗಿದ್ದು, ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪತ್ರುಶೇವ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡುತ್ತಿದ್ದಾರೆ ಎಂದು ರಷ್ಯಾದ ರಾಯಭಾರ  ಕಚೇರಿ ಟ್ವೀಟ್ ಮಾಡಿದೆ.

ಅಫ್ಘಾನಿಸ್ತಾನದಲ್ಲಿ ಭಾರತ-ರಷ್ಯಾ ಅಂತರ್ ಸರ್ಕಾರಿ ಸಮಾಲೋಚನೆಗಳು ಅಫ್ಘಾನಿಸ್ತಾನದ ಬೆಳವಣಿಗೆಗಳ ನಂತರ ಆಗಸ್ಟ್ 24 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದೂರವಾಣಿ ಸಂಭಾಷಣೆ ನಡೆದಿತ್ತು. ಕಾರ್ಯತಂತ್ರದ ಪಾಲುದಾರರು ಒಟ್ಟಾಗಿ ಕೆಲಸ ಮಾಡುವುದು  ಮುಖ್ಯ ಎಂದು ಉಭಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಫ್ಘಾನಿಸ್ತಾನದಲ್ಲಿ ಸಂಪರ್ಕದಲ್ಲಿರಲು ತಮ್ಮ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿತ್ತು. 

ಅಂತರ ಸರ್ಕಾರಿ ಸಮಾಲೋಚನೆಯ ಮಾತುಕತೆಯ ಪ್ರಾರಂಭದಲ್ಲಿ ರಷ್ಯಾದ ನಿಯೋಗವನ್ನು ಸ್ವಾಗತಿಸಿದ ದೋವಲ್, ಇದು ಬಹಳ ವಿಶೇಷವಾದ ಸಭೆಯಾಗಿದ್ದು, "ಪ್ರಧಾನಿ ಮೋದಿ ಅಧ್ಯಕ್ಷ ಪುಟಿನ್ ಜೊತೆ ನಡೆಸಿದ ದೂರವಾಣಿ ಸಂಭಾಷಣೆಯ ಅನುಸರಣೆಯಾಗಿದೆ, ಮತ್ತು ನಾವು ಈ ಸಭೆಗೆ ಹೆಚ್ಚಿನ ಮಹತ್ವ  ನೀಡುತ್ತೇವೆ" ಎಂದು ಹೇಳಿದರು. ಬಳಿಕ ಪತ್ರುಶೇವ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಈ ಮೊದಲು, ರಷ್ಯಾದಲ್ಲಿನ ಭಾರತೀಯ ರಾಯಭಾರಿ ವೆಂಕಟೇಶ್ ವರ್ಮ ಅವರು ಅಫ್ಘಾನಿಸ್ತಾನದ ಪರಿಸ್ಥಿತಿ ಇಡೀ ಪ್ರದೇಶಕ್ಕೆ ಕಳವಳಕಾರಿಯಾಗಿದೆ ಮತ್ತು ಭಾರತ ಮತ್ತು ರಷ್ಯಾ ಎರಡೂ ಅಲ್ಲಿನ ಬೆಳವಣಿಗೆಗಳಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದರು.

ಇನ್ನು ಕಾಬೂಲ್ ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಳ್ಳುವ ಮೊದಲು ಅಫ್ಘಾನ್ ಶಾಂತಿ ಪ್ರಕ್ರಿಯೆಗೆ ಒತ್ತಾಯಿಸುವಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸಿತ್ತು. ಹಾಲಿ ಸಮಾಲೋಚನೆಗಳು ಅಫ್ಘಾನಿಸ್ತಾನದಲ್ಲಿ ಸಂಪೂರ್ಣವಾಗಿ ಹೊಸ ಸನ್ನಿವೇಶವನ್ನು ಪ್ರತಿಬಿಂಬಿಸುತ್ತವೆ. ಈ ಮಹತ್ವದ ಸಮಾಲೋಚನೆ  ಅಫ್ಘಾನಿಸ್ತಾನದಲ್ಲಿ ಭಾರತ ಮತ್ತು ರಷ್ಯಾ ನಡುವಿನ ರಾಜಕೀಯ ಮತ್ತು ಭದ್ರತಾ ಸಹಕಾರದಲ್ಲಿ ಮಹತ್ವದ ಏರಿಕೆಯ ಬಯಕೆ, ಪ್ರಾಮುಖ್ಯತೆ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ. ಎರಡೂ ದೇಶಗಳು ಭಯೋತ್ಪಾದನೆಯ ಬಗ್ಗೆ ಒಂದೇ ರೀತಿಯ ಕಾಳಜಿಯನ್ನು ಮತ್ತು ವಿಶೇಷವಾಗಿ ತಾಲಿಬಾನ್‌ಗಳು ತಮ್ಮ  ಭರವಸೆಗಳು ಮತ್ತು ಆಶ್ವಾಸನೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com