ಮಂಕಿಪಾಕ್ಸ್ ಗೆ ಲಸಿಕೆ ಅಭಿವೃದ್ಧಿ ಕುರಿತು ಚಿಂತನೆ: ಆಧಾರ್ ಪೂನಾವಾಲ ಮಹತ್ವದ ಘೋಷಣೆ
ಪುಣೆ: ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ವ್ಯಾಪಕ ಭೀತಿಗೆ ಕಾರಣವಾಗಿರುವ ಮಂಕಿಪಾಕ್ಸ್ ಸೋಂಕಿಗೆ ಲಸಿಕೆ ಅಭಿವೃದ್ಧಿ ಮಾಡುವ ಕುರಿತು ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆಧಾರ್ ಪೂನಾವಾಲ ಘೋಷಿಸಿದ್ದಾರೆ.
ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ಇದನ್ನು ತಡೆಗಟ್ಟಲು ಲಸಿಕೆ ತಯಾರಿಕೆಯ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಹೀಗಾಗಿ ಶೀಫ್ರದಲ್ಲೇ ಮಂಕಿಪಾಕ್ಸ್ಗೆ ಲಸಿಕೆ ಕಂಡುಹಿಡಿಯುವ ಸಾಧ್ಯತೆ ಇದೆ' ಎಂದು ಲಸಿಕೆ ತಯಾರಕ ಅದಾರ್ ಪೂನಾವಾಲ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅದಾರ್ ಪೂನಾವಾಲಾ ಅವರು, ಮಂಕಿಪಾಕ್ಸ್ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಿಡುಬು ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಶೀಘ್ರದಲ್ಲೇ ಮಂಕಿಪಾಕ್ಸ್ಗೆ ಮೆಸೆಂಜರ್ ಆರ್ಎನ್ಎ (ಎಂಆರ್ಎನ್ಎ) ಲಸಿಕೆಯನ್ನು ಅಭಿವೃದ್ಧಿಪಡಿಸಲು ನೊವೊವಾಕ್ಸ್ನೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಜೊತೆಗೆ ಡೆನ್ಮಾರ್ಕ್ನ ಬವೇರಿಯನ್ ನಾರ್ಡಿಕ್ನಿಂದ ಸಿಡುಬು ಲಸಿಕೆಗಳು ಮೂರು ತಿಂಗಳಲ್ಲಿ ಭಾರತಕ್ಕೆ ಬರಬಹುದು. ಸೀರಮ್ ಸಂಸ್ಥೆಯು ಪರವಾನಗಿ ಅಡಿಯಲ್ಲಿ ಸಿಡುಬು ಲಸಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ತಾಂತ್ರಿಕ ಜ್ಞಾನವನ್ನು ಹೊಂದಿರುವ ಲಸಿಕೆ ತಯಾರಕರಾಗಿ ಈಗ ವಿದೇಶಿ ಲಸಿಕೆ ಪಾಲುದಾರರೊಂದಿಗೆ ಚರ್ಚಿಸಲು ಯೋಚಿಸುತ್ತಿದ್ದೇವೆ. ನೊವೊವಾಕ್ಸ್ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಪೂನಾವಾಲ ಹೇಳಿದ್ದಾರೆ.
ಮಂಕಿಪಾಕ್ಸ್ಗೆ ಲಸಿಕೆ ಕೋವಿಡ್ ಲಸಿಕೆಗಿಂತ ಭಿನ್ನವಾಗಿದೆ, ಇದರಲ್ಲಿ ವಿವಿಧ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಮಂಕಿಪಾಕ್ಸ್ ಲಸಿಕೆಗಳನ್ನು ನಿರ್ವಹಿಸಲು ವಿಶೇಷ ಕಂಟೈನ್ಮೆಂಟ್ ಸೌಲಭ್ಯಗಳ ಅಗತ್ಯವಿದೆ. ಪ್ರಸ್ತುತ ಲಸಿಕೆಯನ್ನು ನಾವು ಭಾರತದಲ್ಲಿ ತಯಾರಿಸಲು ನಾವು ಸಜ್ಜುಗೊಂಡಿಲ್ಲ. ಅದರೆ ಈ ಪರಿಸ್ಥಿತಿ ಬದಲಾಗಬಹುದು.. ನಮ್ಮಲ್ಲಿ ಕೆಲವು ಸೌಲಭ್ಯಗಳಿವೆ. ನಾವು ನಮ್ಮ ಪಾಲುದಾರರೊಂದಿಗೆ ಮಾತನಾಡುತ್ತಿದ್ದೇವೆ... ಮಂಕಿಪಾಕ್ಸ್ಗೆ ನಾವು ಎಂಆರ್ಎನ್ಎ ಲಸಿಕೆಯನ್ನು ಸಮರ್ಥವಾಗಿ ಸಿದ್ದಪಡಿಸಬಹುದು ಎಂದು ಹೇಳಿದ್ದಾರೆ.
ಕೋವಿಡ್ -19 ಸೋಂಕಿಗೆ ಆಕ್ಸ್ಫರ್ಡ್-ಆಸ್ಟ್ರಾಜೆನೆಕಾ ಸಂಸ್ಥೆಯ ಸಹಭಾಗಿತ್ವದಲ್ಲಿ ಪೂನಾವಾಲ ಅವರ ಸೆರಂ ಇನ್ ಸ್ಚಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸಿ ವಿತರಣೆ ಮಾಡುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ