ಹಳಸಿದ ಸಂಬಂಧ: ಭಾರತ ತಿರುಗೇಟು; ಕೆನಡಾ ರಾಜತಾಂತ್ರಿಕ ಅಧಿಕಾರಿ ಉಚ್ಛಾಟನೆ; ದೇಶ ತೊರೆಯುವಂತೆ ಸೂಚನೆ

ಸಿಖ್‌ ಪ್ರತ್ಯೇಕತಾವಾದಿ ನಾಯಕ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಹೊರ ಹಾಕಿದ ಕೆಲವೇ ಗಂಟೆಗಳ ನಂತರ ಕೆನಡಾಗೆ ಭಾರತ ತಿರುಗೇಟು ನೀಡಿದೆ.
ಕೆನಡಾದ ಉನ್ನತ ರಾಜತಾಂತ್ರಿಕ ಅಧಿಕಾರಿ
ಕೆನಡಾದ ಉನ್ನತ ರಾಜತಾಂತ್ರಿಕ ಅಧಿಕಾರಿ

ನವದೆಹಲಿ: ಸಿಖ್‌ ಪ್ರತ್ಯೇಕತಾವಾದಿ ನಾಯಕ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಹೊರ ಹಾಕಿದ ಕೆಲವೇ ಗಂಟೆಗಳ ನಂತರ ಕೆನಡಾಗೆ ಭಾರತ ತಿರುಗೇಟು ನೀಡಿದೆ.

ಏಟಿಗೆ ಏದಿರೇಟು ಎಂಬಂತೆ ಭಾರತ ಸರ್ಕಾರ ಕೆನಡಾದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟಿಸಿದೆ.

ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ಇಂದು ಕರೆಸಿ, ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲಾಯಿತು.

ಈ ವೇಳೆ ಮುಂದಿನ ಐದು ದಿನದೊಳಗೆ ಭಾರತವನ್ನು ತೊರೆಯುವಂತೆ ಸಂಬಂಧಪಟ್ಟ ರಾಜತಾಂತ್ರಿಕರಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.

ಸೋಮವಾರ ಮಧ್ಯಾಹ್ನ ನಡೆದ ಸಂಸತ್‌ ಅಧಿವೇಶನದಲ್ಲಿ ಮಾತನಾಡಿದ್ದ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೊ, ‘ಖಾಲಿಸ್ತಾನಿ ಭಯೋತ್ಪಾದಕ ಹತ್ಯೆಯ ಹಿಂದೆ ಭಾರತೀಯ ಏಜೆಂಟರುಗಳ ಕೈವಾಡವಿದೆ ಎಂಬುವುದಕ್ಕೆ ನಮ್ಮ ಸರ್ಕಾರದ ಬಳಿ ಸಾಕ್ಷಿಗಳಿವೆ’ ಎಂದು ಹೇಳಿದ್ದರು.

ಜಸ್ಟಿನ್ ಟ್ರಡೋ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ‘ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿಲುವು ತಾಳಿದೆ. ಇಂದು ಭಾರತದ ಹಿರಿಯ ಗುಪ್ತಚರ ಅಧಿಕಾರಿಯನ್ನು ಕೆನಡಾದಿಂದ ಉಚ್ಚಾಟನೆ ಮಾಡಲಾಗಿದೆ. ಇವರು ಭಾರತದ ವಿದೇಶಿ ಗುಪ್ತಚರ ಸಂಸ್ಥೆ ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ (RAW)ನ ಮುಖ್ಯಸ್ಥರಾಗಿದ್ದರು’ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಭಾರತ ನಿರಾಕರಿಸಿದ್ದು, ಕೆನಡಾ ಸಂಸತ್ತಿನಲ್ಲಿ ಆ ರಾಷ್ಟ್ರದ ಪ್ರಧಾನಿ ನೀಡಿರುವ ಹೇಳಿಕೆಯನ್ನು ನೋಡಿದ್ದೇವೆ. ಕೆನಡಾ ಪ್ರಧಾನಿ ಹಾಗೂೂ ಕೆನಡಾ ರಾಷ್ಟ್ರದ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಯನ್ನು ತಿರಸ್ಕರಿಸುತ್ತಿದ್ದೇವೆ. ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂಬ ಆರೋಪಗಳು ಅಸಂಬದ್ಧವಾದದ್ದು. ನಾವು ಕಾನೂನಿನ ಆಳ್ವಿಕೆಗೆ ಬದ್ಧತೆ ಹೊಂದಿರುವ ಪ್ರಜಾಸತ್ತಾತ್ಮಕ ರಾಜಕೀಯ ಹೊಂದಿದ್ದೇವೆಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com