ಸತತ ಮೂರನೇ ದಿನ ಬಿಬಿಸಿ ಕಚೇರಿಯಲ್ಲಿ ಮುಂದುವರಿದ ತೆರಿಗೆ ಸಮೀಕ್ಷೆ: ರಾಜಕೀಯ ಸೇಡು ಎಂದು ಟೀಕಿಸಿದ ವಿಪಕ್ಷಗಳು

ಭಾರತದಲ್ಲಿರುವ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೋಧನೆ ಸತತ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ. ಅಧಿಕಾರಿಗಳು ಆಯ್ದ ಸಿಬ್ಬಂದಿಗಳಿಂದ ಹಣಕಾಸಿನ ದಾಖಲೆಗಳನ್ನು ಸಂಗ್ರಹಿಸಿದ್ದು, ಬಿಬಿಸಿ ಸುದ್ದಿ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಲೆಕ್ಕಪತ್ರಗಳ ದಾಖಲೆ ಪ್ರತಿಗಳನ್ನು ಪಡೆದುಕೊಂಡಿದ್ದಾರೆ. 
ಬಿಬಿಸಿ ಕಚೇರಿ
ಬಿಬಿಸಿ ಕಚೇರಿ

ನವದೆಹಲಿ: ಭಾರತದಲ್ಲಿರುವ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೋಧನೆ ಸತತ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ. ಅಧಿಕಾರಿಗಳು ಆಯ್ದ ಸಿಬ್ಬಂದಿಗಳಿಂದ ಹಣಕಾಸಿನ ದಾಖಲೆಗಳನ್ನು ಸಂಗ್ರಹಿಸಿದ್ದು, ಬಿಬಿಸಿ ಸುದ್ದಿ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಲೆಕ್ಕಪತ್ರಗಳ ದಾಖಲೆ ಪ್ರತಿಗಳನ್ನು ಪಡೆದುಕೊಂಡಿದ್ದಾರೆ. 

ಮೊನ್ನೆ ಮಂಗಳವಾರ ಬೆಳಗ್ಗೆ 11:30 ರ ಸುಮಾರಿಗೆ ದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಕಚೇರಿಗಳಲ್ಲಿ ಪ್ರಾರಂಭವಾದ ಕಾರ್ಯಾಚರಣೆಯು ಈಗ 45 ಗಂಟೆಗಳಿಗೂ ಹೆಚ್ಚು ಸಮಯ ಮೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಮೀಕ್ಷೆ ಮುಂದುವರಿದಿದೆ ಎಂದು ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬಿಬಿಸಿ ಅಂಗಸಂಸ್ಥೆ ಕಂಪೆನಿಗಳ ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತನಿಖೆ ಮಾಡಲು ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮೀಕ್ಷಾ ತಂಡಗಳು ಹಣಕಾಸಿನ ವಹಿವಾಟು, ಕಂಪನಿಯ ರಚನೆ ಮತ್ತು ಸುದ್ದಿ ಕಂಪನಿಯ ಇತರ ವಿವರಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿವೆ. ಸಾಕ್ಷ್ಯವನ್ನು ಸಂಗ್ರಹಿಸುವ ಕಾರ್ಯದ ಭಾಗವಾಗಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಡೇಟಾವನ್ನು ಪಡೆಯಲಾಗುತ್ತಿದೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಲಂಡನ್ ಪ್ರಧಾನ ಕಚೇರಿಯ ಸಾರ್ವಜನಿಕ ಪ್ರಸಾರ ಸಂಸ್ಥೆ ಬಿಬಿಸಿ ವಿರುದ್ಧ ಐ-ಟಿ ಇಲಾಖೆಯ ಕ್ರಮವನ್ನು ವಿರೋಧ ಪಕ್ಷಗಳು ಖಂಡಿಸಿದ್ದು, ಇದನ್ನು "ರಾಜಕೀಯ ಸೇಡು" ಎಂದು ಬಣ್ಣಿಸಿದ್ದಾರೆ. ಆಡಳಿತಾರೂಢ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಸಾಕ್ಷ್ಯಚಿತ್ರದ ಬಗ್ಗೆ ಬಿಬಿಸಿಯನ್ನು "ವಿಷಪೂರಿತ ವರದಿ" ಎಂದು ಆರೋಪಿಸಿತ್ತು. ಎರಡು ಭಾಗಗಳ ಸಾಕ್ಷ್ಯಚಿತ್ರ "ಇಂಡಿಯಾ: ದಿ ಮೋದಿ ಕ್ವೆಶ್ಚನ್" ನ್ನು ಪ್ರಸಾರ ಮಾಡಿದ ವಾರಗಳ ನಂತರ ಐಟಿ ಇಲಾಖೆ ದಾಳಿ ನಡೆದಿದ್ದು ಇದನ್ನು ಪ್ರತಿಪಕ್ಷಗಳು ಪ್ರಶ್ನಿಸಿದ್ದವು. ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ 2002ರ ಗೋಧ್ರಾ ಗಲಭೆ ಕುರಿತ ವರದಿಯಾಗಿದ್ದವು. 

ಈ ಕ್ರಮದ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಬಿಬಿಸಿ ತಾನು ಅಧಿಕಾರಿಗಳೊಂದಿಗೆ ಸಹಕರಿಸುತ್ತಿರುವುದಾಗಿ ಹೇಳಿದೆ. ಎಂದಿನಂತೆ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ದೆಹಲಿಯ ಬಿಬಿಸಿ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com