ಕಾಂಜಾವಾಲ ಅಪಘಾತ: ಸಂತ್ರಸ್ತೆಯ ಮೆದುಳು ನಾಪತ್ತೆ; ಮುರಿದ ಬೆನ್ನುಮೂಳೆ, ದೇಹದ ಮೇಲ್ಭಾಗದಲ್ಲಿ 40 ಗಾಯಗಳು!
ಮೃತ ಅಂಜಲಿ ಕುಮಾರಿ ತಲೆಬುರುಡೆ ಸಂಪೂರ್ಣವಾಗಿ ಮುರಿದು ಮಿದುಳು ಹೊರಬಂದಿತ್ತು. ಕನಿಷ್ಠ 40 ಬಾಹ್ಯ ಗಾಯಗಳಿವೆ. ಆಕೆಯ ಪಕ್ಕೆಲುಬುಗಳು ಮುರಿದಿರುವ ವಿಷಯ ಶವಪರೀಕ್ಷೆ ವರದಿಯಿಂದ ಬಹಿರಂಗವಾಗಿದೆ.
Published: 05th January 2023 09:22 AM | Last Updated: 05th January 2023 03:12 PM | A+A A-

ಸಿಸಿಟಿವಿ ದೃಶ್ಯ
ದೆಹಲಿ: ಜನವರಿ 1 ರಂದು ನಡೆದ ಭೀಕರ ಅಪಘಾತದ ನಂತರ ಅಂಜಲಿ ಕುಮಾರಿ ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ದೇಹಕ್ಕೆ ಉಂಟಾದ ಹಾನಿಯನ್ನು ಬಹಿರಂಗಪಡಿಸಿದೆ. ಹೊಸ ವರ್ಷದ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ 20 ವರ್ಷದ ಯುವತಿ ಸಾವನ್ನಪ್ಪಿದ್ದಳು.
ಮೃತ ಅಂಜಲಿ ಕುಮಾರಿ ತಲೆಬುರುಡೆ ಸಂಪೂರ್ಣವಾಗಿ ಮುರಿದು ಮಿದುಳು ಹೊರಬಂದಿತ್ತು. ಕನಿಷ್ಠ 40 ಬಾಹ್ಯ ಗಾಯಗಳಿವೆ. ಆಕೆಯ ಪಕ್ಕೆಲುಬುಗಳು ಮುರಿದಿರುವ ವಿಷಯ ಶವಪರೀಕ್ಷೆ ವರದಿಯಿಂದ ಬಹಿರಂಗವಾಗಿದೆ. ಅಪಘಾತದ ಸಮಯದಲ್ಲಿ ಆಕೆಯ ಕಾಲುಗಳು, ಎರಡೂ ಕೈಗಳು ಮುರಿದಿದ್ದವು, ಹಣೆಯ ಮೇಲೆ ಆಳವಾದ ಗಾಯಗಳಾಗಿವೆ ಎಂದು ವರದಿ ಬಹಿರಂಗಪಡಿಸಿದೆ.
ಬಲೆನೊ ಕಾರಿನ ಎಡ ಮುಂಭಾಗದ ಚಕ್ರದ ಕೆಳಗೆ ಕೆಲವು ರಕ್ತದ ಕಲೆಗಳು ಕಂಡುಬಂದಿದ್ದರಿಂದ ಸಂತ್ರಸ್ತೆ ಅಲ್ಲಿ ಸಿಲುಕಿಕೊಂಡಿದ್ದರು ಎಂದು ಪ್ರಾಥಮಿಕ ಫೋರೆನ್ಸಿಕ್ ವರದಿಯಿಂದ ತಿಳಿದು ಬಂದಿದೆ. ಆ ಚಕ್ರದಲ್ಲಿ ಆಕೆಯ ಕಾಲು ಸಿಲುಕಿಕೊಂಡಂತೆ ತೋರುತ್ತಿದೆ ಎಂದು ಹಿರಿಯ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೋರೆನ್ಸಿಕ್ ತಜ್ಞರು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಿದ್ದು. ಆಕೆ ಕಾರಿನ ಅಡಿಯಲ್ಲಿ ಯಾವ ರೀತಿ ಸಿಕ್ಕಿಹಾಕಿಕೊಂಡಿದ್ದಾಳೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ರಕ್ತಸ್ರಾವದ ಆಘಾತದಿಂದ ಆಕೆ ಸಾವನ್ನಪ್ಪಿದ್ದಾಳೆ. ತಲೆ, ಬೆನ್ನುಮೂಳೆ ಮತ್ತು ಎಡ ಭಾಗದ ಪಕ್ಕೆಲುಬು ಮುರಿದಿದೆ, ವಾಹನ ಅಪಘಾತವಾಗಿ ದೇಹವನ್ನು ಎಳೆದೊಯ್ದಾಗ ಈ ರೀತಿಯಾಗುವುದು ಸಾಮಾನ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಕಾಂಜಾವಾಲಾ ಪ್ರಕರಣ: ಕಾರಿನೊಳಗೆ ಮಹಿಳೆಯಿದ್ದ ಯಾವುದೇ ಚಿಹ್ನೆಗಳು ಕಂಡು ಬಂದಿಲ್ಲ- ಎಫ್ಎಸ್ಎಲ್
ಲೈಂಗಿಕ ದೌರ್ಜನ್ಯ ನಡೆದಿರುವ ಯಾವುದೇ ಸಾಕ್ಷ್ಯಗಳು ಮರಣೋತ್ತರ ಪರೀಕ್ಷೆಯಲ್ಲಿ ಸಿಕ್ಕಿಲ್ಲ, ಆ ರೀತಿಯ ಯಾವುದೇ ಗಾಯಗಳಾಗಿಲ್ಲ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಸಾಗರ್ ಪ್ರೀತ್ ಹೇಳಿದ್ದಾರೆ.
ಅಪಘಾತದ ಸಮಯದಲ್ಲಿ ಅಂಜಲಿ ಕುಡಿದಿದ್ದರು ಎಂಬ ಆರೋಪವನ್ನು ಅಂಜಲಿ ಕುಟುಂಬ ಸದಸ್ಯರು ತಿರಸ್ಕರಿಸಿದ್ದಾರೆ. ಮೃಳ ಸ್ನೇಹಿತೆ ಎನ್ನಲಾದ ಪ್ರಮುಖ ಸಾಕ್ಷಿ ನಿಧಿ, ಅಂಜಲಿ ಕುಡಿದಿದ್ದಳು ಎಂದು ಆರೋಪಿಸಿದ್ದಳು. ಅಪಘಾತ ನಡೆದಾಗ ನಿಧಿ ಸಂತ್ರಸ್ತೆಯ ಜೊತೆಗಿದ್ದರು ಎನ್ನಲಾಗಿದೆ.
ನಿಧಿ ಬೆಳಗಿನ ಜಾವ 2.30ರ ಸುಮಾರಿಗೆ ಮನೆಗೆ ಹಿಂದಿರುಗುತ್ತಿರುವುದನ್ನು ತೋರಿಸುವ ಹೊಸ ಸಿಸಿಟಿವಿ ದೃಶ್ಯಾವಳಿಗಳೂ ಹೊರಬಿದ್ದಿವೆ. ನಿಧಿ 1.37 ರ ಸುಮಾರಿಗೆ ತನ್ನ ಮನೆಯನ್ನು ತಲುಪಿ ಗೇಟ್ ಪ್ರವೇಶಿಸುವುದನ್ನು ಕಾಣಬಹುದು.
ಇದನ್ನೂ ಓದಿ: ಕಾಂಜಾವಾಲಾ ಪ್ರಕರಣ: ಮಹಿಳೆ ಕಾರಿನಡಿ ಸಿಲುಕಿರುವುದು ಆರೋಪಿಗಳಿಗೆ ತಿಳಿದಿತ್ತು- ಪ್ರತ್ಯಕ್ಷದರ್ಶಿಗಳು
ಘಟನೆಯ ನಂತರ ಕಾರು ಸ್ಥಳದಿಂದ ಪರಾರಿಯಾಗಿದೆ ಎಂದು 2:30 ಕ್ಕೆ ಮೊದಲ ಪಿಸಿಆರ್ ಕರೆ ಮಾಡಿದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಜಾನೆ 3:30 ರ ಸುಮಾರಿಗೆ ಸ್ವೀಕರಿಸಿದ ಎರಡನೇ ಪಿಸಿಆರ್ ಕರೆ, ಮಹಿಳೆಯ ದೇಹವು ವಾಹನದ ಅಡಿಯಲ್ಲಿ ಸಿಲುಕಿಕೊಂಡಿದೆ ಎಂದು ಪೊಲೀಸರಿಗೆ ತಿಳಿಸಿತು, ಆದರೆ ದಟ್ಟವಾದ ಮಂಜಿನಿಂದಾಗಿ ಕಾರಿನ ನೋಂದಣಿ ಸಂಖ್ಯೆಯನ್ನು ಅವರಿಗೆ ನೀಡಲು ಅವರಿಗೆ ಸಾಧ್ಯವಾಗಲಿಲ್ಲ.