ಉದ್ಯೋಗಕ್ಕಾಗಿ ಭೂ ಹಗರಣ: ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ ನಿವಾಸದ ಮೇಲೆ ಸಿಬಿಐ ದಾಳಿ

ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂದಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದ ಶೋಧ ಕಾರ್ಯ ನಡೆಸಿದ್ದಾರೆ.
ರಾಬ್ರಿ ನಿವಾಸದ ಮೇಲೆ ಸಿಬಿಐ ದಾಳಿ
ರಾಬ್ರಿ ನಿವಾಸದ ಮೇಲೆ ಸಿಬಿಐ ದಾಳಿ

ಪಾಟ್ನಾ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂದಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದ ಶೋಧ ಕಾರ್ಯ ನಡೆಸಿದ್ದಾರೆ.

ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ಸೋಮವಾರ ವಿಚಾರಣೆ ನಡೆಸುತ್ತಿದ್ದಾರೆ.  ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ, ತಮ್ಮ ಪತಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಇತರ 14 ಮಂದಿಯೊಂದಿಗೆ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯವು ಮಾಜಿ ರೈಲ್ವೇ ಸಚಿವ ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಆರೋಪಿಗಳಿಗೆ ಮಾರ್ಚ್ 15 ರಂದು ಸಮನ್ಸ್ ನೀಡಿದೆ.

ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು 2004 ಮತ್ತು 2009 ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದಾಗ ತಮ್ಮ ಕುಟುಂಬಕ್ಕೆ ಜಮೀನನ್ನು ಉಡುಗೊರೆಯಾಗಿ ನೀಡಿದವರು ಅಥವಾ ಮಾರಾಟ ಮಾಡಿದ ಕುಟುಂಬಗಳಿಗೆ ರೈಲ್ವೇಯಲ್ಲಿ ಉದ್ಯೋಗ ನೀಡಿದ್ದರು ಎಂಬ ಆರೋಪವಿದೆ. ಅವರ ಪಾಟ್ನಾ ನಿವಾಸದಲ್ಲಿ ವಿಚಾರಣೆಯ ನಡೆಯುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ರಾಬ್ರಿ ದೇವಿ ಅವರನ್ನು ಸಿಬಿಐ ಕಚೇರಿಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಕೂಡ ಸಿಬಿಐ ದಾಳಿ ನಡೆಯುತ್ತಿರುವುದರಿಂದ ರಾಬ್ರಿ ದೇವಿ ಅವರ ನಿವಾಸದಲ್ಲಿ ಹಾಜರಿದ್ದರು. ಫೆಬ್ರವರಿ 27 ರಂದು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಇತರ 14 ಜನರಿಗೆ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸಮನ್ಸ್ ನೀಡಿತ್ತು.

ಏನಿದು ಹಗರಣ?
2004-2009ರ ಅವಧಿಯಲ್ಲಿ ಮುಂಬೈ, ಜಬಲ್‌ಪುರ್, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರ ಮತ್ತು ರೈಲ್ವೆಯ ವಿವಿಧ ವಲಯಗಳಲ್ಲಿ ಬಿಹಾರದ ಪಾಟ್ನಾ ನಿವಾಸಿಗಳಾಗಿದ್ದರೂ ಕೆಲವು ವ್ಯಕ್ತಿಗಳನ್ನು ಗ್ರೂಪ್-ಡಿ ಹುದ್ದೆಗಳಿಗೆ ಬದಲಿಯಾಗಿ ನೇಮಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಅದರ ಬದಲಾಗಿ, ವ್ಯಕ್ತಿಗಳು ಅಥವಾ ಅವರ ಕುಟುಂಬದ ಸದಸ್ಯರು ತಮ್ಮ ಜಮೀನನ್ನು ಪ್ರಸಾದ್ ಅವರ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾಯಿಸಿದರು ಮತ್ತು ಕಂಪನಿ ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ನಂತರ ಅದನ್ನು ಪ್ರಸಾದ್ ಅವರ ಕುಟುಂಬದ ಸದಸ್ಯರು ಸ್ವಾಧೀನಪಡಿಸಿಕೊಂಡರು. ಪಾಟ್ನಾದಲ್ಲಿ ನೆಲೆಸಿರುವ ಸುಮಾರು 1,05,292 ಚದರ ಅಡಿ ಭೂಮಿಯನ್ನು ಪ್ರಸಾದ್ ಅವರ ಕುಟುಂಬದ ಸದಸ್ಯರು ಐದು ಮಾರಾಟ ಪತ್ರಗಳು ಮತ್ತು ಎರಡು ಉಡುಗೊರೆ ಪತ್ರಗಳ ಮೂಲಕ ಆ ವ್ಯಕ್ತಿಗಳಿಂದ ಸ್ವಾಧೀನಪಡಿಸಿಕೊಂಡಿದ್ದಾರೆ ಮತ್ತು ಹೆಚ್ಚಿನ ಮಾರಾಟ ಪತ್ರಗಳಲ್ಲಿ ಮಾರಾಟಗಾರರಿಗೆ ಪಾವತಿಯನ್ನು ನಗದು ರೂಪದಲ್ಲಿ ಪಾವತಿಸುವಂತೆ ಹೇಳಲಾಗಿತ್ತು ಎಂದು ಆರೋಪಿಸಲಾಗಿದೆ.

ಈಗಿರುವ ಸರ್ಕಲ್ ದರದಂತೆ ಭೂಮಿಯ ಮೌಲ್ಯ ಸುಮಾರು 4.39 ಕೋಟಿ ರೂ ಗೆ ಬದಲಾಗಿ ಲಾಲು ಪ್ರಸಾದ್ ಅವರ ಕುಟುಂಬದ ಸದಸ್ಯರು ನೇರವಾಗಿ ಮಾರಾಟಗಾರರಿಂದ ಪ್ರಚಲಿತ ವಲಯದ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿ ಖರೀದಿಸಿದ್ದಾರೆ. ಭೂಮಿಯ ಪ್ರಚಲಿತ ಮಾರುಕಟ್ಟೆ ಮೌಲ್ಯವು ವೃತ್ತದ ದರಕ್ಕಿಂತ ಹೆಚ್ಚಿನದಾಗಿತ್ತು. ಬದಲಿ ನೇಮಕಾತಿಗೆ ರೈಲ್ವೇ ಪ್ರಾಧಿಕಾರವು ಹೊರಡಿಸಿದ ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಮತ್ತು ನಂತರ ಅವರ ಸೇವೆಗಳನ್ನು ಸಹ ಕ್ರಮಬದ್ಧಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com