
ಮೀರತ್-ಕರ್ನಾಲ್ ರಾಷ್ಟ್ರೀಯ ಹೆದ್ದಾರಿ (NH-709A)ಯಲ್ಲಿರುವ ಭುನಿ ಟೋಲ್ ಪ್ಲಾಜಾದಲ್ಲಿ ಆಗಸ್ಟ್ 17ರ ರಾತ್ರಿ ಟೋಲ್ ಸಿಬ್ಬಂದಿ ಭಾರತೀಯ ಸೇನೆಯ ಯೋಧ, ಆಪರೇಷನ್ ಸಿಂಧೂರ್ ನಲ್ಲಿ ಭಾಗಿಯಾಗಿದ್ದ ಕಪಿಲ್ ಸಿಂಗ್ ಮತ್ತು ಅವರ ಸಹೋದರ ಶಿವಂ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ನಾಚಿಕೆಗೇಡಿನ ಘಟನೆ ನಡೆದಿತ್ತು. ಈ ಘಟನೆಯ ನಂತರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕಠಿಣ ಕ್ರಮ ಕೈಗೊಂಡು ಟೋಲ್ ಸಂಗ್ರಹ ಸಂಸ್ಥೆಯಾದ ಮೆಸರ್ಸ್ ಧರಮ್ ಸಿಂಗ್ & ಕಂಪನಿಗೆ 20 ಲಕ್ಷ ರೂ. ದಂಡ ವಿಧಿಸಿದೆ ಅಲ್ಲದೆ ಕಂಪನಿಯ ಒಪ್ಪಂದವನ್ನು ರದ್ದುಗೊಳಿಸುವ ಜೊತೆಗೆ ಭವಿಷ್ಯದಲ್ಲಿ ಟೋಲ್ ಪ್ಲಾಜಾ ಬಿಡ್ಡಿಂಗ್ನಲ್ಲಿ ಭಾಗವಹಿಸುವುದನ್ನು ತಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಮೀರತ್ನ ಗೋಟ್ಕಾ ಗ್ರಾಮದ ನಿವಾಸಿ ಸೇನಾ ಯೋಧ ಕಪಿಲ್ ಸಿಂಗ್, ಆಗಸ್ಟ್ 17ರ ರಾತ್ರಿ ತನ್ನ ಸೋದರಸಂಬಂಧಿ ಶಿವಂ ಜೊತೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಅವರು ಶ್ರೀನಗರದಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಭುನಿ ಟೋಲ್ ಪ್ಲಾಜಾದಲ್ಲಿ ಉದ್ದವಾದ ಸರತಿ ಸಾಲು ಮತ್ತು ಸಮಯದ ಅಭಾವದಿಂದಾಗಿ, ಕಪಿಲ್ ಟೋಲ್ ನೌಕರರಿಗೆ ವಾಹನವನ್ನು ಬೇಗನೆ ಹೊರಗೆ ತರುವಂತೆ ಮನವಿ ಮಾಡಿದರು. ಈ ಬಗ್ಗೆ ವಾಗ್ವಾದ ತಾರಕಕ್ಕೇರಿತು. ಟೋಲ್ ಸಿಬ್ಬಂದಿ ಯೋಧನ ಮೇಲೆ ಹಲ್ಲೆ ನಡೆಸಿತ್ತು. ಸಿಬ್ಬಂದಿ ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ ದೊಣ್ಣೆ ಕೋಲುಗಳಿಂದ ಹೊಡೆದಿದ್ದು ಓರ್ವ ಉದ್ಯೋಗಿ ಇಟ್ಟಿಗೆ ಎತ್ತಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ.
ಈ ಸಮಯದಲ್ಲಿ, ಕಪಿಲ್ ಅವರ ಸಹೋದರ ಶಿವಂ ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಅವರನ್ನೂ ಥಳಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನಂತರ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಯಿತು. ಘಟನೆಯ ನಂತರ, ಸ್ಥಳೀಯ ಗ್ರಾಮಸ್ಥರ ಗುಂಪು ಟೋಲ್ ಪ್ಲಾಜಾದಲ್ಲಿ ಜಮಾಯಿಸಿ ಟೋಲ್ ಪ್ಲಾಜಾದ ನೌಕರರ ವಿರುದ್ಧ ಪ್ರತಿಭಟಿಸಿದ್ದು ಪ್ಲಾಜಾವನ್ನು ಧ್ವಂಸಗೊಳಿಸಿದರು. ಈ ಗಲಾಟೆಯಿಂದಾಗಿ, ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಮೀರತ್ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿ ಕೆಲವು ಆರೋಪಿಗಳನ್ನು ಬಂಧಿಸಿದರು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಇತರ ಆರೋಪಿಗಳನ್ನು ಹುಡುಕಲಾಗುತ್ತಿದೆ.
NHAI ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಂಡು ಟೋಲ್ ಸಂಗ್ರಹಣಾ ಸಂಸ್ಥೆಗೆ 20 ಲಕ್ಷ ರೂ.ಗಳ ಭಾರಿ ದಂಡ ವಿಧಿಸಿದೆ. ಕಂಪನಿಯು ತನ್ನ ಉದ್ಯೋಗಿಗಳನ್ನು ಶಿಸ್ತುಬದ್ಧವಾಗಿಡಲು ಮತ್ತು ಟೋಲ್ ಪ್ಲಾಜಾದಲ್ಲಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ವಿಫಲವಾಗಿದೆ ಎಂದು NHAI ಹೇಳಿಕೆಯಲ್ಲಿ ತಿಳಿಸಿದೆ. ಇದು ಒಪ್ಪಂದದ ಪ್ರಮುಖ ಉಲ್ಲಂಘನೆಯಾಗಿದೆ. NHAI ಹೇಳಿಕೆ ನೀಡಿ, 'ಇಂತಹ ನಡವಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ' ಎಂದು ಹೇಳಿದೆ.
ಯೋಧ ಕಪಿಲ್ ಸಿಂಗ್ ಮತ್ತು ಅವರ ಸಹೋದರ ಶಿವಂ ಅವರ ಸ್ಥಿತಿ ಸ್ಥಿರವಾಗಿದೆ. ಈ ಘಟನೆಯು ಸೈನಿಕರ ಮೇಲಿನ ಗೌರವ ಮತ್ತು ಟೋಲ್ ಪ್ಲಾಜಾಗಳ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ಟೋಲ್ ನೌಕರರ ಗೂಂಡಾಗಿರಿ ಮತ್ತು ಸ್ಥಳೀಯ ಪೊಲೀಸರ ನಿಷ್ಕ್ರಿಯತೆಯನ್ನು ಟೀಕಿಸಿದ್ದಾರೆ. ಅನೇಕ ಬಳಕೆದಾರರು ಈ ಘಟನೆಯನ್ನು ರಾಷ್ಟ್ರೀಯ ಭದ್ರತೆಗೆ ಜೋಡಿಸಿದ್ದಾರೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಭುನಿ ಟೋಲ್ ಪ್ಲಾಜಾ ಮೀರತ್ ಜಿಲ್ಲೆಯ ಭುನಿ ಗ್ರಾಮದ ಬಳಿ ಮೀರತ್-ಕರ್ನಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ (NH-709A) ಇದೆ.
Advertisement