
ಭಾರತ ಆಪರೇಷನ್ ಸಿಂಧೂರ್ (operation sindoor) ಮೂಲಕ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಕೊಂದಿದ್ದ ಉಗ್ರರ ದಾಳಿಗೆ ಪ್ರತೀಕಾರ ತೆಗೆದುಕೊಂಡಿದೆ.
ಹಲವು ಕಾರಣಗಳಿಂದಾಗಿ ಆಪರೇಷನ್ ಸಿಂಧೂರ್ ಪಾಕ್ ವಿರುದ್ಧದ ಭಾರತದ ಉಳಿದೆಲ್ಲಾ ಕಾರ್ಯಾಚರಣೆಗಳಿಗಿಂತಲೂ ಭಿನ್ನವಾದ ಗುರಿ ನಿರ್ದಿಷ್ಟ ಕಾರ್ಯಾಚರಣೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
2016 ಉರಿ ಸರ್ಜಿಕಲ್ ಸ್ಟ್ರೈಕ್, 2019 ರ ಬಾಲಾಕೋಟ್ ವೈಮಾನಿಕ ದಾಳಿಗಿಂತಲೂ ಈ ಬಾರಿ ನಡೆದಿರುವ ಆಪರೇಷನ್ ಸಿಂಧೂರ್ ದಾಳಿ ತಾಂತ್ರಿಕವಾಗಿಯೂ ಅತ್ಯಂತ ಮುಂದುವರಿದ ಸುಸಜ್ಜಿತ ದಾಳಿ ಎನ್ನಲಾಗುತ್ತಿದೆ.
ತಾಂತ್ರಿಕವಾಗಿ ಬಲಿಷ್ಠ, ವಿಸ್ತಾರವಾಗಿದ್ದ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನ ಆಕ್ರಮಿತ ಪ್ರದೇಶದೊಳಗೆ ಆಳವಾಗಿ ದಾಳಿ ಮಾಡಲಾಗಿದೆ. ಈ ಮೂಲಕ ಹಿಂದಿನ ಎಲ್ಲಾ ಕ್ರಮಗಳಿಗಿಂತ ಭಿನ್ನವಾದ ಕ್ರಮವನ್ನು ಈ ದಾಳಿಯಲ್ಲಿ ಅನುಸರಿಸಲಾಗಿದೆ. ಬಾಲಕೋಟ್ ಕಾರ್ಯಾಚರಣೆಯ ನಂತರ ಭಾರತ ನಡೆಸಿದ ಅತ್ಯಂತ ವಿಸ್ತಾರವಾದ ಗಡಿಯಾಚೆಗಿನ ದಾಳಿ ಆಪರೇಷನ್ ಸಿಂಧೂರ್ ಆಗಿದ್ದು, ಭಾರತದ ಕಾರ್ಯತಂತ್ರದ ನಿಲುವಿನಲ್ಲಿ ವಿಕಸನವನ್ನೂ ಪ್ರತಿನಿಧಿಸುತ್ತಿದೆ.
"ಉಗ್ರಗಾಮಿಗಳ ನಷ್ಟದ ಪ್ರಮಾಣವು ಭಯೋತ್ಪಾದಕ ಜಾಲಗಳು ಮತ್ತು ಅವುಗಳನ್ನು ನಿರ್ವಹಿಸುವವರಿಗೆ ಬಲವಾದ ಸಂದೇಶವನ್ನು ರವಾನಿಸಿದೆ. ಭಾರತ ಈಗ ಪೂರ್ವಭಾವಿಯಾಗಿ ದಾಳಿ ಮಾಡುವ ಹಕ್ಕನ್ನು ಕಾಯ್ದಿರಿಸಿದೆ ಮತ್ತು ಯಾವುದೇ ಸ್ಥಳವು ತಲುಪಲು ಸಾಧ್ಯವಿಲ್ಲ ಎನ್ನುವ ಮಾತೇ ಇಲ್ಲ ಎಂಬಂತಾಗಿದೆ" ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಆಪರೇಷನ್ ಸಿಂಧೂರ್ ಕೇವಲ ಪ್ರತೀಕಾರದ ಬಲಪ್ರದರ್ಶನವಾಗಿ ಮಾತ್ರವಲ್ಲದೆ, ಪಾಕಿಸ್ತಾನಿ ನೆಲದಿಂದ ಹುಟ್ಟಿಕೊಂಡ ಭಯೋತ್ಪಾದನೆಯ ಮತ್ತು ಕಾರ್ಯಾಚರಣೆಯ ಅಡಿಪಾಯವನ್ನು ನಿರ್ನಾಮ ಮಾಡುವ ಕಾರ್ಯಾಚರಣೆಯೂ ಆಗಿದೆ.
ಟಾರ್ಗೆಟ್ ನ ವಿಶೇಷತೆಗಳು
ಈ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಒಂಬತ್ತು ಸ್ಥಳಗಳನ್ನು ಹೊಡೆದುರುಳಿಸಲಾಗಿದೆ. ಇವುಗಳಲ್ಲಿ ಮುಜಫರಾಬಾದ್, ಕೋಟ್ಲಿ, ಬಹವಾಲ್ಪುರ್, ರಾವಲಕೋಟ್, ಚಕ್ಸರಿ, ಭಿಂಬರ್, ನೀಲಂ ಕಣಿವೆ, ಝೀಲಂ ಮತ್ತು ಚಕ್ವಾಲ್ ಸೇರಿವೆ. ಒಟ್ಟು ಕ್ಷಿಪಣಿ ದಾಳಿಗಳ ಸಂಖ್ಯೆ 24 ಆಗಿದ್ದು, ಇದು ಭಾರತ ಇದುವರೆಗೆ ನಿರ್ವಹಿಸಿದ ಅತ್ಯಂತ ವ್ಯಾಪಕವಾದ ಏಕದಿನ ನಿಖರ ಕಾರ್ಯಾಚರಣೆಯಾಗಿದೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
"ಸಂಘಟಿತ ದಾಳಿಯಲ್ಲಿ 80 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ" ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ದಾಳಿಗೆ ಗುರಿಯಾದ ಪ್ರತಿಯೊಂದು ಸ್ಥಳವು ದೀರ್ಘಕಾಲದ ಕಣ್ಗಾವಲಿನಲ್ಲಿತ್ತು. ಸರ್ಕಾರಿ ಮೂಲಗಳ ಪ್ರಕಾರ, ಭಾರತೀಯ ಗುಪ್ತಚರ ಇಲಾಖೆ ಉಪಗ್ರಹ ಚಿತ್ರಣ, ಮಾನವ ಮೂಲಗಳು ಮತ್ತು ಸಂವಹನಗಳನ್ನು ಒಟ್ಟುಗೂಡಿಸಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ನಂತಹ ಗುಂಪುಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದೆ.
ಸಿಂದೂರ್ ಕಾರ್ಯಾಚರಣೆಯು ವಾಯು, ನೌಕಾ ಮತ್ತು ಭೂ-ಆಧಾರಿತ ಸ್ವತ್ತುಗಳ ನಿಯೋಜನೆಯನ್ನು ಒಳಗೊಂಡಿತ್ತು. ಈ ಕಾರ್ಯಾಚರಣೆಯು ವಾಯು-ಉಡಾವಣಾ SCALP ಕ್ರೂಸ್ ಕ್ಷಿಪಣಿಗಳು, HAMMER ನಿಖರ-ನಿರ್ದೇಶಿತ ಬಾಂಬ್ಗಳಂತಹ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡಿದೆ.
250 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ SCALP (ಸ್ಟಾರ್ಮ್ ಶ್ಯಾಡೋ) ಕ್ಷಿಪಣಿಗಳನ್ನು ಬಲವರ್ಧಿತ ಬಂಕರ್ಗಳು ಮತ್ತು ಕಮಾಂಡ್ ಪೋಸ್ಟ್ಗಳು ಸೇರಿದಂತೆ ಗಟ್ಟಿ ಗುರಿಗಳನ್ನು ಹೊಡೆಯಲು ಬಳಸಲಾಗಿದೆ.
ತರಬೇತಿ ಮಾಡ್ಯೂಲ್ಗಳು ಮತ್ತು ಕಾರ್ಯಾಚರಣೆಯ ನಾಯಕತ್ವವನ್ನು ಹೊಂದಿದೆ ಎಂದು ನಂಬಲಾದ ಬಹುಮಹಡಿ ಕಟ್ಟಡಗಳ ಮೇಲೆ ಹ್ಯಾಮರ್ (ಹೈಲಿ ಅಗೈಲ್ ಮಾಡ್ಯುಲರ್ ಮ್ಯೂನಿಷನ್ ಎಕ್ಸ್ಟೆಂಡೆಡ್ ರೇಂಜ್) ಬಾಂಬ್ಗಳನ್ನು ಬಳಸಲಾಯಿತು.
ಕಾಮಿಕೇಜ್ ಡ್ರೋನ್ಗಳು ಎಂದೂ ಕರೆಯಲ್ಪಡುವ ಯುದ್ಧಸಾಮಗ್ರಿಗಳು ನೈಜ-ಸಮಯದ ಕಣ್ಗಾವಲು ಒದಗಿಸುವುದು ಮತ್ತು ಹೆಚ್ಚಿನ ಮೌಲ್ಯದ ಮೊಬೈಲ್ ಗುರಿಗಳು ಹೊರಹೊಮ್ಮುತ್ತಿದ್ದಂತೆ ಅವುಗಳನ್ನು ಹೊಡೆಯುವ ಉಭಯ ಪಾತ್ರವನ್ನು ನಿರ್ವಹಿಸಿವೆ.
"ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ, ಎಲ್ಲಾ ಕ್ಷಿಪಣಿಗಳು ತಮ್ಮ ಗೊತ್ತುಪಡಿಸಿದ ಗುರಿಗಳನ್ನು ಹೊಡೆದವು. ಪತ್ತೆಹಚ್ಚುವಿಕೆಯನ್ನು ತಪ್ಪಿಸಲು ಮತ್ತು ಅಚ್ಚರಿಯ ಅಂಶವನ್ನು ಹೆಚ್ಚಿಸಲು ದಾಳಿಗಳನ್ನು ಸಿಂಕ್ರೊನೈಸ್ ಮಾಡಲಾಯಿತು. ಯುಎವಿಗಳಿಂದ ಬಂದ ನೈಜ-ಸಮಯದ ದೃಶ್ಯಗಳು ಗುರಿ ಸೌಲಭ್ಯಗಳ ನಾಶವನ್ನು ದೃಢಪಡಿಸಿದ್ದು, ಭಾರತದ ಗುರಿ ನಿರ್ದಿಷ್ಟ ಕಾರ್ಯಾಚರಣೆಗಳ ಇತಿಹಾಸದಲ್ಲೇ ಇದು ಅತ್ಯಾಧುನಿಕ ಉಪಕರಣಗಳನ್ನು ಬಳಕೆ ಮಾಡಿರುವ ದಾಳಿ ಎಂದು ಹೇಳಲಾಗುತ್ತಿದೆ.
Advertisement