
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ, ಗೃಹ ಸಚಿವ ಅಮಿತ್ ಶಾ ಅವರು ಇಂದು ಭಾರತದ ಪಾಕಿಸ್ತಾನ ಗಡಿ ಮತ್ತು ದೇಶದ ವಿಮಾನ ನಿಲ್ದಾಣಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಸಭೆಗೂ ಕೆಲವು ಗಂಟೆಗಳ ಮೊದಲು, ಗಡಿ ಭದ್ರತಾ ಪಡೆ (BSF) ಜಮ್ಮುವಿನ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ನುಸುಳಲು ಯತ್ನಿಸುತ್ತಿದ್ದ ಏಳು ಉಗ್ರರನ್ನು ಕೊಂದು, ಪಾಕಿಸ್ತಾನ ರೇಂಜರ್ಗಳ ಪೋಸ್ಟ್ ಅನ್ನು ಸಹ ನಾಶಪಡಿಸಿದೆ ಎಂದು ಹೇಳಿತ್ತು.
ಭಾರತ-ಪಾಕಿಸ್ತಾನ ಗಡಿಯಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸುವುದರ ಜೊತೆಗೆ, ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಶಾ ಮಾಹಿತಿ ಪಡೆದರು. ಗಡಿ ಭದ್ರತಾ ಪಡೆ ಭಾರತ-ಪಾಕಿಸ್ತಾನ ಗಡಿಯನ್ನು ಕಾಯುತ್ತದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ದೇಶದ ವಿಮಾನ ನಿಲ್ದಾಣಗಳು, ಮೆಟ್ರೋ ಜಾಲಗಳು ಮತ್ತು ಇತರ ಪ್ರಮುಖ ಸ್ಥಾಪನೆಗಳ ಭದ್ರತೆಯ ಜವಾಬ್ದಾರಿಯನ್ನು ಹೊಂದಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ ಮತ್ತು ಬಿಎಸ್ಎಫ್, ಸಿಐಎಸ್ಎಫ್ ಮತ್ತು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ ಮಹಾನಿರ್ದೇಶಕರು ಷಾ ಅವರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಬುಧವಾರ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿತು. ಗುರುವಾರ ಪಾಕಿಸ್ತಾನವು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಯತ್ನಿಸಿತ್ತು. ಆದರೆ ಭಾರತೀಯ ಪಡೆಗಳು ಅದನ್ನು ವಿಫಲಗೊಳಿಸಿದ್ದವು. ಈ ಘಟನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
Advertisement