

ನವದೆಹಲಿ: ನಟಿ ತ್ರಿಷಾ ವಿರುದ್ಧ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಮಾಡಿದ್ದಾರೆ ಎನ್ನಲಾದ ‘ಸ್ತ್ರೀದ್ವೇಷಿ’ ಹಾಗೂ ಡಬಲ್ ಮೀನಿಂಗ್ ಹೇಳಿಕೆಗೆ ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ತಂಜಾವೂರಿನಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮವೊಂದರಲ್ಲಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಾತನಾಡುತ್ತಿದ್ದಾಗ ಸಭಿಕರು ‘ತ್ರಿಷಾ, ತ್ರಿಷಾ’ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಸ್ಟಾಲಿನ್ ನಗುತ್ತಾ ದ್ವಂದ್ವಾರ್ಥ ಬರುವ ರೀತಿಯಲ್ಲಿ ‘ನೀರು’ ಕುರಿತ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ಹೇಳಿಕೆ ನಟಿ ತ್ರಿಷಾ ಅವರನ್ನು ಉದ್ದೇಶಿಸಿಯೇ ಮಾಡಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಮಂಗಳವಾರ ಬೆಳಗ್ಗೆ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿ ರಾತ್ರಿ 8ರ ಸುಮಾರಿಗೆ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಸ್ಟಾಲಿನ್ ಬಿಡುಗಡೆ ಬಳಿಕ ಎನ್ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಖುಷ್ಬೂ ಸುಂದರ್ ತೀವ್ರ ವಾಗ್ದಾಳಿ ನಡೆಸಿದ್ದು, 'ಮಹಿಳೆಯ ವಿರುದ್ಧ ಇಂತಹ ಹೇಳಿಕೆ ನೀಡುವ ವ್ಯಕ್ತಿ ನಾಯಕ ಎಂದು ಕರೆದುಕೊಳ್ಳಲು ನಾಚಿಕೆಪಡಬೇಕು' ಎಂದು ಅವರು ಕಿಡಿಕಾರಿದ್ದಾರೆ.
ಆ ಪಕ್ಷದ ‘ಪರಂಪರೆ’ಯ ಭಾಗ
ಇದೇ ವೇಳೆ ಡಿಎಂಕೆಯಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಹೊಸದೇನಲ್ಲ. ಇದು ಆ ಪಕ್ಷದ ‘ಪರಂಪರೆ’ಯ ಭಾಗವಾಗಿದೆ. ತಾವು ಕೂಡ ಈ ಹಿಂದೆ ಹಲವು ಬಾರಿ ಲಿಂಗಾಧಾರಿತ ಹಾಗೂ ಮಹಿಳೆಯರನ್ನು ಅವಹೇಳನ ಮಾಡುವ ಹೇಳಿಕೆಗಳಿಗೆ ಗುರಿಯಾಗಿದ್ದಾಗಿ ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷೆ ಕೂಡ ಆಗಿರುವ ಖುಷ್ಬೂ ಹೇಳಿದರು.
“ನನಗೆ ಇದರಿಂದ ಯಾವುದೇ ಆಶ್ಚರ್ಯವಾಗಿಲ್ಲ. ಇಂತಹ ಸ್ತ್ರೀದ್ವೇಷಿ ಮತ್ತು ಲಿಂಗಭೇದದ ಹೇಳಿಕೆಗಳನ್ನು ನಾನು ಈ ಹಿಂದೆಯೂ ನೋಡಿದ್ದೇನೆ. ಡಿಎಂಕೆಯಲ್ಲಿ ಈ ಹಿಂದೆ ಮಹಿಳೆಯರನ್ನು ನಿಂದಿಸಿರುವುದನ್ನೂ ನೋಡಿದ್ದೇನೆ. ಅದೇ ಪರಂಪರೆಯನ್ನು ನೀವು ಮುಂದುವರಿಸುತ್ತಿದ್ದೀರಿ. ಉದಯನಿಧಿ ಸ್ಟಾಲಿನ್ ಅವರಿಂದ ಇಂತಹ ವರ್ತನೆಯನ್ನು ನಾನು ನಿರೀಕ್ಷಿಸಿರಲಿಲ್ಲ.
ಅವರು ಯುವ ನಾಯಕ, ಪ್ರತಿಪಕ್ಷ ನಾಯಕ, ಮಾಜಿ ಉಪಮುಖ್ಯಮಂತ್ರಿ ಹಾಗೂ ಯುವಜನ ವ್ಯವಹಾರಗಳ ಸಚಿವರಾಗಿದ್ದವರು. ಹಾಗಾಗಿ ಅವರು ವಿಭಿನ್ನವಾಗಿರುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಇಷ್ಟು ಅಸಭ್ಯ, ಕೀಳುಮಟ್ಟದ ಹಾಗೂ ಅಸಹ್ಯಕರ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಅದರಲ್ಲಿ ಕಿಂಚಿತ್ತೂ ಪಶ್ಚಾತ್ತಾಪ ಕಾಣುತ್ತಿಲ್ಲ” ಎಂದು ಖುಷ್ಬೂ ಹೇಳಿದರು.
‘ಮಹಿಳೆಯನ್ನು ನಿಂದಿಸುವ ಹಕ್ಕು ನಿಮಗೆ ಕೊಟ್ಟವರು ಯಾರು?’
ರಾಜಕೀಯ ಲಾಭಕ್ಕಾಗಿ ಮಹಿಳೆಯರನ್ನು ಎಷ್ಟು ದಿನ ಹೀಗೆ ನಿಂದಿಸುತ್ತೀರಿ ಎಂದು ಖುಷ್ಬೂ ಪ್ರಶ್ನಿಸಿದರು. ‘ಮಹಿಳೆಯನ್ನು ನಿಂದಿಸುವ ಹಕ್ಕು ನಿಮಗೆ ಕೊಟ್ಟವರು ಯಾರು?’ ಎಂದು ಖುಷ್ಬೂ ಗಟ್ಟಿಯಾಗಿ ಪ್ರಶ್ನಿಸಿದರು.
“ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯೊಬ್ಬರನ್ನು ನಿಂದಿಸುವ ಹಕ್ಕನ್ನು ನಿಮಗೆ ಕೊಟ್ಟವರು ಯಾರು? ಉದಯನಿಧಿ ಸ್ಟಾಲಿನ್ ಮಾತ್ರವಲ್ಲ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದು ನಡೆಯುತ್ತಿದೆ. ನಿಮ್ಮ ಮಾತನ್ನು ಸಾಬೀತುಪಡಿಸಲು ಮಹಿಳೆಯನ್ನು ಇನ್ನೆಷ್ಟು ದಿನ ಅವಮಾನಿಸುತ್ತೀರಿ? ಮಹಿಳೆಯ ಬಗ್ಗೆ ಇಷ್ಟು ಅಗೌರವದಿಂದ ಮಾತನಾಡಲು ಒಬ್ಬ ಪುರುಷ ಎಷ್ಟು ದುರ್ಬಲನಾಗಿರಬೇಕು? ಮಹಿಳೆಯ ಹೆಗಲ ಮೇಲೆ ಬಂದೂಕಿಟ್ಟು ‘ನಾನೇ ಬಲಿಷ್ಠ, ನಾನೇ ನಾಯಕ’ ಎಂದು ಹೇಳುವುದೇ? ನಿಮ್ಮನ್ನು ನಾಯಕ ಎಂದು ಕರೆದುಕೊಳ್ಳಲು ನಾಚಿಕೆಯಾಗಬೇಕು” ಎಂದು ಖುಷ್ಬೂ ಕಿಡಿಕಾರಿದರು.
ಈ ಹಿಂದೆ ಡಿಎಂಕೆ ನಾಯಕ ಸಾದಿಕ್ ಅವರು ತಮ್ಮನ್ನು ಹಾಗೂ ಇತರ ಮಹಿಳೆಯರನ್ನು ‘ಐಟಂ’ ಎಂದು ಕರೆದಿದ್ದ ಘಟನೆಯನ್ನು ನೆನಪಿಸಿಕೊಂಡ ಖುಷ್ಬೂ, ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂದು ಆರೋಪಿಸಿದರು. ಉದಯನಿಧಿ ಸ್ಟಾಲಿನ್ ಕೂಡ ಇದೇ ಮನಸ್ಥಿತಿಯ ವ್ಯಕ್ತಿ ಎಂದು ಅವರು ಟೀಕಿಸಿದರು.
‘ನಿಜವಾಗಿಯೂ ಗಂಡಸಾಗಿದ್ದರೆ, ಮಹಿಳೆಯನ್ನು ನಿಂದಿಸದೆ ಮಾತನಾಡಿ’
“ನೀವು ನಿಜವಾಗಿಯೂ ಗಂಡಸಾಗಿದ್ದರೆ, ನೀವು ನಾಯಕ ಎಂದು ಹೇಳಿಕೊಳ್ಳುತ್ತಿದ್ದರೆ, ಮಹಿಳೆಯನ್ನು ನಿಂದಿಸದೆ ಎದ್ದು ನಿಂತು ಮಾತನಾಡಿ. ಅದನ್ನು ಮಾಡಲು ನಿಮ್ಮಿಂದ ಸಾಧ್ಯವೇ ನೋಡೋಣ,” ಎಂದು ಖುಷ್ಬೂ ಸವಾಲು ಹಾಕಿದರು.
ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೇ ಡಿಎಂಕೆ ಸದಸ್ಯರು ಪಕ್ಷಕ್ಕೆ ಮತ ಹಾಕಿಲ್ಲ ಎಂದು ಆರೋಪಿಸಿದ ಅವರು, ಅವರ ಕುಟುಂಬದವರೂ ಡಿಎಂಕೆಗೆ ಮತ ಹಾಕಿಲ್ಲ ಎಂದು ಹೇಳಿದರು.
“ಇಲ್ಲಿ ಚಪ್ಪಾಳೆ ತಟ್ಟುತ್ತಿರುವುದು ಜನರಲ್ಲ. ಶಿಳ್ಳೆ ಹೊಡೆಯುತ್ತಿರುವುದು ಕೂಡ ಜನರಲ್ಲ. ತಮ್ಮದೇ ‘ಚಮಚಾಗಳು’ ಕೂಗಾಡಿ, ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆಯುತ್ತಿದ್ದಾರೆ. ಮಹಿಳೆಯೊಬ್ಬರನ್ನು ಅವಮಾನಿಸುವುದರಲ್ಲಿ ಅವರು ಸಂತೋಷ ಕಂಡುಕೊಳ್ಳುತ್ತಿರುವುದು ಅವರ ಸ್ತ್ರೀದ್ವೇಷಿ ಹಾಗೂ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಖುಷ್ಬೂ ಆರೋಪಿಸಿದರು.
‘ಸ್ಟಾಲಿನ್ ಬಂಧನವನ್ನು ಸ್ವಾಗತಿಸುತ್ತೇನೆ’
ಉದಯನಿಧಿ ಸ್ಟಾಲಿನ್ ಬಂಧನ ಅತಿಯಾದ ಕ್ರಮವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖುಷ್ಬೂ, ಮಹಿಳೆಯಾಗಿ ತಾವು ಈ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದರು. “ಮಹಿಳೆಯರನ್ನು ಯಾರೂ ರಾಜಕೀಯದ ದಾಳಗಳಾಗಿ ಅಥವಾ ಆಟಿಕೆಗಳಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ಮಹಿಳೆಯರ ಘನತೆಯನ್ನು ಕಾಪಾಡಬೇಕು ಎಂಬ ಸ್ಪಷ್ಟ ಸಂದೇಶ ಇದರಿಂದ ಹೋಗುತ್ತದೆ” ಎಂದು ಅವರು ಹೇಳಿದರು.
ಡಿಎಂಕೆ ಇದುವರೆಗೆ ಯಾರೂ ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿತ್ತು ಎಂದು ಆರೋಪಿಸಿದ ಖುಷ್ಬೂ, ಇತ್ತೀಚಿನ ಚುನಾವಣೆಯ ಫಲಿತಾಂಶ ಆ ಭ್ರಮೆಯನ್ನು ಒಡೆದುಹಾಕಿದೆ ಎಂದರು. “ಡಿಎಂಕೆ ಒಂದು ಕಲ್ಪಿತ ಜಗತ್ತಿನ ಗುಳ್ಳೆಯೊಳಗೆ ಬದುಕುತ್ತಿತ್ತು. ಯಾರೂ ತಮ್ಮನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ಈ ಚುನಾವಣೆ ಆ ಗುಳ್ಳೆಯನ್ನು ಒಡೆದುಹಾಕಿದೆ,” ಎಂದು ಖುಷ್ಬೂ ಸುಂದರ್ ಹೇಳಿದರು.