

ಕಠ್ಮಂಡು/ನವದೆಹಲಿ: ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನೆರೆರಾಷ್ಟ್ರ ನೇಪಾಳಕ್ಕೆ ಭಾರತ ನೆರವು ನೀಡುತ್ತಿದ್ದು, ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ 2ನೇ ವಿಮಾನವನ್ನು ರವಾನಿಸಿದೆ.
ಭಾರತೀಯ ವಾಯುಪಡೆಯ ಮಿಲಿಟರಿ ಸಾರಿಗೆ ವಿಮಾನದ ಮೂಲಕ ಒಟ್ಟು 37.5 ಟನ್ ತೂಕದ ಮಾನವೀಯ ನೆರವು, ವಿಪತ್ತು ಪರಿಹಾರ (HADR) ಸಾಮಗ್ರಿಗಳು, ತುರ್ತು ಔಷಧಿಗಳು ಹಾಗೂ ಸಿದ್ಧಪಡಿಸಿದ ಆಹಾರ ಪೊಟ್ಟಣಗಳನ್ನು ಕಳುಹಿಸಿಕೊಡಲಾಗಿದೆ.
ನೇಪಾಳ-ಟಿಬೆಟ್ ಗಡಿ ಭಾಗದಲ್ಲಿ ಉಂಟಾದ ಹಠಾತ್ ಜಲಪ್ರಳಯಕ್ಕೆ ಕನಿಷ್ಠ ಈ ವರೆಗೂ 165ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ. ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಭಾರತವು ನೆರವಿನ ಹಸ್ತ ಚಾಚಿದೆ.
ನೆರೆ ಪೀಡಿತ ನೇಪಾಳಕ್ಕೆ ಭಾರತವು ಗುರುವಾರ ಎರಡನೇ ಹಂತದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. 37.5 ಟನ್ಗಳಷ್ಟು ಮಾನವೀಯ ನೆರವು, ಔಷಧಗಳು ಹಾಗೂ ಆಹಾರ ಪೊಟ್ಟಣಗಳನ್ನು ಹೊತ್ತ ಭಾರತೀಯ ಸೇನೆಯ ವಿಮಾನ ನೇಪಾಳದತ್ತ ಪ್ರಯಾಣ ಬೆಳೆಸಿದೆ.
ಈ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬುಧವಾರ 10 ಟನ್ಗಳಷ್ಟು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಸಾಮಗ್ರಿಗಳನ್ನು ಕಳುಹಿಸಿದ ಬಳಿಕ ಇದೀಗ ಎರಡನೇ ವಿಮಾನ ಹೊರಟಿದೆ ಎಂದು ಅವರು ತಿಳಿಸಿದ್ದಾರೆ.
ನೇಪಾಳಕ್ಕೆ 37.5 ಟನ್ಗಳಷ್ಟು HADR ಸಾಮಗ್ರಿ, ಔಷಧಗಳು ಮತ್ತು ಆಹಾರ ಪೊಟ್ಟಣಗಳನ್ನು ಹೊತ್ತ ಎರಡನೇ ವಿಮಾನ ಇದೀಗ ಹೊರಟಿದೆ ಎಂದು ಹೇಳಿದ್ದಾರೆ.
ನೇಪಾಳದ ಅಧಿಕಾರಿಗಳೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದ್ದು, ನಡೆಯುತ್ತಿರುವ ಪರಿಹಾರ ಕಾರ್ಯಗಳಿಗೆ ಭಾರತ ಬಲವಾದ ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಟಿಬೆಟ್ ಗಡಿಯುದ್ದಕ್ಕೂ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದಾಗಿ ನೇಪಾಳದಲ್ಲಿ ಕನಿಷ್ಠ 165 ಮಂದಿ ಮೃತಪಟ್ಟಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಪರಿಹಾರ ನೆರವನ್ನು ಹೆಚ್ಚಿಸಿದೆ.
ಮೊದಲ ಹಂತದ ನೆರವಿನಲ್ಲಿ ತಾತ್ಕಾಲಿಕ ಆಶ್ರಯ ವ್ಯವಸ್ಥೆಗಳು, ಹೊದಿಕೆಗಳು, ನೈರ್ಮಲ್ಯ ಕಿಟ್ಗಳು, ಸೌರ ದೀಪಗಳು ಮತ್ತು ಔಷಧಗಳನ್ನು ಕಳುಹಿಸಲಾಗಿತ್ತು.
ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿ, ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದ ಬಳಿಕ ಈ ನೆರವು ರವಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ಕಳುಹಿಸುವ ನಿರೀಕ್ಷೆಯಿದೆ.