

ನವದೆಹಲಿ: ಜಲಮಂಡಳಿ ಅಗೆದಿದ್ದ ಹೊಂಡಕ್ಕೆ ಬಿದ್ದು, ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ದೆಹಲಿಯ ಜನಕಪುರಿಯಲ್ಲಿ ಶುಕ್ರವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಕೈಲಾಶಪುರಿಯ ನಿವಾಸಿ ಕಮಲ್ ಎಂದು ಗುರುತಿಸಲಾಗಿದೆ, ಇವರು ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಗಿನ ಜಾವ ಕಮಲ್ ಅವರ ಮೃತದೇಹವು ಅವರ ಮೋಟಾರ್ಸೈಕಲ್ ಜೊತೆಯಲ್ಲೇ ಗುಂಡಿಯೊಳಗೆ ಪತ್ತೆಯಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಜಲಮಂಡಳಿ ರಸ್ತೆಯಲ್ಲಿ ಗುಂಡಿಯನ್ನು ಅಗೆದಿದ್ದು, ಸುತ್ತಲೂ ಬ್ಯಾರಿಕೇಡ್ ಹಾಕಿರುವುದಾಗಿ ತಿಳಿಸಿದೆ. ಆದರೆ, ಕಮಲ್ ಅವರ ಕುಟುಂಬಸ್ಥರು ಸಾವಿಗೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ಗುರುವಾರ ತಡರಾತ್ರಿ ರೋಹಿಣಿಯಲ್ಲಿರುವ ತನ್ನ ಕಚೇರಿಯಿಂದ ಕಮಲ್ ಮನೆಗೆ ಹಿಂತಿರುಗುತ್ತಿದ್ದು, ನಮ್ಮೊಂದಿಗೆ ಸಂಪರ್ಕದಲ್ಲಿದ್ದ. ಆದರೆ ಮನೆಗೆ ವಾಪಸ್ಸಾಗದಿದ್ದಾಗ ಆತಂಕಗೊಂಡು ಹುಡುಕಾಟ ಆರಂಭಿಸಿದ್ದೆವು. ರಾತ್ರಿಯಿಡೀ ಹುಡುಕಾಡಿದ್ದೆವು. ಜನಕಪುರಿ, ಸಾಗರ್ಪುರ, ವಿಕಾಸ್ ಪುರಿ ಮತ್ತು ರೋಹಿಣಿ ಸೇರಿದಂತೆ ಹಲವಾರು ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದ್ದೆವು.
ಶುಕ್ರವಾರ ಬೆಳಿಗ್ಗೆ 7.30ರ ಸುಮಾರಿಗೆ ಕಮಲ್ ಶವವನ್ನು ರಸ್ತೆ ಗುಂಡಿಯಿಂದ ಹೊರತೆಗೆಯಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಕಮಲ್ ಸಾವಿಗೆ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಆರೋಪ ಬೆನ್ನಲ್ಲೇ ದೆಹಲಿ ಸರ್ಕಾರ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದೆ.
ಈ ಪ್ರಕರಣದಲ್ಲಿ ಕುಟುಂಬದವರು ಮಾಡಿದ ಆರೋಪಗಳು ಸೇರಿದಂತೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಿ, ಸತ್ಯಾಸತ್ಯತೆಗಳನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಈ ನಡುವೆ, ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ದೆಹಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ತೆರೆದಿರುವ ನಿರ್ಮಾಣ ಗುಂಡಿಗಳಿಂದ ಸಂಭವಿಸಿದ ಹಿಂದಿನ ಘಟನೆಗಳನ್ನು ಉಲ್ಲೇಖಿಸಿ, ಇದು ನಿರ್ಲಕ್ಷ್ಯದ ಪರಿಣಾಮ ಎಂದು ಆರೋಪಿಸಿದ್ದಾರೆ.
"ಈ ದುರಂತ ಸಂಭವನೀಯವಾಗಿತ್ತು. ದೂರುಗಳ ಹೊರತಾಗಿಯೂ, ಜೀವಹಾನಿಯನ್ನು ತಡೆಯಲು ಬ್ಯಾರಿಕೇಡ್ ಹಾಕಿರಲಿಲ್ಲ. ಮೃತ ವ್ಯಕ್ತಿಯ ಕುಟಂಬ ಹಾಗೂ ಆತನ ಪುಟ್ಟ ಮಕ್ಕಳು ಆತನಿಗಾಗಿ ಕಾಯುತ್ತಿತ್ತು. ಆದರೀಗ ಅವರು ಜೀವನಪೂರ್ತಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಜನವರಿ 16 ರಂದು, ನೋಯ್ಡಾದ ಸೆಕ್ಟರ್ 150 ರಲ್ಲಿ, ಎಂಜಿನಿಯರ್ ಯುವರಾಜ್ ಅವರ ಕಾರು ನೆಲಮಾಳಿಗೆಗಾಗಿ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದಿತ್ತು. ಭಾರೀ ಮಂಜಿನಿಂದಾಗಿ, ಚಾಲಕನಿಗೆ ರಸ್ತೆ ಕಂಡಿರಲಿಲ್ಲ. ಯುವರಾಜ್ ಸುಮಾರು ಎರಡು ಗಂಟೆಗಳ ಕಾಲ ಸಹಾಯಕ್ಕಾಗಿ ಬೇಡಿಕೊಂಡರು, ಆದರೆ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
Advertisement