ಹೈದರಾಬಾದ್ ಬೆಸ್ಟ್ ಸಿಟಿ; ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಂಗಳೂರು ನಲುಗಿ ಹೋಗಿದೆ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ; Video

ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ನಿವಾಸವಾಗಿರುವ ಮತ್ತು ಸುಪ್ರೀಂ ಕೋರ್ಟ್‌ ಸೇರಿದಂತೆ ಪ್ರಮುಖ ಸಂಸ್ಥೆಗಳು ಇರುವ ದೆಹಲಿ ಈಗ ಮಿತಿಮೀರಿದ ಮಾಲಿನ್ಯ ಸಂಕಷ್ಟವನ್ನು ಎದುರಿಸುತ್ತಿದೆ ಎಂದರು.
Telangana CM Revanth Reddy
ತೆಲಂಗಾಣ ಸಿಎಂ ರೇವಂತ್ ರೆಡ್ಡಿ
Updated on

ಹೈದರಾಬಾದ್: ದೆಹಲಿ ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಉಂಟಾಗಿರುವ ತೀವ್ರ ಮಾಲಿನ್ಯವನ್ನು ಉಲ್ಲೇಖಿಸಿ, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮುಸಿ ನದಿಯ ರಿವರ್‌ಫ್ರಂಟ್ ಅಭಿವೃದ್ಧಿ ಯಾವುದೇ ಪರಿಸ್ಥಿತಿಯಲ್ಲೂ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ್ದಾರೆ.

ಪುನರುಜ್ಜೀವನಗೊಳಿಸಲಾದ ನಲ್ಲಾ ಚೆರವು ಕೆರೆಯನ್ನು ಉದ್ಘಾಟಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೇವಂತ್ ರೆಡ್ಡಿ, ಕೆಲವರಿಗೆ ಅಸಮಾಧಾನವಾಗಿದ್ದರೂ ನಗರದಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದರು.

ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ನಿವಾಸವಾಗಿರುವ ಮತ್ತು ಸುಪ್ರೀಂ ಕೋರ್ಟ್‌ ಸೇರಿದಂತೆ ಪ್ರಮುಖ ಸಂಸ್ಥೆಗಳು ಇರುವ ದೆಹಲಿ ಈಗ ಮಿತಿಮೀರಿದ ಮಾಲಿನ್ಯ ಸಂಕಷ್ಟವನ್ನು ಎದುರಿಸುತ್ತಿದೆ ಎಂದರು.

ಮುಂಬೈ ಮತ್ತು ಚೆನ್ನೈ ನಗರಗಳನ್ನು ಉಲ್ಲೇಖಿಸಿದ ರೇವಂತ್ ರೆಡ್ಡಿ, ಈ ನಗರಗಳು ಎಷ್ಟೊಂದು ಸೂಕ್ಷ್ಮವಾಗಿವೆ ಎಂದರೆ ಅಲ್ಲಿ ಒಂದು ಬಾರಿ ಮಳೆ ಬಂದರೂ ವಸತಿ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್‌ಗಳು ತಕ್ಷಣವೇ ನೀರಿನಿಂದ ತುಂಬಿಬಿಡುತ್ತವೆ ಎಂದರು.

ಬೆಂಗಳೂರಿನಲ್ಲಿ ತೀವ್ರ ಸಂಚಾರ ದಟ್ಟಣೆ

ಬೆಂಗಳೂರಿನ ಟ್ರಾಫಿಕ್ ದಟ್ಟಣೆಯನ್ನು ಉಲ್ಲೇಖಿಸಿದ ಅವರು, ಕೆಂಪೇಗೌಡ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತಲುಪಲು ಎಷ್ಟು ಸಮಯ ಬೇಕು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇಂದು ಎಲ್ಲಾ ದೊಡ್ಡ ನಗರಗಳು ಅಕ್ರಮ ಅತಿಕ್ರಮಣಗಳ ಕಾರಣದಿಂದ ಒಂದಲ್ಲೊಂದು ಸಮಸ್ಯೆಯಿಂದ ಬಳಲುತ್ತಿವೆ. ಮಹಾನಗರಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಹೈದರಾಬಾದ್ ಮಾತ್ರ ಸುರಕ್ಷಿತ ನಗರವಾಗಿದೆ. ಇದು ಸುಂದರ ನಗರ. ನಾವು ಇದನ್ನು ಇನ್ನಷ್ಟು ಸುಂದರಗೊಳಿಸಿ ಮುಸಿ ನದಿಯನ್ನು ಪುನರುಜ್ಜೀವನಗೊಳಿಸಬೇಕು. ಮುಸಿ ನದಿಯ ಪುನರುಜ್ಜೀವನಕ್ಕೆ ವಿರೋಧಿಸುವವರು ನಗರಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.

ಈಗಲೇ ಮುಸಿ ನದಿಯನ್ನು ಪುನರುಜ್ಜೀವನಗೊಳಿಸದಿದ್ದರೆ ಮುಂದಿನ ಪೀಳಿಗೆಗಳು ಇಂದಿನ ನಾಯಕರನ್ನು ಕ್ಷಮಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ಅಹಮದಾಬಾದ್‌ನ ಸಬರ್ಮತಿ ರಿವರ್‌ಫ್ರಂಟ್, ದೆಹಲಿಯ ಯಮುನಾ ರಿವರ್‌ಫ್ರಂಟ್ ಮತ್ತು ಉತ್ತರ ಪ್ರದೇಶದ ಗಂಗಾ ರಿವರ್‌ಫ್ರಂಟ್‌ಗಳಂತಹ ನಗರ ಪರಿವರ್ತನೆಗಳನ್ನು ಅವರು ಉದಾಹರಣೆಯಾಗಿ ನೀಡಿದರು.

“ಅಲ್ಲಿ ನದಿಗಳನ್ನು ಪುನರುಜ್ಜೀವನಗೊಳಿಸಿ ‘ರಿವರ್ ಎಕಾನಮಿ’ ನಿರ್ಮಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಾವು ಅದನ್ನು ಏಕೆ ಮಾಡಬಾರದು? ಮುಸಿ ರಿವರ್‌ಫ್ರಂಟ್ ಅಭಿವೃದ್ಧಿಪಡಿಸಲು ಏಕೆ ಸಾಧ್ಯವಾಗಬಾರದು ಎಂದು ಪ್ರಶ್ನಿಸಿದರು.

ಪರ್ಯಾಯ ವಸತಿ ಯೋಜನೆ

ಮುಸಿ ನದಿ ಪುನರುಜ್ಜೀವನ ಯೋಜನೆಯ ಸಂದರ್ಭದಲ್ಲಿ ಬಡ ಕುಟುಂಬಗಳು ಮನೆ ಕಳೆದುಕೊಂಡರೆ ಅವರಿಗೆ ಪರಿಹಾರ ಮತ್ತು ಪರ್ಯಾಯ ವಸತಿ ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಪ್ರಸ್ತುತ 1.34 ಕೋಟಿ ಜನಸಂಖ್ಯೆಯಿರುವ ಹೈದರಾಬಾದ್ ನಗರವು ವಾಸಿಸಲು ಅನುಕೂಲಕರವಾಗಿಯೂ ಸುಂದರವಾಗಿಯೂ ಉಳಿಯಲು ಮೂಲಸೌಕರ್ಯಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ರೇವಂತ್ ರೆಡ್ಡಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com