

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿ ದಿನಗಳ ಉರುಳಿದರೂ ಬಹುದೊಡ್ಡ ಪಕ್ಷವಾಗಿರುವ ನಟ ವಿಜಯ್ ರ ತಮಿಳಗ ವೇಟ್ರಿ ಕಳಗಂ (ಟಿವಿಕೆ)ಗೆ ಸರ್ಕಾರ ರಚನೆ ಮಾಡಲು ಮಾತ್ರ ಸಾಧ್ಯವಾಗುತ್ತಿಲ್ಲ.
ಮೂರು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದ ರಾಜಕೀಯ ಗೊಂದಲಕ್ಕೆ ತೆರೆ ಎಳೆಯುವಂತೆ, ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ವಿಥುತಲೈ ಚಿರುಥೈಗಳ್ ಕಚ್ಚಿ (ವಿಸಿಕೆ) ಶನಿವಾರ ಬೆಂಬಲ ಘೋಷಿಸುವ ನಿರೀಕ್ಷೆಯಿದೆ. ಈ ಬೆಳವಣಿಗೆಯಿಂದ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕುವ ಸಾಧ್ಯತೆ ನಿರ್ಮಾಣವಾಗಿದೆ.
ಚುನಾವಣೆಯಲ್ಲಿ 108 ಸ್ಥಾನಗಳನ್ನು ಹೊಂದಿರುವ ಟಿವಿಕೆ ಪಕ್ಷಕ್ಕೆ ಅಗತ್ಯ ಸಂಖ್ಯಾಬಲಕ್ಕಾಗಿ ಇನ್ನೂ 10 ಶಾಸಕರ ಬೆಂಬಲ ಅಗತ್ಯವಿದ್ದು, ಈಗಾಗಲೇ ಕಾಂಗ್ರೆಸ್ ತನ್ನ 5 ಶಾಸಕರ ಬೆಂಬಲ ಘೋಷಣೆ ಮಾಡಿದೆ. ಇದಲ್ಲದೆ ಸಿಪಿಐ ಬೆಂಬಲ ಕೂಡ ವಿಜಯ್ ಗೆ ಸಿಕ್ಕಿದೆ ಆದಾಗ್ಯೂ ಇನ್ನೂ ಇಬ್ಬರು ಶಾಸಕರ ಅಗತ್ಯತೆ ಬೇಕಿದ್ದು ಇದೇ ಕಾರಣಕ್ಕೆ ಇದೀಗ ವಿಥುತಲೈ ಚಿರುಥೈಗಳ್ ಕಚ್ಚಿ (ವಿಸಿಕೆ) ಕಿಂಗ್ ಮೇಕರ್ ಆಗಿ ಹೊರಹೊಮ್ಮಿದೆ.
ಬಹುಮತಕ್ಕೆ ರಾಜ್ಯಪಾಲರ ಒತ್ತಡ
ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚಿಸಲು ಅಗತ್ಯ ಬಹುಮತದ ಸಾಕ್ಷ್ಯ ಒದಗಿಸುವಂತೆ ರಾಜ್ಯಪಾಲರು ಒತ್ತಾಯಿಸುತ್ತಿರುವ ಕಾರಣ, ಟಿವಿಕೆಗೆ ಇನ್ನೂ ಸರ್ಕಾರ ರಚಿಸಲು ಅನುಮತಿ ನೀಡಲಾಗಿಲ್ಲ. ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೆ ಮುನ್ನ ಬಹುಮತ ಸಾಬೀತುಪಡಿಸಬೇಕೆಂದು ರಾಜ್ಯಪಾಲರು ಹೇಳಿದ್ದಾರೆ.
ಸೋಮವಾರ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ವಿಜಯ್ ಈಗಾಗಲೇ ಮೂರು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಡಿಎಂಕೆ ನೇತೃತ್ವದ ಮೈತ್ರಿಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷ ಐದು ಸ್ಥಾನಗಳನ್ನು ಗೆದ್ದು, ಟಿವಿಕೆಗೆ ಬೆಂಬಲ ನೀಡಿತ್ತು. ಗುರುವಾರ ಎಡಪಂಥೀಯ ಪಕ್ಷಗಳು ಕೂಡ ವಿಜಯ್ಗೆ ಬೆಂಬಲ ಘೋಷಿಸಿ, ಟಿವಿಕೆ ಸರ್ಕಾರ ರಚಿಸುವ ಸಾಧ್ಯತೆಯನ್ನು ಮತ್ತಷ್ಟು ಬಲಪಡಿಸಿತು.
ಯೂಟರ್ನ್ ಹೊಡೆದ ವಿಸಿಕೆ
ಎಡಪಂಥೀಯ ಪಕ್ಷಗಳ ದೀರ್ಘಕಾಲದ ಮಿತ್ರ ಪಕ್ಷವಾದ ವಿಸಿಕೆ ಸಹ ಬೆಂಬಲ ಘೋಷಿಸಿತ್ತು. ಆದರೆ ಅಧಿಕೃತ ಬೆಂಬಲ ಪತ್ರವನ್ನು ನೀಡದ ಕಾರಣ, ಶನಿವಾರ ನಿಗದಿಯಾಗಿದ್ದ ಪ್ರಮಾಣವಚನ ಸಮಾರಂಭವನ್ನು ರಾಜ್ಯಪಾಲರು ರದ್ದುಪಡಿಸಿದರು. ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಳವನ್ ಈಗಾಗಲೇ ತಮ್ಮ ಪಕ್ಷದ ನಿರ್ಧಾರವು ಎಡಪಂಥೀಯ ಪಕ್ಷಗಳ ನಿರ್ಧಾರಕ್ಕೆ ಅನುಗುಣವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಎಡಪಂಥೀಯ ಪಕ್ಷಗಳ ಹಿರಿಯ ನಾಯಕರನ್ನು ಭೇಟಿಯಾದ ವಿಜಯ್, ಶನಿವಾರ ತಿರುಮಾವಳವನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ನಿರೀಕ್ಷಿತ ಸಭೆಯ ಹಿನ್ನೆಲೆಯಲ್ಲಿ ಅಶೋಕ್ ನಗರದಲ್ಲಿರುವ ವಿಸಿಕೆ ಕಚೇರಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಸಂಸ್ಥಾಪಕರ ಆಪ್ತ ಸಹಾಯಕನಾಗಿರುವ ವಿಸಿಕೆ ನಾಯಕ ವನ್ನಿಯರಸು, ಪಕ್ಷವು ಅಧಿಕಾರದಲ್ಲಿ ಪಾಲು ಪಡೆಯಲು ಆಸಕ್ತಿ ಹೊಂದಿದೆ ಎಂಬ ಸ್ಪಷ್ಟ ಸೂಚನೆ ನೀಡಿದರು. ವಿಜಯ್ ಕೂಡ ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ವಿಸಿಕೆ ಪಕ್ಷವು ತನ್ನ ಅಂತಿಮ ನಿರ್ಧಾರವನ್ನು ಇಂದು ಸಂಜೆ ವೇಳೆಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪಕ್ಷವು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ: ವಿಸಿಕೆ ನಾಯಕ
ಈ ಎಲ್ಲ ಬೆಳವಣಿಗೆಗಳ ನಡುವೆಯೇ ತಮ್ಮ ಪಕ್ಷವು ಕೇಂದ್ರ ಸ್ಥಾನವನ್ನು ಹೊಂದಿರುವ ಮಹತ್ವದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಸಿಕೆ ನಾಯಕ ವನ್ನಿಯರಸು ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ನಮ್ಮನ್ನು ಮೂಲೆಗೆ ತಳ್ಳಲು ಅಥವಾ ಪ್ರತ್ಯೇಕಿಸಲು ಯತ್ನಿಸಿದರೂ ನಾವು ಕೇಂದ್ರ ಶಕ್ತಿಯಾಗಿ ಹೊರಹೊಮ್ಮುತ್ತೇವೆ. ವಿಸಿಕೆ ನಿರ್ಣಾಯಕ ಪಾತ್ರವಹಿಸಲಿದೆ ಎಂಬ ಸಂದೇಶ ನೀಡಿದ್ದಾರೆ.
ಇದೇ ವೇಳೆ, ಪಿಎಂಕೆ ಸಂಸ್ಥಾಪಕ ಎಸ್. ರಾಮದಾಸ್ ಶನಿವಾರ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.
“ಜನರ ತೀರ್ಪಿಗೆ ಎಲ್ಲರೂ ತಲೆಬಾಗುವುದು ಕರ್ತವ್ಯ. ಈ ಪ್ರಕ್ರಿಯೆಯನ್ನು ವಿಳಂಬಗೊಳಿಸಬಾರದು. ತಕ್ಷಣವೇ ಆಹ್ವಾನ ನೀಡಬೇಕು,” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಸಿಕೆ ಕೂಡ ಟಿವಿಕೆಗೆ ಬೆಂಬಲ ನೀಡಬೇಕು ಎಂದು ರಾಮದಾಸ್ ಮನವಿ ಮಾಡಿದರು.
“ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನನ್ನ ಕಿರಿಯ ಸಹೋದರ ತಿರುಮಾವಳವನ್ ಅವರು ತಕ್ಷಣ ಟಿವಿಕೆಗೆ ಬೆಂಬಲ ನೀಡಬೇಕು ಎಂದು ವಿನಂತಿಸುತ್ತೇನೆ. ಅದರಿಂದ ಅವರು ತಮಿಳುನಾಡು ಜನರ ಭಾವನೆಗಳಿಗೆ ಗೌರವ ತೋರಿಸಿ ಹೊಸ ಸರ್ಕಾರ ರಚನೆಗೆ ನೆರವಾಗುತ್ತಾರೆ,” ಎಂದು ಅವರು ಹೇಳಿದರು.
Advertisement