

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ನಡೆದ ರಾಜಕೀಯ ಗದ್ದಲದ ನಡುವೆಯೇ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಡಿಎಂಕೆ ಶಾಸಕರೊಬ್ಬರಿಗೆ ನೆರವಾದ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೆಲ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದ್ದ ನಟ-ರಾಜಕಾರಣಿ ವಿಜಯ್, ಸೋಮವಾರ ಸದನದಲ್ಲಿ ತೋರಿದ ಈ ಮಾನವೀಯ ನಡೆಯ ಮೂಲಕ ಗಮನ ಸೆಳೆದರು.
ಸಿಎಂ ವಿಜಯ್ ಅವರ ಈ ರಾಜಕೀಯ ಸೌಜನ್ಯಕ್ಕೆ ಸಚಿವರು ಹಾಗೂ ಸದನದ ಸದಸ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಿಧಾನಸಭೆಯಲ್ಲಿ ಸ್ಪೀಕರ್ ಎದುರು ಡಿಎಂಕೆ ಶಾಸಕರು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಹಾಗೂ ತಿರುವಯ್ಯಾರು ಕ್ಷೇತ್ರದ ಡಿಎಂಕೆ ಶಾಸಕ ದುರೈ ಚಂದ್ರಶೇಖರ್ ಅವರಿಗೆ ಸಿಎಂ ವಿಜಯ್ ಸಹಾಯ ಮಾಡಿದರು.
‘ಎದ್ದು ಬರಲಾಗುತ್ತಿಲ್ಲ’ ಎಂದ ಶಾಸಕ
ಮುಖ್ಯಮಂತ್ರಿ ವಿಜಯ್ ಅವರ ಭಾಷಣಕ್ಕೆ ಪ್ರತಿಕ್ರಿಯಿಸಲು ಅವಕಾಶ ನೀಡಬೇಕು ಎಂದು ಡಿಎಂಕೆ ಶಾಸಕರು ಒತ್ತಾಯಿಸಿದ್ದರು. ಆದರೆ ಮಾತನಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಅವರು ಸದನದಿಂದ ವಾಕ್ಔಟ್ ಮಾಡಲು ನಿರ್ಧರಿಸಿದರು.
ಎಲ್ಲ ಡಿಎಂಕೆ ಶಾಸಕರು ಹೊರಗೆ ತೆರಳುತ್ತಿದ್ದಾಗ ತಿರುವಯ್ಯಾರು ಶಾಸಕ ದುರೈ ಚಂದ್ರಶೇಖರ್ ಮಾತ್ರ ತಮ್ಮ ಆಸನದಲ್ಲೇ ಕುಳಿತಿದ್ದರು. ಇದನ್ನು ಗಮನಿಸಿದ ಸಿಎಂ ವಿಜಯ್, ಇತರ ಡಿಎಂಕೆ ನಾಯಕರೊಂದಿಗೆ ಅವರು ಏಕೆ ಹೊರಗೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದರು ಎಂದು ಪಿಟಿಐ ವರದಿ ಮಾಡಿದೆ. ಅದಕ್ಕೆ ಚಂದ್ರಶೇಖರ್ ಅವರು ತಮಗೆ ಆಸನದಿಂದ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಿಸಿದರು.
ಇದನ್ನು ಕೇಳಿದ ವಿಜಯ್, “ಏನಂತೀರಿ, ಎದ್ದು ನಿಲ್ಲಲು ಆಗುತ್ತಿಲ್ಲವೇ?” ಎಂದು ಕೇಳಿದ್ದಾರೆ. ಬಳಿಕ ತಮ್ಮ ಆಸನದಿಂದ ಎದ್ದು ಬಂದ ಮುಖ್ಯಮಂತ್ರಿ ವಿಜಯ್, ಚಂದ್ರಶೇಖರ್ ಅವರಿಗೆ ಕೈ ನೀಡಿ ಅವರನ್ನು ಎದ್ದು ನಿಲ್ಲಲು ಸಹಾಯ ಮಾಡಿದರು. ಸಿಎಂ ವಿಜಯ್ ಅವರಿಗೆ ದುರೈ ಚಂದ್ರಶೇಖರ್ ಕೈಮುಗಿದು ಧನ್ಯವಾದ ಸಲ್ಲಿಸಿದ ಬಳಿಕ ಡಿಎಂಕೆ ಶಾಸಕರೊಂದಿಗೆ ವಾಕ್ಔಟ್ನಲ್ಲಿ ಸೇರಿಕೊಂಡರು.
ವಿಜಯ್ ನಡೆಗೆ ಸದನದಲ್ಲಿ ಮೇಜು ಕುಟ್ಟಿ ಮೆಚ್ಚುಗೆ
ಸಿಎಂ ವಿಜಯ್ ಮತ್ತು ಡಿಎಂಕೆ ಶಾಸಕರ ನಡುವಿನ ಈ ಸಂಭಾಷಣೆ ಸದನದಲ್ಲಿದ್ದ ಸಚಿವರು ಹಾಗೂ ಇತರ ಸದಸ್ಯರ ಗಮನ ಸೆಳೆಯಿತು.
ವಿಜಯ್ ಅವರು ವಿರೋಧ ಪಕ್ಷದ ಶಾಸಕರಿಗೆ ನೆರವಾದ ರೀತಿಯನ್ನು ಸದಸ್ಯರು ಮೆಚ್ಚಿಕೊಂಡಿದ್ದು, ಮೇಜು ಕುಟ್ಟಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಜಯ್ ಅವರು ಚಂದ್ರಶೇಖರ್ ಅವರನ್ನು ಎದ್ದು ನಿಲ್ಲಲು ನೆರವಾಗುವ ದೃಶ್ಯ ವೈರಲ್ ಆಗಿದೆ.
ಏನ್ರೋ ನಡೀತಿದೆ? ಎಂದ ಉದಯನಿಧಿ
ಇನ್ನು ಇದೇ ವೇಳೆ ಸದನದ ಬಾವಿಯಲ್ಲಿ ಇತರೆ ಶಾಸಕರೊಂದಿಗೆ ನಿಂತಿದ್ದ ಡಿಎಂಕೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಕೂಡ ಇದನ್ನು ಗಮನಿಸಿ ಏನ್ರೋ ನಡೀತಿದೆ? ಎಂದು ಕೇಳಿ ಹಾಸ್ಯ ಚಟಾಕಿ ಹಾರಿಸಿದರು.