ವಿಧಾನಸಭಾ ಚುನಾವಣೆ 2023: ಬೆಂಗಳೂರಿನಲ್ಲಿ ಉತ್ತಮ ಸಾಧನೆ ಮಾಡಿ, ನಂತರ ರಾಜ್ಯದತ್ತ ಗಮನಹರಿಸಲು ಬಿಜೆಪಿ ಚಿಂತನೆ!

ಗುಜರಾತ್‌ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿರುವ ಬಿಜೆಪಿಯು ಇದೀಗ ಅದೇ ಫಲಿತಾಂಶವನ್ನು ಕರ್ನಾಟಕದಿಂದಲೂ ಪಡೆಯುವತ್ತ ಗಮನಹರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗುಜರಾತ್‌ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿರುವ ಬಿಜೆಪಿಯು ಇದೀಗ ಅದೇ ಫಲಿತಾಂಶವನ್ನು ಕರ್ನಾಟಕದಿಂದಲೂ ಪಡೆಯುವತ್ತ ಗಮನಹರಿಸಿದೆ.

ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಬೆಂಗಳೂರು ಪ್ರಮುಖ ಪ್ರದೇಶವಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೆಂಗಳೂರಿನಲ್ಲಿ ಪಕ್ಷವು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು 28 ಸ್ಥಾನಗಳಲ್ಲಿ ಉತ್ತಮ ಸಾಧನೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಸಾಧನೆ ಮಾಡುವ ನಿರೀಕ್ಷೆಯನ್ನು ರಾಜ್ಯ ಬಿಜೆಪಿ ಇಟ್ಟುಕೊಂಡಿದೆ. ಇದರಂತೆ ಮೊದಲಿಗೆ ಬೆಂಗಳೂರಿನಲ್ಲಿ ಉತ್ತಮ ಸಾಧನೆ ಮಾಡಿ, ನಂತರ ರಾಜ್ಯದತ್ತ ಗಮನಹರಿಸಲು ಮುಂದಾಗಿದೆ.

ಚುನಾವಣಾ ಸಿದ್ಧತೆಯಂತೆ ರಾಜ್ಯ ಬಿಜೆಪಿಯ ಜನಸಂಕಲ್ಪ ಯಾತ್ರೆಯು ಇದೇ ಭಾನುವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಆರಂಭವಾಗುತ್ತಿದೆ.

ಈ ಸಂಬಂಧ ಸಿರೂರು ಪಾರ್ಕ್‌ನಲ್ಲಿ ಸಭೆ ನಡೆಯಲಿದೆ ಎಂದು ಚಿಕ್ಕಪೇಟೆ ಮಾಜಿ ಕಾರ್ಪೊರೇಟರ್ ಎಎಲ್ ಶಿವಕುಮಾರ್ ಅವರು ತಿಳಿಸಿದ್ದಾರೆ.

ಸಂಸದ ಪಿ ಸಿ ಮೋಹನ್ ಮಾತನಾಡಿ, ಸಂಕಲ್ಪ ಯಾತ್ರೆಯಲ್ಲಿ “ಸ್ಮಾರ್ಟ್ ಸಿಟಿ, ಉಪನಗರ ರೈಲು, ವಿಮಾನ ನಿಲ್ದಾಣದೊಂದಿಗೆ ಮೆಟ್ರೋ ಸಂಪರ್ಕ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಇತರ ಹಲವು ಯೋಜನೆಗಳ ಕುರಿತ ನಮ್ಮ ಸರ್ಕಾರದ ಸಾಧನೆಗಳನ್ನು ನಾವು ಪ್ರದರ್ಶಿಸುತ್ತೇವೆ. ಅಭಿವೃದ್ಧಿಗೆ ಬಿಜೆಪಿ ಉತ್ತಮ ಆಯ್ಕೆಯಾಗಿದೆ ಎಂದು 28 ವಿಧಾನಸಭಾ ಕ್ಷೇತ್ರಗಳ ಮತದಾರರಿಗೆ ಸಂದೇಶವನ್ನು ನೀಡುತ್ತೇವೆಂದು ಹೇಳಿದ್ದಾರೆ.

ಜನವರಿ ವರೆಗೆ ಮೊದಲ ಹಂತದ ಯಾತ್ರೆಯನ್ನು ಕೆಲವು ಕ್ಷೇತ್ರಗಳಲ್ಲಿ ಪೂರ್ಣಗೊಳಿಸಿ ನಂತರ ಎರಡನೇ ಹಂತದ ಯಾತ್ರೆ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆರಂಭದಲ್ಲಿ ಸಂಕಲ್ಪಯಾತ್ರೆಯನ್ನು ಜಯನಗರದ ಮೂಲಕ ಆರಂಭಿಸಲು ಚಿಂತನೆ ನಡೆಸಲಾಗಿತ್ತು. ಆದರೆ, ಸ್ಥಳೀಯ ಘಟಕವು ಡಿಸೆಂಬರ್ 11 ರಂದು ಸಂಕಲ್ಪ ಯಾತ್ರೆ ನಡೆಸಲು ಸಿದ್ಧರಿರಲಿಲ್ಲ. ಹೀಗಾಗಿ ಮಲ್ಲೇಶ್ವರಂನಲ್ಲಿ ನಡೆಸಲು ಮುಂದಾದೆವು ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿದೆ.

ಸಂಕಲ್ಪ ಯಾತ್ರೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಅಧಿಕಾರಿಗಳ ತಂಡವು ಈ ಯಾತ್ರೆಯಲ್ಲಿ ಉತ್ತಮ ಬೆಂಬಲ ಪಡೆಯುವ ನಿರೀಕ್ಷೆಗಳಿವೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com