ಪೌರತ್ವ ಮಸೂದೆ ಭಾರತದ ಜ್ಯಾತ್ಯಾತೀತತೆಯನ್ನು ದುರ್ಬಲಗೊಳಿಸಬಹುದು: ಬಾಂಗ್ಲಾದೇಶ

ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತರಲು ಇಚ್ಚಿಸಿರುವ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಭಾರತದ ಜಾತ್ಯಾತೀತೆ ದುರ್ಬಲಗೊಳ್ಳಬಹುದು ಎಂದು ಬಾಂಗ್ಲಾದೇಶ ಅಭಿಪ್ರಾಯಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಢಾಕಾ: ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತರಲು ಇಚ್ಚಿಸಿರುವ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಭಾರತದ ಜಾತ್ಯಾತೀತೆ ದುರ್ಬಲಗೊಳ್ಳಬಹುದು ಎಂದು ಬಾಂಗ್ಲಾದೇಶ ಅಭಿಪ್ರಾಯಪಟ್ಟಿದೆ.

ಈ ಕುರಿತಂತೆ ಮಾತನಾಡಿರುವ ಬಾಂಗ್ಲಾದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್ ಅವರು, ಭಾರತ ಐತಿಹಾಸಿಕ ಜಾತ್ಯಾತೀತೆಯನ್ನು ಹೊಂದಿದೆ. ಆದರೆ ಹಾಲಿ ಮೋದಿ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ಪೌರತ್ವ ತಿದ್ದುಪಡಿ ಮಸೂದೆ ಭಾರತದ ಭವ್ಯ ಜಾತ್ಯಾತೀತ ನಿಲುವನ್ನೇ ಅಲುಗಾಡಿಸಿ ಅದನ್ನು ದುರ್ಬಲಗೊಳಿಸಬಹುದು ಎಂದು ಹೇಳಿದ್ದಾರೆ.

ಅಂತೆಯೇ ಇದೇ ವೇಳೆ ಭಾರತ ಮತ್ತು ಬಾಂಗ್ಲಾದೇಶ ಅತ್ಯುತ್ತಮ ಸೌಹಾರ್ಧ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಭಾರತೀಯ ಅಲ್ಪ ಸಂಖ್ಯಾತರು ಮಾತ್ರವಲ್ಲದೇ ಬಾಂಗ್ಲಾದೇಶದ ನಾಗರಿಕರೂ ಕೂಡ ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಆತಂಕಕ್ಕೊಳಗಾಗಿದ್ದಾರೆ ಎಂದು ಹೇಳಿದರು. ಇದೇ ವೇಳೆ ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಭಾರತದ ಗೃಹ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ ಮೊಮೆನ್ ಅವರು, ಅಮಿತ್ ಶಾ ಅವರಿಗೆ ಯಾರು ಈ ಮಾಹಿತಿ ನೀಡಿದರೋ ತಿಳಿದಿಲ್ಲ. ಆದರೆ ಅದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು. 

ಅಲ್ಪ ಸಂಖ್ಯಾತರ ದಬ್ಬಾಳಿಕೆ ಹೇಳಿಕೆ ಸರಿಯಲ್ಲ. ಬಹುಶಃ ಅಮಿತ್ ಶಾ ಅವರಿಗೆ ತಪ್ಪು ಮಾಹಿತಿ ಲಭ್ಯವಾಗಿರಬಹುದು. ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ. ಅಲ್ಪ ಸಂಖ್ಯಾತರ ಕುರಿತಂತೆ ನಮ್ಮ ದೇಶ ಸಾಕಷ್ಟು ಅತ್ಯುತ್ತಮ ನಿರ್ಣಯಗಳನ್ನು ಕೈಗೊಂಡಿದೆ. ಇಲ್ಲಿ ಎಲ್ಲ ಧರ್ಮೀಯರು ಎಲ್ಲ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಅವರ ಸರ್ವ ಸ್ವತಂತ್ರರು ಎಂದು ಮೊಮೆನ್ ಹೇಳಿದ್ದಾರೆ.

ಇನ್ನು ಭಾರತದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿರುವ ಪೌರತ್ವ ಮಸೂದೆಯನ್ನು ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com