ಬೆಂಗಳೂರು: ಇದೇ ಮೇ 16 ಶನಿವಾರದಂದು ವಿಶೇಷ ಶನಿ ಅಮಾವಾಸ್ಯೆ ಇದ್ದು, ಹಿಂದೂ ಸಂಪ್ರದಾಯದಲ್ಲಿ ಈ ದಿನವನ್ನು ಅತ್ಯಂತ ಮಹತ್ವದ ಆಧ್ಯಾತ್ಮಿಕ ದಿನಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.
ಹೌದು.. ಅಮಾವಾಸ್ಯೆ ದಿನವು ಶನಿವಾರದಂದು ಬಂದಾಗ ಅದನ್ನು ಶನಿ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ನ್ಯಾಯ, ಕರ್ಮ, ಶಿಸ್ತು ಮತ್ತು ಶನಿ ಗ್ರಹದ ಅಧಿಪತಿಯಾದ ಶನಿದೇವರಿಗೆ ಸಮರ್ಪಿಸಲಾಗಿದೆ.
ಭಾರತದಾದ್ಯಂತ ಭಕ್ತರು ಈ ದಿನ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ, ಉಪವಾಸ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಶನಿ ದೋಷ, ಸಾಡೇ ಸಾತಿ ಹಾಗೂ ಜೀವನದ ಸಂಕಷ್ಟಗಳಿಂದ ವಿಮುಕ್ತಿ ಪಡೆಯಲು ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ.
ವಿಶೇಷವಾಗಿ ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇಗುಲ ಮತ್ತು ಕೋಕಿಲವಾನ್ ಶನಿ ದೇವಾಲಯಗಳಲ್ಲಿ ಆ ದಿನದಂದು ಭಕ್ತರ ಭಾರೀ ಜನಸಂದಣಿಯೇ ಕಾಣಿಸಿಕೊಳ್ಳುತ್ತದೆ. ಕರ್ನಾಟಕದ ಪಾವಗಡದ ಶನಿದೇಗುಲದಲ್ಲೂ ಅಂದು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.
ಶನಿ ಅಮಾವಸ್ಯೆಯ ಐತಿಹ್ಯ
ಹಿಂದೂ ನಂಬಿಕೆಗಳ ಪ್ರಕಾರ ಶನಿದೇವರು ಮನುಷ್ಯರ ಕರ್ಮದ ಆಧಾರದ ಮೇಲೆ ಫಲ ನೀಡುತ್ತಾರೆ. ಆದ್ದರಿಂದ ಶನಿ ಅಮಾವಾಸ್ಯೆಯನ್ನು ಆತ್ಮಪರಿಶೀಲನೆ, ದಾನಧರ್ಮ ಮತ್ತು ಆಧ್ಯಾತ್ಮಿಕ ಶಿಸ್ತಿನ ದಿನವೆಂದು ಪರಿಗಣಿಸಲಾಗುತ್ತದೆ.
ಆಚರಿಸುವ ವಿಧಿ
ಭಕ್ತರು ಸಾಮಾನ್ಯವಾಗಿ ಬೆಳಿಗ್ಗೆ ಸ್ನಾನ ಮಾಡಿ ಶನಿದೇವರಿಗೆ ಪೂಜೆ ಸಲ್ಲಿಸುತ್ತಾರೆ. ಅನೇಕರು ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆಯ ದೀಪ ಹಚ್ಚಿ “ಓಂ ಶಂ ಶನೈಶ್ಚರಾಯ ನಮಃ” ಮಂತ್ರವನ್ನು ಜಪಿಸುತ್ತಾರೆ.
ದಾನ
ಈ ವಿಶೇಷ ದಿನದಂದು ಶನಿದೇವರಿಗೆ ಈ ಕೆಲ ವಸ್ತುಗಳನ್ನು ಅರ್ಪಿಸಿದರೆ ಶನಿದೇವರು ಸಂತೃಪ್ತಿಯಾಗುತ್ತಾರೆ ಎಂಬ ಮಾತಿದೆ. ಅದರಂತೆ ಶನಿದೇವರಿಗೆ ಪ್ರಿಯವಾದ ಕಪ್ಪು ಎಳ್ಳು, ಸಾಸಿವೆ ಎಣ್ಣೆ, ಕಪ್ಪು ಬಟ್ಟೆ, ಉದ್ದಿನ ಬೇಳೆ ಮತ್ತು ಕಬ್ಬಿಣದ ವಸ್ತುಗಳನ್ನು ದಾನ ಮಾಡಿದರೆ ಒಳಿತಾಗತ್ತದೆ ಎಂಬ ನಂಬಿಕೆ ಇದೆ.
ಇದಲ್ಲದೆ ಬಡವರಿಗೆ ಅನ್ನದಾನ, ಸಹಾಯ ಹಾಗೂ ದಾನ ಮಾಡುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಈ ವಿಶೇಷ ದಿನದಂದು ಅನೇಕ ಭಕ್ತರು ಉಪವಾಸವಿದ್ದು ಶನಿ ಚಾಲೀಸಾ ಅಥವಾ ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ. ಹನುಮಂತನ ಆರಾಧನೆಯಿಂದಲೂ ಶನಿದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
ಏನು ಮಾಡಬೇಕು?
ಶನಿ ಮತ್ತು ಹನುಮಂತ ದೇವರಿಗೆ ಪೂಜೆ ಸಲ್ಲಿಸಿ
ಶನಿ ದೇವಾಲಯಗಳಿಗೆ ಭೇಟಿ ನೀಡಿ ಎಣ್ಣೆ ಅಭಿಷೇಕ ಅಥವಾ ಎಳ್ಳೆಣ್ಣೆಯ ದೀಪ ಹಚ್ಚಬೇಕು. ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿಗ್ರಹದ ಕೆಟ್ಟ ಪರಿಣಾಮಗಳಿಂದ ರಕ್ಷಣೆ ದೊರೆಯುತ್ತದೆ ಎಂದು ನಂಬಲಾಗಿದೆ.
ಬಡವರಿಗೆ ದಾನ, ಪ್ರಾಣಿ-ಪಕ್ಷಿಗಳಿಗೆ ಆಹಾರ
ಶನಿ ಅಮಾವಾಸ್ಯೆಯಲ್ಲಿ ದಾನಧರ್ಮಕ್ಕೆ ವಿಶೇಷ ಮಹತ್ವವಿದೆ. ಕಪ್ಪು ಎಳ್ಳು, ಪಾದರಕ್ಷೆ, ಆಹಾರ ಅಥವಾ ಬಟ್ಟೆ ದಾನ ಮಾಡುವುದು ಶುಭಕರ ಎನ್ನಲಾಗುತ್ತದೆ. ಕಾಗೆಯನ್ನು ಶನಿದೇವರೊಂದಿಗೆ ಸಂಬಂಧಿಸಲಾಗಿದೆ ಎಂದು ನಂಬಲಾಗಿದೆ. ಕಾಗೆ, ಕಪ್ಪು ನಾಯಿಗಳು ಮತ್ತು ಗೋವುಗಳಿಗೆ ಆಹಾರ ನೀಡುವುದು ಶುಭಕರ.
ಶಿಸ್ತು ಮತ್ತು ವಿನಯವನ್ನು ಪಾಲಿಸಿ
ಭಕ್ತರು ಕೋಪವನ್ನು ತೊರೆದು ಶಾಂತ ಮನೋಭಾವದಿಂದ ಧ್ಯಾನ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಬೇಕು.
ಏನು ಮಾಡಬಾರದು?
ಮದ್ಯಪಾನ ಮತ್ತು ಮಾಂಸಾಹಾರದಿಂದ ದೂರವಿರಿ. ಅನೇಕ ಭಕ್ತರು ಈ ಪವಿತ್ರ ದಿನದಲ್ಲಿ ಸಸ್ಯಾಹಾರ ಪಾಲಿಸಿ ಮದ್ಯಪಾನದಿಂದ ದೂರ ಇರುತ್ತಾರೆ. ಬಡವರು ಹಾಗೂ ವೃದ್ಧರನ್ನು ಅವಮಾನಿಸುವುದು ಕೆಟ್ಟ ಕರ್ಮಫಲಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಜ್ಯೋತಿಷಿಗಳು ಹಾಗೂ ಧಾರ್ಮಿಕ ಮುಖಂಡರು ಕೋಪ, ಜಗಳ ಮತ್ತು ಕಟುವಾದ ಮಾತುಗಳನ್ನು ತಪ್ಪಿಸಲು ಸಲಹೆ ನೀಡುತ್ತಾರೆ.
ಪ್ರಾಣಿಗಳಿಗೆ ಹಾನಿ ಮಾಡಬೇಡಿ
ಈ ದಿನ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಹಾನಿ ಮಾಡುವುದು ಅಶುಭಕರವೆಂದು ಪರಿಗಣಿಸಲಾಗುತ್ತದೆ. ಶನಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ನಿರ್ದಿಷ್ಟ ಸಮಯದಲ್ಲಿ ಖರೀದಿಸಬಾರದು ಎಂಬ ಸಂಪ್ರದಾಯವಿದೆ.
ಕೂದಲು ಕತ್ತರಿಸುವುದನ್ನು ತಪ್ಪಿಸಿ
ಅನೇಕ ಕುಟುಂಬಗಳಲ್ಲಿ ಶನಿ ಅಮಾವಾಸ್ಯೆಯಂದು ಕೂದಲು ಹಾಗೂ ಗಡ್ಡ ಕತ್ತರಿಸದ ಸಂಪ್ರದಾಯವಿದೆ. ಹಾಗಾಗಿ ಅಂದಿನ ದಿನ ಕೂದಲು ಮತ್ತು ಗಡ್ಡ ಕತ್ತರಿಸದೇ ಇರುವುದು ಉತ್ತಮ.
ಧಾರ್ಮಿಕ ಪಂಡಿತರ ಪ್ರಕಾರ ಶನಿ ಅಮಾವಾಸ್ಯದ ನಿಜವಾದ ಅರ್ಥ ಕೇವಲ ಪೂಜೆಯಲ್ಲಿ ಮಾತ್ರವಲ್ಲ, ಸತ್ಯನಿಷ್ಠೆ, ಸಹನೆ ಮತ್ತು ಧರ್ಮಮಾರ್ಗದ ಜೀವನದಲ್ಲಿದೆ. ಈ ದಿನ ಭಕ್ತಿಯಿಂದ ಪ್ರಾರ್ಥನೆ ಮಾಡಿ ಸತ್ಕಾರ್ಯಗಳನ್ನು ಮಾಡುವುದರಿಂದ ದುಃಖಗಳು ದೂರವಾಗಿ ಶಾಂತಿ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಶಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.