ಮುಂಬೈ: ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಚಿನ್ನ ನಗದೀಕರಣ ಯೋಜನೆ (ಜಿಎಂಎಸ್) ಯಲ್ಲಿ ಮುಂಬೈ ನ ಶ್ರೀ ಸಿದ್ಧಿವಿನಾಯಕ ದೇವಾಲಯ 40 ಕೆಜಿ ಚಿನ್ನ ಠೇವಣಿ ಮಾಡಲಿದೆ.
ಚಿನ್ನದ ನಗದೀಕರಣ ಯೋಜನೆಯಲ್ಲಿ ಠೇವಣಿ ಮಾಡುವುದರಿಂದ ದೇವಾಲಯಕ್ಕೆ ವಾರ್ಷಿಕವಾಗಿ 67 ಲಕ್ಷ ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಶೀ ಸಿದ್ಧಿವಿನಾಯಕ ದೇವಾಲಯ ಭಕ್ತಾದಿಗಳು ದೇಣಿಗೆ ನೀಡಿರುವ ಚಿನ್ನದ ಆಭರಣಗಳನ್ನು ಹರಾಜು ಹಾಕಿ ಲಾಭ ಗಳಿಸುತ್ತಿತ್ತು.
ಶ್ರೀ ಸಿದ್ಧಿವಿನಾಯಕ ದೇವಾಲಯ ಸುಮಾರು 160 ಕೆಜಿ ಚಿನ್ನ ಹೊಂದಿದೆ. ಕೇರಳದ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ 20 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಇದ್ದು, ದೇವಾಲಯದ ಆಸ್ತಿಗೆ ಸಂಬಧಿಸಿದಂತೆ ವಿಚಾರಣೆ ನಡೆಯುತ್ತಿರುವುದರಿಂದ ಪ್ರಧಾನಿ ಮೋದಿ ಅವರ ಜಿಎಂಎಸ್ ಯೋಜನೆಯಲ್ಲಿ ಠೇವಣಿ ಮಾಡಲು ಸಾಧ್ಯವಿರುವುದಿಲ್ಲ. ಜಿಎಂಎಸ್ ಯೋಜನೆಯಡಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಒಂದು ಕೆಜಿ ಚಿನ್ನ ಠೇವಣಿಯಾಗಿದ್ದು ಪ್ರಧಾನಿ ಮೋದಿ ಅವರ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.