ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದ್ರವ್ಯತೆ ಹೆಚ್ಚಿಸಲು 13 ಸರ್ಕಾರಿ ಬ್ಯಾಂಕುಗಳಲ್ಲಿ 22 ಸಾವಿರದ 915 ಕೋಟಿ ರೂಪಾಯಿ ಬಿಡುಗಡೆಮಾಡುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದೆ.
ಹಣ ನೀಡಿಕೆಯು ಇಂದ್ರಧನುಷ್ ಯೋಜನೆಯ ಭಾಗವಾಗಿದ್ದು, ಇದರಡಿ ಬ್ಯಾಂಕುಗಳು ನಾಲ್ಕು ವರ್ಷಗಳ ಅವಧಿಗೆ 70 ಸಾವಿರ ಕೋಟಿ ರೂಪಾಯಿ ಪಡೆದುಕೊಳ್ಳಲಿವೆ.
ಹಣದ ಒಳಹರಿವು ಸರ್ಕಾರಕ್ಕೆ ಅಗತ್ಯವಾಗಿದೆ. ಏಕೆಂದರೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 120 ಶತಕೋಟಿ ಡಾಲರ್ ಸಾಲ ಮರುಪಾವತಿಯಾಗದೆ ಉಳಿದುಕೊಂಡಿದೆ. ಇದು ದೇಶದ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ.
ಬ್ಯಾಂಕ್ ಗಳ ಮರುಬಂಡವಾಳೀಕರಣಕ್ಕೆ ಈ ಬಾರಿಯ ಹಣಕಾಸು ವರ್ಷದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ 25 ಸಾವಿರ ಕೋಟಿ ರೂಪಾಯಿ ಬಜೆಟ್ ನೀಡಿದ್ದರು. ದೇಶದಲ್ಲಿ ಅತ್ಯಂತ ಹೆಚ್ಚು ಸಾಲ ನೀಡುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 7 ಸಾವಿರದ 575 ಕೋಟಿ ರೂಪಾಯಿ ಸಿಗಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 2 ಸಾವಿರದ 816 ಕೋಟಿ ರೂ, ಬ್ಯಾಂಕ್ ಆಫ್ ಇಂಡಿಯಾಗೆ 1 ಸಾವಿರದ 784 ಕೋಟಿ ರೂಪಾಯಿ ಸಿಗಲಿದೆ.
ಹಣದ ಒಳಹರಿವಿನ ಘೋಷಣೆಯಾಗುತ್ತಿದ್ದಂತೆ ಇಂದು ಸಾರ್ವಜನಿಕ ವಲಯ ಬ್ಯಾಂಕ್ ಗಳ ಷೇರುಗಳಲ್ಲಿ ಏರಿಕೆ ಕಂಡುಬಂತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos