ಮುಂಬೈ: ಕಳೆದ ಮೂರು ವರ್ಷಗಳ ಹಿಂದೆ ಭಾರತೀಯ ಜವಳಿ ಉದ್ಯಮದ ಕಿಂಗ್ ಆಗಿದ್ದ ರೇಮಂಡ್ ಸಂಸ್ಥೆಯ ವಿಜಯ್ ಪತ್ ಸಿಂಘಾನಿಯಾ ತನ್ನ ಮಗ ಗೌತಮ್ ಸಿಂಘಾನಿಯಾಗೆ ರೇಮಂಡ್ ನ ಅಧಿಕಾರ ಹಸ್ತಾಂತರಿಸಿದ್ದರು. ಆದರೆ ಈಗ ತಂದೆ-ಮಗನ ನಡುವೆ ಭಿನ್ನಾಭಿಪ್ರಾಯ ತೋರಿಬಂದಿದ್ದು ಮಗ ಗೌತಮ್ ತನ್ನನ್ನು ಕಂಪೆನಿಯ ಕಛೇರಿಯಿಂದ ಅನಾಮತ್ತಾಗಿ ಹೊರಗಿಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.
ಈಗ ವಿಜಯ್ ಪತ್ ತಮ್ಮ ಅಂದಿನ ನಿರ್ಧಾರಕ್ಕಾಗಿ ಬಹಳಷ್ಟು ವಿಷಾದಿಸುತ್ತಿದ್ದಾರೆ.ಅಲ್ಲದೆ ಇದರ ಹಿಂದೆ "ಎಮೋಷನಲ್ ಬ್ಲಾಕ್ ಮೇಲ್" ಇತ್ತು ಎಂದೂ ಅವರು ಹೇಳಿದ್ದಾರೆ. ಈ ಮೂಲಕ ಕಾರ್ಪೋರೇಟ್ ಜಗತ್ತಿನ ಇನ್ನೊಂದು ಕುಟುಂಬ ಕೌಟುಂಬಿಕ ಕಲಹದ ಸುದೀರ್ಘ ಇತಿಹಾಸವನ್ನು ಸೇರಿಕೊಂಡಂತಾಗಿದೆ.
ಚಿಕ್ಕ ಪ್ರಮಾಣದಲ್ಲಿ ಜವಳಿ ಉದ್ಯಮ ಪ್ರಾರಂಭಿಸಿದ್ದ ವಿಜಯ್ ಪತ್ ಇಂದು ಭಾರತ ಸೇರಿ ಜಗತ್ತಿನ್ಬಲ್ಲೇ ಮನೆಮಾತಾಗಿರುವ ರೇಮಂಡ್ ಸಂಸ್ಥೆಯ ರೂವಾರಿಯಾಗಿದ್ದಾರೆ. ರೇಮಂಡ್ ಗ್ರೂಪ್ ಇಂದು ವಿಶ್ವದಲ್ಲೇ ಅತಿ ಹೆಚ್ಚು ಗುಣಮಟ್ಟದ ಉಣ್ಣೆಯ ಸೂಟ್ ತಯಾರಿಸುವಲ್ಲಿ ಹೆಸರಾಗಿದೆ. ದಕ್ಷಿಣ ಏಷ್ಯಾದ ಮಹಾನ್ ವಾಣಿಜ್ಯೋದ್ಯಮ ಕುಟುಂಬಗಳಲ್ಲಿ ಒಂದಾದ ಈ ಕುಟುಂಬದ ಕಥೆಯೂ ರೋಚಕವಾಗಿದೆ. ಇಂದು ಈ ಸಿಂಘಾನಿಯಾ ಕುಟುಂಬ ಸಿಮೆಂಟ್, ಡೈರಿ ಹಾಗೂ ಟೆಕ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
ಕ್ರೆಡಿಟ್ ಸೂಯ್ಸೀ ಇತ್ತೀಚಿನ ವರದಿಯ ಅನುಸಾರ ಚೀನಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ನಂತರ, ಕೌಟುಂಬಿಕ ಮಾಲಿಕತ್ವದ ಸಂಘಟಿತ ವ್ಯಾಪಾರಿಗಳ ಸಂಖ್ಯೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ ದಕ್ಕಿದೆ.
2015ರಲ್ಲಿ ತನ್ನ ವಶದಲ್ಲಿದ್ದ ಸಂಸ್ಥೆಯ 37 ಪ್ರತಿಶತದ ಪಾಲನ್ನು ವಿಜಯ್ ಪತ್ ತಮ್ಮ ಪುತ್ರ ಗೌತಮ್ ಸಿಂಘಾನಿಯಾಗೆ ಹಸ್ತಾಂತರಿಸಿದ್ದರು.