ವಾಣಿಜ್ಯ

ಕಳೆದ 7 ವರ್ಷಗಳಲ್ಲಿ ಹಣಕಾಸು ವ್ಯವಸ್ಥೆ, ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಸುಧಾರಣೆ: ಆರ್ ಬಿಐ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎರಡು ನವೀನ ಮತ್ತು ಗ್ರಾಹಕ-ಕೇಂದ್ರಿತ ಯೋಜನೆಗಳು ಹೂಡಿಕೆಯ ಮಾರ್ಗಗಳನ್ನು ಹೆಚ್ಚಿಸುವುದಲ್ಲದೆ ಬಂಡವಾಳ ಮಾರುಕಟ್ಟೆಯನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ದೊರಕಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಆರ್ ಬಿಐ ರಿಟೇಲ್ ಡೈರೆಕ್ಟ್ ಯೋಜನೆ: ಅವರು ಇಂದು ದೆಹಲಿಯಲ್ಲಿ ವರ್ಚುವಲ್ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎರಡು ನವೀನ ಮತ್ತು ಗ್ರಾಹಕ ಸ್ನೇಹಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು. ಅವುಗಳಲ್ಲಿ ಒಂದು ಯೋಜನೆ, ರಿಟೇಲ್ ಡೈರೆಕ್ಟ್ ಯೋಜನೆ. ಇದರ ಮೂಲಕ ದೇಶದಲ್ಲಿ ಸಣ್ಣ ಹೂಡಿಕೆದಾರರು ಸರ್ಕಾರದ ಸೆಕ್ಯುರಿಟೀಸ್ ಖಾತೆಯನ್ನು ಸುರಕ್ಷಿತವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆನ್ ಲೈನ್ ನಲ್ಲಿ ಉಚಿತವಾಗಿ ತೆರೆಯಲು ಮತ್ತು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ರಿಸರ್ವ್ ಬ್ಯಾಂಕ್-ಇಂಟಿಗ್ರೇಟೆಡ್ ಒಂಬಡ್ಸ್ ಮನ್ ಯೋಜನೆ: ಇನ್ನೊಂದು ರಿಸರ್ವ್ ಬ್ಯಾಂಕ್ ನ ಇಂಟಿಗ್ರೇಟೆಡ್ ಒಂಬಡ್ಸ್ ಮನ್ ಯೋಜನೆಯಾಗಿದ್ದು, ಗ್ರಾಹಕರು ದೂರುಗಳನ್ನು ಸಲ್ಲಿಸಲು, ದಾಖಲೆಗಳನ್ನು ಸಲ್ಲಿಸಲು, ಸ್ಟೇಟಸ್ ಪತ್ತೆಹಚ್ಚಲು ಮತ್ತು ಪ್ರತಿಕ್ರಿಯೆ ನೀಡಲು ಏಕ ಗವಾಕ್ಷಿ ವ್ಯವಸ್ಥೆಯನ್ನು ಹೊಂದಿರುತ್ತದೆ. ಆರ್ ಬಿಐ ಮೂಲಕ ನಿಯಂತ್ರಿತ ಘಟಕಗಳ ವಿರುದ್ಧದ ದೂರುಗಳಿಗೆ ಸಮಗ್ರ ಯೋಜನೆಯನ್ನು ಹೊಂದಿರುತ್ತದೆ. ಕುಂದುಕೊರತೆ ಪರಿಹಾರ ಮತ್ತು ಕುಂದುಕೊರತೆ ಪರಿಹಾರದಲ್ಲಿ ಗ್ರಾಹಕರಿಗೆ ನೆರವಾಗಲು ಬಹು ಭಾಷಿ ಟೋಲ್ ಫ್ರೀ ಸಂಖ್ಯೆಯನ್ನು ಹೊಂದಿರುತ್ತದೆ. ಇಂಟಿಗ್ರೇಟೆಡ್ ಒಂಬಡ್ಸ್ ಮನ್ ಯೋಜನೆ 'ಒಂದು ರಾಷ್ಟ್ರ-ಒಂದು ಲೋಕಪಾಲ್'-ಒಂದು ಪೋರ್ಟಲ್, ಒಂದು ಇಮೇಲ್ ಮತ್ತು ಒಂದು ವಿಳಾಸದೊಂದಿಗೆ ಗ್ರಾಹಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಎರಡು ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತವೆ ಮತ್ತು ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಲಭಗೊಳಿಸಿ ಹೂಡಿಕೆದಾರರಿಗೆ ಹೆಚ್ಚು ಸುರಕ್ಷಿತಗೊಳಿಸುತ್ತವೆ. 

ಕಳೆದ 7 ವರ್ಷಗಳಲ್ಲಿ, ಅನುತ್ಪಾದಕ ಆಸ್ತಿಗಳನ್ನು ಸರ್ಕಾರ ಪಾರದರ್ಶಕತೆಯೊಂದಿಗೆ ಗುರುತಿಸಿದೆ.ಈ ನಿಟ್ಟಿನಲ್ಲಿ ಹಣಕಾಸು ವ್ಯವಸ್ಥೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಬಹು ಸುಧಾರಣೆಗಳನ್ನು ಕಳೆದ 7 ವರ್ಷಗಳಲ್ಲಿ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹಾಜರಿದ್ದರು. ಸಮಾರಂಭದಲ್ಲಿ ಶಕ್ತಿಕಾಂತ್ ದಾಸ್ ಮಾತನಾಡಿ, ಆರ್‌ಬಿಐ ತನ್ನ ಸೇವೆಗಳ ದಕ್ಷತೆಯನ್ನು ಹೆಚ್ಚಿಸಲು ತಂತ್ರಜ್ಞಾನ ಮತ್ತು ನಾವೀನ್ಯತೆಗಳನ್ನು ಬಳಸಿಕೊಳ್ಳುತ್ತಿದೆ. ಆರ್‌ಬಿಐನ ಅಭಿವೃದ್ಧಿಯ ಪಾತ್ರವು ಹಣಕಾಸಿನ ಒಳಗೊಳ್ಳುವಿಕೆಯನ್ನು ಮತ್ತಷ್ಟು ಆಳಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ, ಜನಕೇಂದ್ರಿತ ಉಪಕ್ರಮಗಳನ್ನು ಹೊಂದಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು. 

SCROLL FOR NEXT