ಮುಂಬೈ: ಕಳೆದ ಶನಿವಾರ ದುಬೈನ ಹೋಟೆಲ್ ವೊಂದರಲ್ಲಿ ಆಕಸ್ಮಿಕವಾಗಿ ಬಾತ್ ಟಬ್ ಗೆ ಬಿದ್ದು ಮೃತಪಟ್ಟ ಮೋಹಕ ತಾರೆ ಶ್ರೀದೇವಿ ಅವರು ಬುಧವಾರ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಇಂದು ಸಂಜೆ ಮುಂಬೈನ ವಿಲ್ಲೆ ಪಾರ್ಲೆಯ ಹಿಂದೂ ಸೇವಾ ಸಮಾಜದ ರುದ್ರಭೂಮಿಯಲ್ಲಿ ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಿತು.
ಬಾಲಿವುಡ್ ತಾರೆಯರು, ಗಣ್ಯರು, ಸಾವಿರಾರು ಅಭಿಮಾನಿಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಶ್ರೀದೇವಿ ಪತಿ ಬೋನಿ ಕಪೂರ್ ಅವರು ಪತ್ನಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಇದಕ್ಕೂ ಮುನ್ನ ಮಲ್ಲಿಗೆ ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಸುಮಾರು ಏಳು ಕಿಲೋ ಮೀಟರ್ವರೆಗೆ ಮೆರವಣಿಗೆಯ ಮೂಲಕ ವಿಲ್ಲೆಪಾರ್ಲೆಯ ಸೇವಾ ಸಮಾಜ ಹಿಂದೂ ಚಿತಾಗಾರಕ್ಕೆ ತರಲಾಯಿತು. ಸಾವಿರಾರು ಅಭಿಮಾನಿಗಳು ದಾರಿಯುದ್ದಕ್ಕೂ ಶ್ರೀದೇವಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಶನಿವಾರ ದುಬೈನಲ್ಲಿ ಮೃತಪಟ್ಟ ಶ್ರೀದೇವಿ ಶರೀರವನ್ನು ಮಂಗಳವಾರ ರಾತ್ರಿ ಮುಂಬಯಿಗೆ ಕರೆ ತರಲಾಯಿತು. ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು, ಸೆಲೆಬ್ರಿಟಿಗಳು ಅವರ ನಿವಾಸಕ್ಕೆ ಆಗಮಿಸಿದರು. ಶ್ರೀದೇವಿ ಅಂತ್ಯಕ್ರಿಯೆಗೆ ಸಿನಿರಂಗದ ತಾರಾಗಣವೇ ಆಗಮಿಸಿತ್ತು.
ಶ್ರೀದೇವಿ ಪಾರ್ಥಿವ ಶರೀರ ಅಂಧೇರಿಯ ದಿ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ಗೆ ರವಾನೆ ಮಾಡಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos