ನವದೆಹಲಿ: ಲಡಾಖ್ಗೆ ಸಾಂವಿಧಾನಿಕ ರಕ್ಷಣೆ ನೀಡುವಂತೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹವಾಮಾನ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರಿಗೆ ಬಾಲಿವುಡ್ನ ವಿವಾದಿತ ನಟಿ ರಾಖಿ ಸಾವಂತ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ರಾಖಿ ಸಾವಂತ್, ಸೋನಮ್ ವಾಂಗ್ಚುಕ್ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, "ನಾನು ಸ್ವತಃ ದೆಹಲಿಯ ಜಂತರ್ ಮಂತರ್ಗೆ ಭೇಟಿ ನೀಡಿ, ನನ್ನ ಕೈಯಿಂದಲೇ ಜ್ಯೂಸ್ ಕುಡಿಸಿ ಅವರ ಉಪವಾಸ ಸತ್ಯಾಗ್ರಹವನ್ನು ಮುಕ್ತಾಯಗೊಳಿಸುತ್ತೇನೆ" ಎಂದು ಹೇಳಿದ್ದಾರೆ.
ವಾಂಗ್ಚುಕ್ ಅವರ ಜೀವ ಇಡೀ ದೇಶಕ್ಕೆ ಅತ್ಯಂತ ಅಮೂಲ್ಯವಾಗಿದೆ. ಹೋರಾಟಕ್ಕಾಗಿ ನಿಮ್ಮ ಪ್ರಾಣವನ್ನು ಪಣಕ್ಕಿಡಬೇಡಿ. ದೇಶಕ್ಕೆ ಇಂತಹ ಶ್ರೇಷ್ಠ ವಿಜ್ಞಾನಿ ಮತ್ತು ಇಂಜಿನಿಯರ್ ಅಗತ್ಯವಿದೆ. "ಅವರೇ ಇಲ್ಲದಿದ್ದರೆ ನಾನು ಮುಂದೆ ನಾಸಾಕ್ಕೆ (NASA) ಹೋಗುವುದು ಹೇಗೆ? ರಾಕೆಟ್ ಏರುವುದು ಹೇಗೆ?" ಎಂದು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ.
ಅಲ್ಲದೆ, ವಾಂಗ್ಚುಕ್ ಅವರಿಗಾಗಿ ನಿಂಬೆ ಹಣ್ಣಿನ ರಸ, ಮಾವಿನ ಹಣ್ಣಿನ ರಸ ಹಾಗೂ ಮೂಸಂಬಿ ಜ್ಯೂಸ್ ತೆಗೆದುಕೊಂಡು ಹೋಗುತ್ತೇನೆಂದು ತಿಳಿಸಿದ್ದಾರೆ.
ಲಡಾಖ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಈ ಹೋರಾಟಕ್ಕೆ ಸದ್ಯ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ದಿನದಿಂದ ದಿನಕ್ಕೆ ವಾಂಗ್ಚುಕ್ ಅವರ ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.