ದೀರ್ಘಕಾಲದಿಂದ ನಡೆಯುತ್ತಿರುವ ಕೃಷ್ಣಮೃಗ (blackbuck) ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಣೋಯ್ ಸಮುದಾಯದ ಬಳಿ ಕ್ಷಮೆ ಯಾಚಿಸುವಂತೆ ಸಲ್ಮಾನ್ ಖಾನ್ಗೆ ಸಲಹೆ ನೀಡಿದ್ದಾಗಿ ಅವರ ಮಾಜಿ ಗರ್ಲ್ ಫ್ರೆಂಡ್ ಸೋಮಿ ಅಲಿ ಹೇಳಿಕೊಂಡಿದ್ದಾರೆ.
ಇದರಿಂದಾಗಿ ಸಮುದಾಯದ ಆಕ್ರೋಶ ಸ್ವಲ್ಪ ತಣ್ಣಗಾಗಬಹುದು ಅಂದುಕೊಂಡಿದ್ದೆ. ಆದರೆ ಸಲ್ಮಾನ್ ನನ್ನ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಈಗ ಅದರ ಪರಿಣಾಮ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕ್ಷಮೆ ಕೋರುವಂತೆ ಹೇಳಿದ್ದೆ. ಈ ಕುರಿತು ನಿಧಿ ವಸಂದಾನಿ ಜೊತೆಗಿನ ಯು ಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಸೋಮಿ, ನಾನು ಸಲ್ಮಾನ್ ಅವರ ಖಾಸಗಿ ನಂಬರ್ ಗೆ ಸಂದೇಶವೊಂದನ್ನು ಕಳುಹಿಸಿ, ಬಿಷ್ಣೋಯ್ ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆ ಯಾಚಿಸುವಂತೆ ಹೇಳಿದ್ದೆ. ಇನ್ನೂ ಸಮಯವಿದೆ, ಬಿಷ್ಣೋಯ್ ಸಮುದಾಯದ ದೇವಾಲಯಕ್ಕೆ ಭೇಟಿ ನೀಡಿ, ನಡೆದ ಘಟನೆಗಾಗಿ ಕ್ಷಮೆ ಕೇಳುವಂತೆ ಸೂಚಿಸಿದ್ದೆ. ಅವರು ಕ್ಷಮೆ ಕೋರಿದರೆ ಎಲ್ಲವೂ ಬಗೆಹರಿಯುತ್ತದೆ ಅಂದುಕೊಂಡಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ ಎಂದು ಅವರು ಹೇಳಿದರು.
ಅಲ್ಲದೇ, ಬಿಷ್ಣೋಯ್ ಸಮುದಾಯದ ಸದಸ್ಯರನ್ನು ಸಂಪರ್ಕಿಸಿ, ಸಲ್ಮಾನ್ ಪರವಾಗಿ ಕೈಮುಗಿದು, ಅವರನ್ನು ಕ್ಷಮಿಸುವಂತೆ ಮನವಿ ಮಾಡಿಕೊಂಡಿದ್ದೆ. ಅವರ (ಸಲ್ಮಾನ್) ಪ್ರಾಣ ತೆಗೆದರೆ ಕೃಷ್ಣಮೃಗವು ಮರಳಿ ಬರುವುದಿಲ್ಲ. ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ, ಆದರೆ ಎರಡೂ ಕಡೆಯಿಂದಲೂ ನನಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನಿಮ್ಮಿಬ್ಬರ ಸಂಬಂಧ ಮುಗಿದು ವರ್ಷಗಳೇ ಕಳೆದಿದ್ದರೂ ಸಲ್ಮಾನ್ ಖಾನ್ ಬಗ್ಗೆ ಯಾಕೆ ಮಾತನಾಡುತ್ತಲೇ ಇರುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಿ, ನನ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಮಾರ್ಗ ಹುಡುಕುತ್ತಿರುತ್ತಾರೆ. ಮುಂದೆ ಬರದಂತೆ ತಡೆಯುತ್ತಿದ್ದಾರೆ. ಈ ಪರಿಸ್ಥಿತಿಯು ಇನ್ನೊಂದಿಷ್ಟು ಕಾಲ ಮುಂದುವರಿಯಬಹುದು ಎಂಬ ಭಯವನ್ನೂ ವ್ಯಕ್ತಪಡಿಸಿದ ಸೋಮಿ, ಸಲ್ಮಾನ್ ಖಾನ್ 'ಅತ್ಯಂತ ಜಿಪುಣ' ಎಂದು ಹೇಳಿದರು.