ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಛಾಯಾಗ್ರಾಹಕರ (ಪಾಪರಾಜಿಗಳು) ನಡುವಿನ ಮುನಿಸು ಸುಖಾಂತ್ಯ ಕಂಡಿದೆ.
ಆಸ್ಪತ್ರೆಯ ಆವರಣದಲ್ಲಿ ನಡೆದಿದ್ದ ಕಹಿ ಘಟನೆಯ ಬಳಿಕ ಪಾಪರಾಜಿಗಳು ಸಲ್ಮಾನ್ ಖಾನ್ ಅವರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದು, ಈ ಕ್ಷಮೆಯನ್ನು ಸಲ್ಮಾನ್ ಖಾನ್ ಅವರು ಸ್ವೀಕರಿಸಿದ್ದಾರೆ.
ಇತ್ತೀಚೆಗಷ್ಟೇ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದರು. ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶದಲ್ಲೂ ಪಾಪರಾಜಿಗಳು ಅವರ ಮುಂಬರುವ ಸಿನಿಮಾ 'ಮಾತೃಭೂಮಿ' ಹೆಸರನ್ನು ಜೋರಾಗಿ ಕೂಗುತ್ತಾ, ಕ್ಯಾಮೆರಾಗಳೊಂದಿಗೆ ಮುಗಿಬಿದ್ದಿದ್ದರು.
ರೋಗಿಗಳಿಗೆ ತೊಂದರೆಯಾಗುವಂತೆ ನಡೆದುಕೊಂಡ ಛಾಯಾಗ್ರಾಹಕರ ಈ ವರ್ತನೆಗೆ ಸಲ್ಮಾನ್ ಖಾನ್ ತೀವ್ರ ಕೋಪ ವ್ಯಕ್ತಪಡಿಸಿದ್ದರು.
ಈ ಘಟನೆಯ ಮರುದಿನ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿದ್ದ 'ರಾಜಾ ಶಿವಾಜಿ' ಚಿತ್ರದ ಸಕ್ಸಸ್ ಪಾರ್ಟಿಗೆ ಸಲ್ಮಾನ್ ಖಾನ್ ಆಗಮಿಸಿದ್ದರು.
ಈ ವೇಳೆ ನೆರೆದಿದ್ದ ಪಾಪರಾಜಿಗಳು ತಮ್ಮ ತಪ್ಪಿನ ಅರಿವಾಗಿ ಸಲ್ಮಾನ್ ಖಾನ್ ಅವರನ್ನು ನೋಡುತ್ತಿದ್ದಂತೆ ಏಕಕಂಠದಿಂದ "Sorry Bhai, Sorry" ಎಂದು ಬಹಿರಂಗವಾಗಿ ಕ್ಷಮೆ ಕೇಳಲು ಆರಂಭಿಸಿದರು.
ಛಾಯಾಗ್ರಾಹಕರು ಒಟ್ಟಾಗಿ ಕ್ಷಮೆ ಕೇಳುತ್ತಿದ್ದಂತೆ ಸಲ್ಮಾನ್ ಖಾನ್ ತಮ್ಮ ಕೋಪವನ್ನು ಮರೆತು ಮುಗುಳ್ನಕ್ಕರು. ನಗುತ್ತಲೇ ಅವರ ಕ್ಷಮೆಯನ್ನು ಸ್ವೀಕರಿಸಿದ ಸಲ್ಮಾನ್, ತಮ್ಮ ಎಂದಿನ ತಮಾಷೆಯ ಶೈಲಿಯಲ್ಲಿ, "ಜೋರಾಗಿ ಸಾರಿ ಹೇಳಿ, ನನಗೆ ಧ್ವನಿ ಕೇಳಿಸುತ್ತಿಲ್ಲ" ಎಂದು ಕಿಚಾಯಿಸಿದರು.
ನಂತರ ಪಾಪರಾಜಿಗಳು "ಇವತ್ತು ಯಾರೂ ಕೂಗಬೇಡಿ, ಲವ್ ಯು ಭಾಯ್" ಎಂದಾಗ, ಸಲ್ಮಾನ್ ನಗುತ್ತಲೇ "ಹೌದು, ಫೋಟೋ ತೆಗೆಯಲು ಈ ಜಾಗ ಸರಿಯಾಗಿದೆ (ಆಸ್ಪತ್ರೆಯಲ್ಲಲ್ಲ)" ಎಂದು ಸನ್ನೆ ಮಾಡುವ ಮೂಲಕ ಎಲ್ಲರನ್ನೂ ಕ್ಷಮಿಸಿ ಮುನ್ನಡೆದರು.
ಸದ್ಯ ಸಲ್ಮಾನ್ ಖಾನ್ ಅವರ ಈ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು 'ಭಾಯ್ಜಾನ್' ವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.