ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ರಾಮನ ಪಾತ್ರದ ಆಯ್ಕೆ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಈ ಬಾರಿ, ನಿರ್ದೇಶಕ ರಮಾನಂದ ಸಾಗರ್ ಅವರ ಮೊಮ್ಮಗ ಶಿವ್ ಸಾಗರ್, ಈ ಆಯ್ಕೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1987ರ ಐಕಾನಿಕ್ ದೂರದರ್ಶನ ಸರಣಿ ರಾಮಾಯಣವನ್ನು ರಚಿಸಿದ ರಮಾನಂದ ಸಾಗರ್ ಅವರ ಮೊಮ್ಮಗ, ರಾಮನ ಪಾತ್ರಕ್ಕೆ ಹಿಂದಿನ ಚಿತ್ರಗಳಿಂದ ಬಲವಾದ ಇಮೇಜ್ ಇಲ್ಲದ ನಟನ ಅಗತ್ಯವಿದೆ ಎಂದಿದ್ದಾರೆ.
'ಅನಿಮಲ್ ಚಿತ್ರದಲ್ಲಿ ರಣಬೀರ್ ಅವರನ್ನು ನೋಡಿದ ನಂತರ, ಅವರನ್ನು ರಾಮನಾಗಿ ನೋಡುವುದು ವೈಯಕ್ತಿಕವಾಗಿ ಕಷ್ಟವಾಗುತ್ತಿದೆ. ತಮ್ಮ ಹೇಳಿಕೆಗಳು ರಣಬೀರ್ ಅವರ ನಟನಾ ಕೌಶಲ್ಯದ ಬಗ್ಗೆ ಅಲ್ಲ, ಬದಲಾಗಿ ಒಬ್ಬ ನಟನು ಹೊಂದಿರುವ ಇಮೇಜ್ ಬಗ್ಗೆ' ಎಂದು ಶಿವ್ ಹೇಳಿದರು.
'ಆ ಒಂದು ಪಾತ್ರವನ್ನು ಹೊರತುಪಡಿಸಿ, ಉಳಿದ ಪಾತ್ರವರ್ಗ ನನಗೆ ತುಂಬಾ ಇಷ್ಟ. ವೈಯಕ್ತಿಕವಾಗಿ, ನಾನು ರಣಬೀರ್ ಕಪೂರ್ ಅವರನ್ನು ರಾಮ ಆಗಿ ಸ್ವೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಅನಿಮಲ್ ನಂತರ, ನಾನು ಅವರನ್ನು ರಾಮನಾಗಿ ನೋಡಲು ಸಾಧ್ಯವಿಲ್ಲ. ನಾನು ರಾಮನಾಗಿ ಅವರನ್ನು ನೋಡಿದಾಗ, ಆ ಪಾತ್ರಕ್ಕೆ ಹೊಸ ಮುಖವನ್ನು ಕರೆತರಬೇಕಾಗಿತ್ತು ಎಂದು ನನಗೆ ಅನಿಸುತ್ತದೆ' ಎಂದು ಶಿವ್ ಸಾಗರ್ ಹೇಳಿರುವುದಾಗಿ ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಣವಿಜಯ್ ಸಿಂಗ್ ಪಾತ್ರದಲ್ಲಿ ರಣಬೀರ್ ಅವರ ಅಭಿನಯವು ತುಂಬಾ ವಿಭಿನ್ನವಾಗಿತ್ತು. ಪಾತ್ರವು ಹಿಂಸಾತ್ಮಕ ಮತ್ತು ಆಕ್ರಮಣಕಾರಿಯಾಗಿತ್ತು. ಆ ಹಿಂದಿನ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ಉಪಸ್ಥಿತಿಯು ಕೆಲವು ವೀಕ್ಷಕರಿಗೆ ನಟನನ್ನು ಭಗವಾನ್ ರಾಮ ಎಂದು ಸ್ವೀಕರಿಸಲು ಕಷ್ಟಕರವಾಗಿಸಬಹುದು ಎಂದು ಶಿವ್ ಹೇಳಿದರು.
'ನಾವು ರಣಬೀರ್ ಅವರನ್ನು ವಿಭಿನ್ನ ಪಾತ್ರಗಳಲ್ಲಿ ನೋಡಿದ್ದೇವೆ; ಅವರು ತುಂಬಾ ಒಳ್ಳೆಯ ನಟ. ವೈಯಕ್ತಿಕವಾಗಿ, ನನಗೆ ಅವರ ವಿರುದ್ಧ ಬೇರೆ ಯಾವುದೇ ತಕರಾರು ಇಲ್ಲ. ಅವರು ಮಾರ್ಕೆಟಿಂಗ್ ಪುಶ್ ಬಯಸುವ ಕಾರಣ ಅವರನ್ನು ಈ ಯೋಜನೆಗೆ ತೆಗೆದುಕೊಂಡಿರಬೇಕು ಎಂದು ನಾನು ಭಾವಿಸುತ್ತೇನೆ ಮತ್ತು ಬಹುಶಃ ಅವರು ರಣಬೀರ್ ಅವರನ್ನು ತೆಗೆದುಕೊಳ್ಳದಿದ್ದರೆ, ಚಿತ್ರವು ಇಷ್ಟೊಂದು ಚೆನ್ನಾಗಿ ಮಾರುಕಟ್ಟೆಗೆ ಬರುತ್ತಿರಲಿಲ್ಲ. ಆದ್ದರಿಂದ ಅದು ಕೂಡ ಯೋಚಿಸಬೇಕಾದ ವಿಷಯ. ಆದರೆ ಅಂತಹ ಪಾತ್ರಗಳಿಗೆ ಹೊಸ ಮುಖವನ್ನು ತೆಗೆದುಕೊಳ್ಳುವುದು ಉತ್ತಮ ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ' ಎಂದರು.
'ನೀವು ತುಂಬಾ ಬಲವಾದ ತಾರಾಗಣ ಹೊಂದಿದ್ದೀರಿ. ರಾವಣನಾಗಿ ಯಶ್ ತುಂಬಾ ಚೆನ್ನಾಗಿ ಕಾಣುತ್ತಾರೆ. ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ, ಅವರ ಬಳಿ ಅಷ್ಟೊಂದು ಲಗೇಜ್ ಇಲ್ಲ. ರಣಬೀರ್ ಕಪೂರ್ ಅವರಿಗೆ ಸಾಕಷ್ಟು ಲಗೇಜ್ ಇದೆ. ಅದಕ್ಕಾಗಿಯೇ ನಾವು ಸಾಮಾನ್ಯವಾಗಿ ನಮ್ಮ ಧಾರಾವಾಹಿಗಳಲ್ಲಿ ಹೊಸ ಮುಖವನ್ನು ತೆಗೆದುಕೊಳ್ಳುತ್ತೇವೆ. ಆಗ ಅವರಿಗೆ ಯಾವುದೇ ಲಗೇಜ್ ಅಥವಾ ಇತಿಹಾಸ ಇರುವುದಿಲ್ಲ' ಎಂದರು.
ಆದರೂ, ಶಿವ್ ತನ್ನ ಅಭಿಪ್ರಾಯ ಕೇವಲ ಒಂದು ದೃಷ್ಟಿಕೋನವಾಗಿದೆ. ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ರಣಬೀರ್ ರಾಮನಾಗಿ ಹೇಗೆ ಹೊಂದಿಕೊಂಡಿದ್ದಾರೆ ಎಂಬುದನ್ನು ಪ್ರೇಕ್ಷಕರು ಅಂತಿಮವಾಗಿ ನಿರ್ಧರಿಸುತ್ತಾರೆ ಎಂದರು.
ರಾಮಾಯಣವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ ಮತ್ತು ನಮಿತ್ ಮಲ್ಹೋತ್ರಾ ನಿರ್ಮಿಸಿದ್ದಾರೆ. ಎರಡು ಭಾಗಗಳ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ರವಿ ದುಬೆ ಮತ್ತು ಸನ್ನಿ ಡಿಯೋಲ್ ನಟಿಸಿದ್ದಾರೆ. ರಮಾನಂದ ಸಾಗರ್ ಅವರ ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್, ರಾಜ ದಶರಥನಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಮೊದಲ ಭಾಗವು ಈ ನವೆಂಬರ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಎರಡನೇ ಭಾಗವು 2027ರ ದೀಪಾವಳಿ ಸುಮಾರಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.