ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್
ಬೆಂಗಳೂರು: ನಟ ಗಣೇಶ್ ಮತ್ತೆ ತಮ್ಮ ಲಯವನ್ನು ಕಂಡುಕೊಂಡಿರುವಂತಿದೆ. 'ಜೂಮ್' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಶಶಾಂಕ್ ನಿರ್ದೇಶನದ ಮುಂಗಾರು ಮಳೆ 2 ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಈಗ ಮತ್ತೊಂದು ಆಶಾದಾಯಕ ಸುದ್ದಿಯ ಪ್ರಕಾರ ಮೂಲ 'ಮುಂಗಾರು ಮಳೆ'ಯ ಸೃಷ್ಟಿಕರ್ತ ಯೋಗರಾಜ್ ಭಟ್, ಗಣೇಶ್ ಅವರ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಸಿನೆಮಾ ಅಕ್ಟೊಬರ್ ನಿಂದ ಚಿತ್ರೀಕರಣ ಪ್ರಾರಂಭಿಸಲಿದೆ.
ಯೋಗರಾಜ್ ಭಟ್ ನಿರ್ದೇಶನದಲ್ಲಿ 2006 ರಲ್ಲಿ ಮೂಡಿಬಂದಿದ್ದ ಗಣೇಶ್ ಅವರ 'ಮುಂಗಾರು ಮಳೆ' ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಮೂಡಿಸಿದ್ದ ಚಿತ್ರ. ನಂತರ ಇವರಿಬ್ಬರ ಜೋಡಿಯಲ್ಲಿ 'ಗಾಳಿಪಟ' ಸಿನೆಮಾ ಮೂಡಿಬಂದಿತ್ತು. ನಂತರ ಈಗ ದೀರ್ಘ ವಿರಾಮದ ನಂತರ ಇಬ್ಬರು ಒಟ್ಟಾಗಿದ್ದಾರೆ.
ಮತ್ತೊಂದು ಸಿನೆಮಾ ಘೋಷಿಸುವುದಕ್ಕೂ ಮುಂಚಿತವಾಗಿ ಯೋಗ್ಯ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದೆ ಎನ್ನುವ ಯೋಗರಾಜ್ ಭಟ್ ಈಗ ಹ್ಯಾಟ್ರಿಕ್ ಹೊಡೆಯಲು ಉತ್ಸುಕರಾಗಿದ್ದಾರೆ. ಈ ಸಿನೆಮಾಗೆ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಸಹನಿರ್ಮಾಪಕರು.
"ಹೊಸ ಸಿನೆಮಾಗೆ ಚಾಲನೆ ನೀಡಲು ಸಮಯ ಬಂದಿರುವುದಕ್ಕೆ ಬಹಳ ಖುಷಿಯಿದೆ. ಸ್ಕ್ರಿಪ್ಟ್ ಬಹುತೇಕ ಸಂಪೂರ್ಣಗೊಂಡಿದೆ. ಇದು ಸರಳ ಪ್ರೇಮ ಕಥೆ ಮತ್ತು ಕೌಟುಂಬಿಕ ಮನರಂಜನಾ ಚಿತ್ರ" ಎನ್ನುತ್ತಾರೆ ಯೋಗರಾಜ್ ಭಟ್.
ಚಿತ್ರತಂಡ ಶೀಘ್ರದಲ್ಲೇ ಶೀರ್ಷಿಕೆಯನ್ನು ಅಂತಿಮಗೊಳಿಸಲಿದೆಯಂತೆ. ವಿ ಹರಿಕೃಷ್ಣ ಸಂಗೀತ ನೀಡುತ್ತಿದ್ದು "ಜಯಂತ್ ಕಾಯ್ಕಿಣಿ ಮತ್ತು ನಾನು ಗೀತರಚನಾಕಾರರು. ಉಳಿದ ತಾರಾಗಣದ ಆಯ್ಕೆಯಲ್ಲಿದ್ದೇವೆ" ಎನ್ನುತ್ತಾರೆ ಯೋಗರಾಜ್ ಭಟ್.
ಗಣೇಶ್ ಅವರಿಗೆ ಇದು ದೀರ್ಘ ಕಾಲದ ಕಾಯುವಿಕೆಯಾಗಿತ್ತು. "ನಾನು ಶಾಂತಿಯುತವಾಗಿ ಕಾದಿದ್ದೇನೆ ಮತ್ತು ಈಗ ಯೋಗರಾಜ್ ಭಟ್ ಹಸಿರು ನಿಶಾನೆ ತೋರಲು ಕಾಯುತ್ತಿದ್ದೇನೆ. ನಾವಿಬ್ಬರು ಮತ್ತೆ ಒಟ್ಟಿಗೆ ಕೆಲಸ ಮಾಡುವುದನ್ನು ನೋಡಲು ಕಾತರರಾಗಿದ್ದ ಪ್ರೇಕ್ಷಕರ ಆಸೆಯನ್ನು ಇದು ತಣಿಸಲಿದೆ" ಎನ್ನುತ್ತಾರೆ ಗಣೇಶ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos