ಸಿನಿಮಾ ಸುದ್ದಿ

ಜುಲೈ 12ರಿಂದ ಮೂರು ಮುದ್ದು ಮನಸುಗಳ ‘ಯಾನ' ಆರಂಭ, ಟ್ರೇಲರ್ ಬಿಡುಗಡೆ!

Vishwanath S
ಬೆಂಗಳೂರು: ಹಿರಿಯ ಕಲಾವಿದರಾದ ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೂವರು ಪುತ್ರಿಯರ ಮೊದಲ ಚಿತ್ರ 'ಯಾನ' ಜುಲೈ 12ರಂದು ತೆರೆಕಾಣಲಿದೆ.
ಆಕ್ಮೆ ಮೂವೀಸ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಹರೀಶ್ ಶೇರೆಗಾರ್ ನಿರ್ಮಿಸುತ್ತಿರುವ ಚಿತ್ರಕ್ಕೆ ಸ್ವತಃ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ್ದು, ವೈನಿಧಿ,ವೈಭವಿ, ವೈಸಿರಿಗೆ ಶುಭ ಕೋರಿದ್ದಾರೆ “ನಾಲ್ಕು ವರ್ಷಗಳ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ಇಂದು ಅವರು ಇದ್ದಿದ್ದರೆ ಟ್ರೇಲರ್ ಬಿಡುಗಡೆಯ ಕಾರ್ಯಕ್ರಮ ಬೇರೆಯದೇ ಸ್ವರೂಪ ಪಡೆದುಕೊಳ್ಳುತ್ತಿತ್ತು” ಎಂದು ಯಶ್ ತಿಳಿಸಿದರು.
“ಟ್ರೇಲರ್ ನೋಡಿದರೆ ನನ್ನ ಅಭಿನಯದ ಮೊಗ್ಗಿನ ಮನಸು ಚಿತ್ರ ಜ್ಞಾಪಕಕ್ಕೆ ಬರುತ್ತದೆ. ಅದೂ ಕೂಡ ಹದಿಹರಯದ ಹೆಣ್ಣುಮಕ್ಕಳ ನವಿರಾದ ಪ್ರೇಮಕಥೆ” ಎಂದರು.
ಯಾವುದೇ ಕಡಿವಾಣವಿಲ್ಲದೆ ಸ್ವತಂತ್ರವಾಗಿ ಹಕ್ಕಿಯಂತೆ ಹಾರಬೇಕೆಂದು ಬಯಸುವ ವೈನಿಧಿ (ಅಂಜಲಿ), ವೈಭವಿ (ಮಾಯಾ), ವೈಸಿರಿ (ನಂದಿನಿ) ಎಂಜಾಯ್ ಮಾಡಬೇಕೆಂದು ಬೆಂಗಳೂರಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ನಡೆಯುವ ಘಟನೆಗಳೇನು ಎಂಬುದು ಚಿತ್ರದ ತಿರುಳು. 
ವೈನಿಧಿ, ವೈಭವಿ, ವೈಸಿರಿಗೆ ಜೋಡಿಯಾಗಿ ಸುಮುಖ, ಚಕ್ರವರ್ತಿ, ಅಭಿಷೇಕ್ ರಾಯಕರ್ ನಟಿಸಿದ್ದಾರೆ. ತಂತ್ರಜ್ಞರೂ ಸೇರಿದಂತೆ 40 ಹೊಸಬರು ಚಿತ್ರಕ್ಕಾಗಿ ಕಾರ್ಯನಿರ್ವಹಿಸಿದ್ದಾರೆ. ಹಿರಿಯ ಕಲಾವಿದರಾದ ಅನಂತನಾಗ್‌, ಸುಹಾಸಿನಿ, ರಾಮಕೃಷ್ಣ, ಶಿವರಾಜ್ ಕೆ ಆರ್ ಪೇಟೆ, ಸಾಧುಕೋಕಿಲ, ಚಿಕ್ಕಣ್ಣ ಮೊದಲಾದವರಿದ್ದಾರೆ. 
“ಕಳೆದ ನಾಲ್ಕು ವರ್ಷಗಳಿಂದ ಕೇವಲ 'ಯಾನ' ಹೆಸರನ್ನೇ ಕನವರಿಸುವಂತಾಗಿತ್ತು. ಕೊನೆಗೂ ಬಿಡುಗಡೆಯ ದಿನಾಂದ ಪ್ರಕಟವಾಗಿದೆ.  ಪ್ರೇಕ್ಷಕರು ನನ್ನ ಮೂವರು ಮಕ್ಕಳನ್ನು ಹರಸಬೇಕು” ಎಂದು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಮನವಿ ಮಾಡಿದ್ದಾರೆ. 
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸುಂದರರಾಜ್, ಪ್ರಮೀಳಾ ಜೋಷಾಯ್ ದಂಪತಿ, ರಾಜೇಂದ್ರ ಸಿಂಗ್ ಬಾಬು ಮೊದಲಾದವರು ಭಾಗಿಯಾಗಿ ಶುಭ ಕೋರಿದರು.
SCROLL FOR NEXT