ಸಿನಿಮಾ ಸುದ್ದಿ

ನೊಂದ ಹೆಣ್ಣಿನ ಕಥೆ ‘ಬೆಂಕಿಯಲ್ಲಿ ಅರಳಿದ ಹೂವು’, ಸುಹಾಸಿನಿ ಪಾತ್ರದಲ್ಲಿ ಅನುಪಮಾ ಗೌಡ

Lingaraj Badiger

ಬೆಂಗಳೂರು: ‘ಬೆಂಕಿಯಲ್ಲಿ ಅರಳಿದ ಹೂವು’ ಹೆಸರು ಕೇಳಿದ ಕೂಡಲೇ ಖ್ಯಾತ ನಟಿ ಸುಹಾಸಿನಿ ನೆನಪಾಗುತ್ತಾರೆ ಹೌದು, ಕೆ ಬಾಲಚಂದರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
  
ಇದೀಗ ಇದೇ ಶೀರ್ಷಿಕೆಯ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಅನುಪಮಾ ಗೌಡ ಪ್ರಧಾನ ಭೂಮಿಕೆಯಲ್ಲಿದ್ದು, ದೇವಿಶ್ರೀ ಪ್ರಸಾದ್ ನಿರ್ದೇಶನವಿದೆ.

ಬಿಗ್ ಬಾಸ್ ಮೂಲಕ ಕನ್ನಡದ ಅಭಿಮಾನಿಗಳ ಮನದಲ್ಲಿ ಅಚ್ಚು ಹೊತ್ತಿರುವ ನಟಿ, ನಿರೂಪಕಿ ಅನುಪಮಾ ಗೌಡ ಅವರು ಸುಹಾಸಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೋಮಾರಿ ಗಂಡನ ಜತೆ ಹೆಣಗಾಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೆಣ್ಣಿನ ಮೇಲೆ ನಡೆಯುವ ಶೋಷಣೆ, ಗಾರ್ಮೆಂಟ್ ಗಳಲ್ಲಿ ದುಡಿಯುವ ಮಹಿಳೆಯರ ದಳ್ಳುರಿಯ ಮೇಲೆ ಬೆಳಕು ಚೆಲ್ಲಲಾಗಿದೆ ಎಂದು ನಿರ್ಮಾಪಕ ಹಾಗೂ ಚಿತ್ರಕ್ಕೆ ಬಂಡವಾಳ ಹೂಡಿರುವ ವಿಶು ಆಚಾರ್ ತಿಳಿಸಿದ್ದಾರೆ.

‘ನನ್ನ ತಾಯಿ ಕೂಡ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಹಾಗಾಗಿ ನನಗೆ ಅಲ್ಲಿನ ಕಷ್ಟದ ಬದುಕಿನ ಪರಿಚಯವಿದೆ. ಚಿತ್ರದ ಕಥಾವಸ್ತು ನಮ್ಮ ಬದುಕಿಗೂ ಎಲ್ಲೋ ಒಂದುಕಡೆ ಕನೆಕ್ಟ್ ಆಗಿರುತ್ತದೆ. ಈ ಚಿತ್ರವನ್ನು ಕಾಲೇಜು ಹುಡುಗ– ಹುಡುಗಿಯರು ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಗಾರ್ಮೆಂಟ್ಸ್‌ ನೌಕರರು ನೋಡಬೇಕೆನ್ನುವುದು ನಮ್ಮ ಆಶಯ. ಈ ಚಿತ್ರವನ್ನು ನೋಡಿ ಒಂದೇ ಒಂದು ಕುಟುಂಬವಾದರೂ ಬದಲಾದರೆ ಚಿತ್ರತಂಡಕ್ಕೆ ಸಾರ್ಥಕತೆ ಬರುತ್ತದೆ’ ಎಂದು ನಾಯಕಿ ಅನುಪಮಾ ಗೌಡ ಹೇಳಿದ್ದಾರೆ.

ಸಾಹಿತಿ ದೊಡ್ಡರಂಗೇಗೌಡ ಮತ್ತು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿ, ವಿ. ಮನೋಹರ್ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಅನುರಾಧಾ ಭಟ್ ಹಾಡಿದ್ದಾರೆ.

SCROLL FOR NEXT