ಸಿನಿಮಾ ಸುದ್ದಿ

ಕಾಂತಾರ ಸೀಕ್ವೆಲ್ ಬಗ್ಗೆ ಊಹಾಪೋಹಗಳನ್ನು ಹಬ್ಬಿಸಬೇಡಿ: ನಟ, ನಿರ್ದೇಶಕ ರಿಷಬ್ ಶೆಟ್ಟಿ

Ramyashree GN

ಕಾಂತಾರದ ಸಂಭವನೀಯ ಸೀಕ್ವೆಲ್ ಕುರಿತು ವದಂತಿಗಳು ಹಬ್ಬುತ್ತಿರುವ ಬೆನ್ನಲ್ಲೇ, ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗಿನ ಸಂವಾದದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಂತಹ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ. 'ಪ್ರಾಮಾಣಿಕವಾಗಿ, ನಾನು ಕಾಂತಾರ ಸಿನಿಮಾದೊಂದಿಗಿನ ನನ್ನ ಬದ್ಧತೆಯನ್ನು ಇನ್ನೂ ಪೂರ್ಣಗೊಳಿಸುತ್ತಿದ್ದೇನೆ ಮತ್ತು ನನ್ನ ಮುಂದಿನ ಯೋಜನೆಯಲ್ಲಿ ನಾನಿನ್ನೂ ತೊಡಗಿಸಿಕೊಂಡಿಲ್ಲ' ಎಂದಿದ್ದಾರೆ.

'ನಾವು ಯಾವುದನ್ನು ತೆಗೆದುಕೊಳ್ಳಲು ಯೋಜಿಸುತ್ತೇವೋ ಅದು ಸಾಮಾನ್ಯ ಚಿತ್ರವಾಗಿರುವುದಿಲ್ಲ. ಬದಲಿಗೆ, ನಾವು ಸ್ಕ್ರಿಪ್ಟ್ ಅನ್ನು ಫೈನಲ್ ಮಾಡುವ ಮುನ್ನ ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಮತ್ತು ಶ್ರಮದಾಯಕ ಸಂಶೋಧನೆಯ ಅಗತ್ಯವಿದೆ. ಅದೊಂದು ದೊಡ್ಡ ಕೆಲಸ' ಎನ್ನುವ ರಿಷಬ್, ಪ್ರೇಕ್ಷಕರನ್ನು ನಿರೀಕ್ಷಲೇಬೇಕು ಮತ್ತು ಕಾಂತಾರ 2 ಸಿನಿಮಾ ಸುತ್ತ ಎದ್ದಿರುವ ವಿವಿಧ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.

'ಕಾಂತಾರ 2 ಅಥವಾ ಇನ್ನಾವುದೇ ಪ್ರಾಜೆಕ್ಟ್ ಆಗಿರಲಿ, ಆ ಬಗ್ಗೆ ಶೀಘ್ರದಲ್ಲೇ ಅಧಿಕೃತ ವಿವರಗಳನ್ನು ಬಿಡುಗಡೆ ಮಾಡುತ್ತೇವೆ' ಎಂದು ಅವರು ಹೇಳಿದರು. ರಿಷಬ್ ಶೆಟ್ಟಿ ಮತ್ತು ಕಾಂತಾರ ತಂಡ (ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಟಿ ಸಪ್ತಮಿ ಗೌಡ) ಇತ್ತೀಚೆಗೆ ಮಂಗಳೂರಿನ ಅಣ್ಣಪ್ಪ ಪಂಜುರ್ಲಿ ಕೋಲಕ್ಕೆ ಭೇಟಿ ನೀಡಿದ್ದರಿಂದ ಈ ಸುತ್ತ ಊಹಾಪೋಹಗಳು ಎದ್ದಿವೆ.

ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿದ್ದು, ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಬಾಹುಬಲಿಯಿಂದ ಸುಳಿವುಗಳನ್ನು ತೆಗೆದುಕೊಂಡು ಸೀಕ್ವೆಲ್ ಅನ್ನು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿದೆ. ವಾಸ್ತವವಾಗಿ, ಚಿತ್ರಕ್ಕೆ ಜನವರಿ 2023 ರಲ್ಲಿ ಶೂಟಿಂಗ್ ನಡೆಯಲಿದೆ ಎನ್ನುವ ವದಂತಿಗಳು ಹರಡಿವೆ.

ದೇವಾಲಯದ ಭೇಟಿಯ ಕುರಿತು ಮಾತನಾಡಿರುವ ರಿಷಬ್, 'ದೇವಸ್ಥಾನಕ್ಕೆ ಭೇಟಿ ನೀಡಲು, ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಮತ್ತು ಕಾಂತಾರ ಚಿತ್ರದ ಯಶಸ್ಸಿಗಾಗಿ ದೇವರಿಗೆ ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಲು ನಮ್ಮ ತಂಡದ ಹರಕೆ ಇದಾಗಿದೆ. ಇದು ದೇವಸ್ಥಾನದಲ್ಲಿ ಕಳೆದ ಒಂದು ಭಾವನಾತ್ಮಕ ಮತ್ತು ಸುಂದರ ಕ್ಷಣ. ಅದಕ್ಕಿಂತ ಹೆಚ್ಚೇನೂ ಇಲ್ಲ. ಆಶ್ಚರ್ಯಕರವಾಗಿ, ನಮ್ಮ ಭೇಟಿಯು ಬಹಳಷ್ಟು ಅಭಿಪ್ರಾಯಗಳಿಗೆ ಕಾರಣವಾಯಿತು' ಎಂದಿದ್ದಾರೆ.

SCROLL FOR NEXT