ಸಿನಿಮಾ ಸುದ್ದಿ

ಸುದೀಪ್ ನಮ್ಮ ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರು: ನಿರೂಪ್ ಭಂಡಾರಿ

Ramyashree GN

ತೀವ್ರ ಕುತೂಹಲ ಕೆರಳಿಸಿರುವ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಎರಡೇ ದಿನಗಳಲ್ಲಿ ಪ್ರೇಕ್ಷಕರೆದುರಿಗೆ ಬರಲಿರುವ ವಿಕ್ರಾಂತ್ ರೋಣ ಸಿನಿಮಾದ ಹಾಡುಗಳು ಕೂಡ ಮೆಚ್ಚುಗೆ ಪಡೆದುಕೊಂಡಿವೆ. ಇನ್ನು ರಂಗಿತರಂಗ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದ ನಟ ನಿರೂಪ್ ಭಂಡಾರಿ ಅವರಿಗೆ ವಿಕ್ರಾಂತ್ ರೋಣ ಸಿನಿಮಾವು ವೃತ್ತಿ ಜೀವನದ ಎರಡನೇ ಯಶಸ್ಸು ನೀಡುತ್ತದೆ ಎಂದೇ ಹೇಳಲಾಗಿದೆ. ಇದೀಗ ಸುದೀಪ್ ಬಗ್ಗೆ ನಿರೂಪ್ ಮಾತನಾಡಿದ್ದಾರೆ.

ನಿರೂಪ್ ಭಂಡಾರಿ
<strong>ನಿರೂಪ್ ಭಂಡಾರಿ</strong>

'ನಮ್ಮ ತಂದೆ ಸುಧಾಕರ್ ಭಾಂಡಾರಿ ನಿರ್ದೇಶಿಸಿದ್ದ ಪ್ರೇಮದ ಕಾದಂಬರಿ ಎಂಬ ಧಾರವಾಹಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸಮಯದಿಂದಲೂ ನಾನು ಸುದೀಪ್ ಸರ್ ಅವರನ್ನು ಹಿಂಬಾಲಿಸುತ್ತಿದ್ದೇನೆ. ನಾನು ಆಗ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ತಂದೆಯೇ ಅವರ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ಮನೆಯಲ್ಲಿ ಅವರ ಫೋಟೊಗಳಿದ್ದವು. ನಮ್ಮ ಕುಟುಂಬ ಅವರ ಎಲ್ಲ ಸಿನಿಮಾಗಳನ್ನು ನೋಡುತ್ತಾ ಬಂದಿದೆ. ನನ್ನ ಎರಡನೇ ಸಿನಿಮಾ 'ರಾಜರತ್ನ' ಬಿಡುಗಡೆ ಸಮಯದಲ್ಲಿ ಸುದೀಪ್ ಸರ್ ಅವರೊಂದಿಗೆ ನನಗೆ ವಯಕ್ತಿಕವಾಗಿ ಒಂದು ರೀತಿಯ ಬಾಂಡಿಂಗ್ ಬೆಳೆಯಿತು. ಏಕೆಂದರೆ ನಮ್ಮಿಬ್ಬರ ಕಾಮನ್ ಪ್ರೀತಿ ಕ್ರಿಕೆಟ್ ಆಗಿತ್ತು. ಅವರೊಂದಿಗೆ ಕೆಲಸ ಮಾಡಬೇಕೆಂಬ ಕನಸು ವಿಕ್ರಾಂತ್ ರೋಣ ಸಿನಿಮಾದ ಮೂಲಕ ನನಸಾಗಿದೆ'' ಎನ್ನುತ್ತಾರೆ ನಿರೂಪ್.

ಸುದೀಪ್ ಅವರೊಟ್ಟಿಗೆ ಕೆಲಸ ಮಾಡುವ ತಮ್ಮ ಅನುಭವದ ಕುರಿತು ಮಾತನಾಡಿ, 'ಅವರು ಯಾವಾಗಲೂ ಪ್ರೋತ್ಸಾಹದಾಯಕವಾಗಿರುತ್ತಾರೆ. ಅವರು ನಮ್ಮ ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರನ್ನು ತುಂಬಾ ಹತ್ತಿರದಿಂದ ಗಮನಿಸಿದ್ದೇನೆ. ಅವರೊಂದಿಗೆ ನಟಿಸುವಾಗ, ಪ್ರತಿಯೊಂದು ದೃಶ್ಯವನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಮತ್ತು ನಿಭಾಯಿಸುತ್ತಾರೆ ಎಂಬುದನ್ನು ನಾನು ಗಮನಿಸುತ್ತಿದ್ದೆ. ನಮ್ಮೊಂದಿಗೆ ಹಂಚಿಕೊಳ್ಳಲು ಅವರದ್ದೇ ಆದ ಅನುಭವಗಳಿವೆ. ನಟನೆಯನ್ನು ಹೊರತುಪಡಿಸಿಯೂ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ' ಎಂದಿದ್ದಾರೆ.

'ನನ್ನ ಪಾತ್ರ ಏನೆಂಬುದು ಸಿನಿಮಾ ನೋಡಿದ ಬಳಿಕವೇ ತಿಳಿಯಲಿದೆ. ಪನ್ನ ಎನ್ನುವ ಪಾತ್ರದಲ್ಲಿ ನೀತಾ ಅಶೋಕ್ ನಟಿಸಿದ್ದಾರೆ. ನಾವಿಬ್ಬರೂ ಒಂದು ರೊಮ್ಯಾಂಟಿಕ್ ಹಾಡನ್ನು ಕೂಡ ಮಾಡಿದ್ದೇವೆ. ಸುದೀಪ್, ನೀತಾ ಮತ್ತು ನನ್ನ ಕಾಂಬಿನೇಶನ್‌ನಲ್ಲಿಯೂ ಒಂದು ಹಾಡಿದೆ. ಇದು ನನ್ನ ಮತ್ತು ಸುದೀಪ್ ಅವರ ಕೆಮಿಸ್ಟ್ರಿಯನ್ನು ತೆರೆಮೇಲೆ ತೋರಿಸಲಿದೆ' ಎಂದಿದ್ದಾರೆ.

'ನಾನು ಯಾವಾಗಲೂ ನಟನಾಗಿ ಉಳಿಯಲು ಇಷ್ಟಪಡುತ್ತೇನೆ ಮತ್ತು ಅದು ಅನೂಪ್‌ನಿಂದ ಸಾಧ್ಯವಾಗುತ್ತದೆ. ಇದು ನನಗೆ ಟ್ಯಾಲೆಂಟ್ ಇದೆ ಎಂದರ್ಥವಲ್ಲ. ನಾನು ಏನನ್ನೇ ಮಾಡಲು ಮುಂದಾದರೂ ಯಾವುದೇ ನಿರ್ಧಾರಗಳನ್ನು ಆತ್ಮವಿಶ್ವಾಸದಿಂದ ತೆಗೆದುಕೊಳ್ಳುತ್ತೇನೆ. ಇದೆಲ್ಲ ನನಗೆ ಅನೂಪ್‌ನೊಂದಿಗೆ ಸಾಧ್ಯವಾಗುತ್ತದೆ' ಎಂದು ತಿಳಿಸಿದ್ದಾರೆ.

SCROLL FOR NEXT