ಸಿನಿಮಾ ಸುದ್ದಿ

ಕಾಂತಾರ ನಮಗೆಲ್ಲ ಹೆಮ್ಮೆ ತಂದಿದೆ, ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೇರಿದೆ: ಶಿವರಾಜ್ ಕುಮಾರ್

Manjula VN

ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೇರಿದ್ದು, ಕಾಂತಾರ ನಮಗೆಲ್ಲ ಹೆಮ್ಮೆ ತಂದಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.

ಸಿ.ಆರ್.ಮನೋಹರ್ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗ ಯಾರಿಗೂ ಕಡಿಮೆ ಇಲ್ಲ. "ಕಾಂತಾರ" ಚಿತ್ರ ನಮಗೆಲ್ಲ ಒಂದು ಹೆಮ್ಮೆ. ಆ ಚಿತ್ರದ ಟ್ರೇಲರ್ ಮತ್ತು ಸಾಂಗ್ ನೋಡಿ ನಾನು ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದ್ದೆ. ‘ರೇಮೊ’ಕೂಡ ಅದೇ ರೀತಿ ಸೂಪರ್ ಹಿಟ್ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆಂದು ಹೇಳಿದರು.

ಇದೇ ವೇಳೆ ಶಿವರಾಜ್ ಕುಮಾರ್ ಅವರು ನಟಿ ಆಶಿಕಾ ರಂಗನಾಥ್ ಅವರನ್ನು ಹಾಡಿಹೊಗಳಿದರು. ನಮ್ ಹುಡುಗಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ, ಆಲ್ರೆಡಿ ಮುದ್ದಾಗಿ ಇದ್ದಾರೆ ಎಂದು ಹೊಗಳಿದರು.

ಬಳಿಕ ಮಾತನಾಡಿದ ಚಿತ್ರದ ನಾಯಕ ನಟ ಇಶಾನ್ ಅವರು, ನನ್ನ  ವೃತ್ತಿ ಜೀವನದಲ್ಲಿ ಇನ್ನೂ ಹಲವು ಚಿತ್ರಗಳನ್ನು ಮಾಡಿದರೂ ‘ರೇಮೋ’ ಸದಾ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ ಎಂದರು.

ಆಶಿಕ ರಂಗನಾಥ್ ಅವರು ಮಾತನಾಡಿ, ಚಿತ್ರ ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದು, ನನ್ನದು ಅತ್ಯಂತ ವಿಶಿಷ್ಟ ಪಾತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಈ ಪಾತ್ರ ಮಾಡಲು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆಂದು ತಿಳಿಸಿದರು.

ಪ್ರೀತಿಯಲ್ಲಿ ಹಲವು ವಿಧಗಳಿದೆ. ಅದರಲ್ಲಿ ನಾನು ಮ್ಯೂಸಿಕಲ್ ಲವ್ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದೀನಿ. ಈ ಚಿತ್ರದಲ್ಲಿ ಎಮೋಷನ್ ಸಹ ಇದೆ. ವೈದಿ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ ಎಂದು ನಿರ್ದೇಶಕ ಪವನ್ ಒಡೆಯರ್ ಹೇಳಿದರು.

ನಟ ಇಶಾನ್ ಮತ್ತು ಆಶಿಕಾ ರಂಗನಾಥ್ ನಟನೆಯ ರೇಮೋ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರೇಮೋ ಸಿನಿಮಾದ ಟ್ರೈಲರ್ ಈಗ ಅಭಿಮಾನಿಗಳ ಮುಂದೆ ಬಂದಿದೆ.

SCROLL FOR NEXT