ಸಿನಿಮಾ ಸುದ್ದಿ

ಕಬ್ಜ 2 ಘೋಷಣೆ ಮಾಡಿದ ನಿರ್ದೇಶಕ ಆರ್ ಚಂದ್ರು; ಮತ್ತೆ ಉಪೇಂದ್ರ, ಶಿವಣ್ಣ, ಸುದೀಪ್ ಇರಲಿದ್ದಾರಾ?

Ramyashree GN

ನಿರ್ದೇಶಕ ಆರ್ ಚಂದ್ರು ಅವರ ಮೊದಲ ಬಹುಭಾಷಾ ಚಿತ್ರ, ಉಪೇಂದ್ರ ಅಭಿನಯದ, ಸುದೀಪ್ ಮತ್ತು ಶಿವರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಬ್ಜ ಸಿನಿಮಾ ಇತ್ತೀಚೆಗೆ ಸುಮಾರು 70 ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದ್ದು, ನಿರ್ದೇಶಕರು ತಮ್ಮ ಇಡೀ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದರು. ಚಿತ್ರದಲ್ಲಿ ಶ್ರೀಯಾ ಶರಣ್ ನಾಯಕಿಯಾಗಿ ನಟಿಸಿದ್ದರು.

ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ. 'ಕಬ್ಜ ಸಿನಿಮಾಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ದಾಖಲೆಯ ಕಲೆಕ್ಷನ್ ಗಳಿಸಿದೆ. ನಾನು ಉಪೇಂದ್ರ ಅವರಿಗೆ ಋಣಿಯಾಗಿದ್ದೇನೆ ಮತ್ತು ಈ ಕ್ರೆಡಿಟ್ ಇಡೀ ತಂಡಕ್ಕೆ ಸಲ್ಲಬೇಕು' ಎಂದು ಚಂದ್ರು ಹೇಳಿದರು. 

ಈ ಮಧ್ಯೆ, ಸಿದ್ಧೇಶ್ವರ ಎಂಟರ್‌ಪ್ರೈಸಸ್ ಅಡಿಯಲ್ಲಿ ಚಿತ್ರ ನಿರ್ಮಾಣವನ್ನೂ ಮಾಡಿರುವ ನಿರ್ದೇಶಕರು ಈ ಹಿಂದೆ ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸುವ ಬಗ್ಗೆ ತಿಳಿಸಿದ್ದರು. ಆದರೆ, 'ಕಬ್ಜ' ಸಿನಿಮಾ 25ನೇ ದಿನ ಪೂರೈಸಿರುವ ಈ ಸಂದರ್ಭದಲ್ಲಿ 'ಕಬ್ಜ 2' ಬಗ್ಗೆ ಅಧಿಕೃತ ಘೋಷಣೆಯನ್ನು ಚಂದ್ರು ಮಾಡಿದ್ದಾರೆ. ಕಬ್ಜ ಸಿನಿಮಾದಲ್ಲಾದ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಕಬ್ಜ 2 ಮಾಡುತ್ತಿದ್ದೇನೆ ಎಂದು ಹೇಳಿದರು. 

ಕಬ್ಜಾ 2 ಚಿತ್ರದ ಟೈಟಲ್ ಲುಕ್ ಪೋಸ್ಟರ್ ಅನ್ನು ರಾಜಕಾರಣಿಗಳಾದ ಹೆಚ್.ಎಂ. ರೇವಣ್ಣ ಮತ್ತು ರಾಮಚಂದ್ರಗೌಡ ಅನಾವರಣಗೊಳಿಸಿದರು.  'ವಾರ್ ಬಿಗಿನ್ಸ್' ಎಂಬ ಅಡಿಬರಹದೊಂದಿಗೆ, ಪೋಸ್ಟರ್‌ನಲ್ಲಿ ಖಾಲಿ ಮರದ ಖುರ್ಚಿಯಿದೆ. ಅದರ ಪಕ್ಕದಲ್ಲೇ ಗನ್ ಅನ್ನು ಒರಗಿಸಲಾಗಿದೆ. ಇನ್ನುಳಿದಂತೆ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳಿಲ್ಲ.

ನಿರ್ದೇಶಕ ಚಂದ್ರು ದಕ್ಷಿಣ ಭಾರತದ ಭಾಷೆಗಳು ಮತ್ತು ಹಿಂದಿಯ ಉನ್ನತ ತಾರೆಯರನ್ನು ಸೀಕ್ವೆಲ್‌ಗಾಗಿ ಆಯ್ಕೆ ಮಾಡಲು ಯೋಜಿಸಿದ್ದಾರೆ. ಚಿತ್ರ ಸೆಟ್ಟೇರಿದ ನಂತರ ತಾರಾಬಳಗದ ಕುರಿತು ಚಿತ್ರತಂಡ ಹೆಚ್ಚಿನ ವಿವರಗಳನ್ನು ನೀಡಲಿದೆ.

SCROLL FOR NEXT