ನಟ ಕಮಲ್ ಹಾಸನ್ (Kamal Haasan) ಭಾರತ ಚಿತ್ರರಂಗ ಕಂಡ ಅದ್ಬುತ ಪ್ರತಿಭೆ. ಅವರಿಗೆ ಕನ್ನಡ ಚಿತ್ರರಂಗದ ಜೊತೆ ಉತ್ತಮವಾದ ನಂಟು ಇದ್ದು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಚಿತ್ರ ಇಡೀ ಭಾರತದ ಚಿತ್ರಪ್ರೇಮಿಗಳ ಗಮನ ಸೆಳೆದು ಹಿಟ್ ಆಗಿದ್ದು ಹಳೆಯ ವಿಷಯ. ಚಿತ್ರವನ್ನು ಕಮಲ್ ಹಾಸನ್ ಅವರು ವೀಕ್ಷಿಸಿದ್ದಾರೆ. ಈ ಹಿಂದೆ ಚಿತ್ರ ನೋಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಪಾರವಾಗಿ ಮೆಚ್ಚಿ ರಿಷಬ್ ಅವರನ್ನು ಚೆನ್ನೈನ ಮನೆಗೆ ಕರೆಸಿ ಸನ್ಮಾನ ಮಾಡಿದ್ದರು. ಈಗ ಕಮಲ್ ಹಾಸನ್ ಅವರು ‘ಕಾಂತಾರ’ ಸಿನಿಮಾ (Kantara Movie) ಬಗ್ಗೆ ಮೆಚ್ಚುಗೆ ಮಾತುಗಳನ್ನು ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿಗೆ ದೀರ್ಘ ಪತ್ರ ಬರೆದಿದ್ದಾರೆ. ‘ಕಾಂತಾರ’ ಕುರಿತು ತಮಗೆ ಏನೆಲ್ಲ ಅನಿಸಿದೆ ಎಂಬುದನ್ನು ಅವರು ಈ ಪತ್ರದಲ್ಲಿ ಹಂಚಿಕೊಂಡಿದ್ದಾರೆ.
ಕಮಲ್ ಹಾಸನ್ ಅವರಿಂದ ಈ ರೀತಿಯ ಮೆಚ್ಚುಗೆ ಪತ್ರ ಸಿಕ್ಕಿದ್ದಕ್ಕೆ ರಿಷಬ್ ಶೆಟ್ಟಿ ತುಂಬ ಸಂತಸಗೊಂಡಿದ್ದಾರೆ. ಆ ಪತ್ರದ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಭಾರತೀಯ ಸಿನಿಮಾ ಲೋಕದ ದಿಗ್ಗಜ ನಟನಿಂದ ಈ ಪತ್ರ ಬಂದಿದೆ. ಕಮಲ್ ಸರ್ ನೀಡಿದ ಈ ಅಚ್ಚರಿಯ ಗಿಫ್ಟ್ ನೋಡಿ ಅಪಾರ ಸಂತಸ ಆಗಿದೆ’ ಎಂದು ರಿಷಬ್ ಶೆಟ್ಟಿ ಮಾಡಿರುವ ಈ ಪೋಸ್ಟ್ ವೈರಲ್ ಆಗಿದೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ 'ಕಾಂತಾರ' ಇನ್ನಷ್ಟು ಹತ್ತಿರ: ಉತ್ತಮ ನಟ, ಉತ್ತಮ ಚಿತ್ರ ವಿಭಾಗಕ್ಕೆ ನಾಮನಿರ್ದೇಶನ
ಕಾಂತಾರ ಸಿನಿಮಾದ ದಾಖಲೆಯನ್ನು ನಿಮ್ಮ ಮುಂದಿನ ಸಿನಿಮಾದಿಂದ ಮುರಿಯಿರಿ’ ಎಂದು ಕಮಲ್ ಹಾಸನ್ ರಿಷಬ್ ಗೆ ಸಲಹೆ ನೀಡಿದ್ದಾರೆ. ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ‘ಕಾಂತಾರ’ ರಿಲೀಸ್ ಆಗುವುದಕ್ಕೂ ಮುನ್ನ ಅವರು ಒಂದಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಅವುಗಳನ್ನು ಮುಂದುವರಿಸುತ್ತಾರೋ ಅಥವಾ ಬೇರೆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಾರೋ ಎಂಬ ಕುತೂಹಲ ಅಭಿಮಾನಿಗಳಲ್ಲಿದ್ದು, ‘ಕಾಂತಾರ 2’ ಬರಲು ಹಲವರು ಕಾಯುತ್ತಿದ್ದಾರೆ.
ಆಸ್ಕರ್ ಅಂಗಳಕ್ಕೆ ಕಾಂತಾರ: ಅತ್ಯುತ್ತಮ ಚಿತ್ರಗಳಿಗೆ ನೀಡುವ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿ ‘ಕಾಂತಾರ’ ಚಿತ್ರ ಅರ್ಹತೆ ಪಡೆದಿದೆ. ಅತ್ಯುತ್ತಮ ನಟ ಮತ್ತು ಚಿತ್ರಕ್ಕೆ ಕಾಂತಾರ ನಾಮನಿರ್ದೇಶನಗೊಂಡಿದ್ದು ಇತರ 301 ಚಿತ್ರಗಳೊಂದಿಗೆ ಸ್ಪರ್ಧಿಸುತ್ತಿದೆ.