ನಟ ಅನೀಶ್ ನಟನೆಯ, ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಶಂಕರ್ ಆರಾಧ್ಯ ನಿರ್ದೇಶನದ 'ಮಾಯಾನಗರಿ' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಬಿಡುಗಡೆಗೆ ಚಿತ್ರತಂಡ ಕುತೂಹಲದಿಂದ ಎದುರುನೋಡುತ್ತಿದೆ. ಈ ಚಿತ್ರವು ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.
ಸಿನಿಮಾ ನಿರ್ದೇಶನದ ಕನಸನ್ನು ಹೊತ್ತು ಬರುವ ಯುವ ಪ್ರತಿಭೆಯ ಪಾತ್ರದಲ್ಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಾಮಿಡಿ, ಲವ್, ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಕಥಾಹಂದರವಿರುವ ಈ ಚಿತ್ರಕ್ಕೆ ಆರಾಧ್ಯ ಅವರು ನಿರ್ದೇಶನದ ಜೊತೆಗೆ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ತಾವೇ ಬರೆದಿದ್ದಾರೆ.
ಸ್ಯಾಂಡಲ್ ವುಡ್ ಪಿಕ್ಚರ್ಸ್ ಮತ್ತು ಶ್ವೇತಾ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೋರ್ ಅವರು ಚಿತ್ರಕ್ಕೆ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ ಮತ್ತು ಶ್ರೀನಿವಾಸ್ ಅವರ ಛಾಯಾಗ್ರಹಣ ಇದೆ.
ಈ ಚಿತ್ರದಲ್ಲಿ ಅನೀಶ್ ಜೊತೆಗೆ ಶ್ರಾವ್ಯ ರಾವ್ ಮತ್ತು ತೇಜು ಜೋಡಿಯಾಗಿ ನಟಿಸಿದ್ದಾರೆ. ಇವರೊಂದಿಗೆ, ಶರತ್ ಲೋಹಿತಾಶ್ವ, ಅವಿನಾಶ್ ಮತ್ತು ಸುಚೇಂದ್ರ ಪ್ರಸಾದ್ ಮುಂತಾದ ಅನುಭವಿ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ.