ಎಸ್ ನಾರಾಯಣ್
ಎಸ್ ನಾರಾಯಣ್ 
ಸಿನಿಮಾ ಸುದ್ದಿ

ಸಿನಿಮಾಗಳ ಹಾಫ್ ಸೆಂಚುರಿ ಆಗಿದೆ, ನಿವೃತ್ತಿಯಾಗಿಲ್ಲ: ಎಸ್ ನಾರಾಯಣ್

Manjula VN

ನಟ ಆದಿತ್ಯ ಮತ್ತು ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ, ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ನಿರ್ದೇಶನದ “5ಡಿ’ ಸಿನಿಮಾ ಈ ವಾರ ತೆರೆಗೆ ಬರಲು ಸಜ್ಜಾಗಿದೆ.

5ಡಿ ಚಿತ್ರ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರಿಗೆ ಹಾಗೂ ನಟ ಆದಿತ್ಯ ಅವರಿಗೆ ವಿಶೇಷ ಚಿತ್ರವಾಗಿದೆ. ಮೊದಲ ಬಾರಿಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾವನ್ನು ಎಸ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ, ನಟ ಆದಿತ್ಯ ಅವರಿಗೆ ಇದು 25ನೇ ಸಿನಿಮಾ ಆಗಿದೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಂತಹ ದಿಗ್ಗಜ ನಟರ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. 50 ಸಿನಿಮಾ ಮಾಡುವುದು ಒಂದು ಗುರಿಯಾಗಿತ್ತು. ಯಶಸ್ಸು ನೋಡಲು ಬಯಸುವ ಯಾವುದೇ ವ್ಯಕ್ತಿಯಾದರು ಪ್ರತಿ ಚಿತ್ರವನ್ನೂ ಒಂದು ಹೆಜ್ಜೆ ಎಂದೇ ಪರಿಗಣಿಸಬೇಕು. ನಾನು ಸಾಕಷ್ಟು ಚಲನಚಿತ್ರಗಳನ್ನು ಮಾಡಲು ಬಯಸಿದ್ದೆ. ದಿಗ್ಗಜ ನಟರೊಂದಿಗೆ ಕೆಲಸ ಮಾಡುವುದು ಸ್ಫೂರ್ತಿ ಮತ್ತು ಆಶೀರ್ವಾದವಾಗಿತ್ತು, 50 ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಚಿತ್ರರಂಗದಿಂದ ನಿವೃತ್ತಿಯಾಗಿಲ್ಲ ಎಂದು ಎಸ್ ನಾರಾಯಣ್ ಅವರು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹಿರಿಯ ನಿರ್ದೇಶಕರಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. ಆದರೆ, ಇದು ಮೂರ್ಖ ಮನಸ್ಥಿತಿಯಷ್ಟೇ. ಸೃಜನಶೀಲ ಕೆಲಸಕ್ಕೆ ನಿವೃತ್ತಿ ಇರುವುದಿಲ್ಲ. ಬರಹಗಾರರು ಮತ್ತು ನಿರ್ದೇಶಕರು ಕೊನೆಯವರೆಗೂ ಅದರಲ್ಲಿ ತೊಡಗಿಕೊಂಡಿರುತ್ತಾರೆ ಎಂದು ತಿಳಿಸಿದರು. ಇದೇ ವೇಳೆ ರಾಜ್ ಕಪೂರ್ ಅವರ ಬಾಬಿ ಚಿತ್ರವನ್ನು ಉದಾಹರಣೆಯಾಗಿ ನೀಡಿದರು.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದಿಗ್ಗಜ ನಟರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅನುಭವ ಇದ್ದರೂ ಕಲಿಕೆಯಲ್ಲಿ ನಾನು ಇನ್ನೂ ಚಿಕ್ಕವನಾಗಿಯೇ ಇದ್ದೇನೆ. ವಯಸ್ಸಾದಂತೆ ನನ್ನ ಆಲೋಚನೆ ಮರೆಯಾಗುವುದಿಲ್ಲ. 75 ನೇ ವಯಸ್ಸಿನಲ್ಲಿ ನನ್ನ 100 ನೇ ಚಿತ್ರವನ್ನು ನಿರ್ದೇಶಿಸಲು ಯೋಜಿಸುತ್ತಿದ್ದೇನೆ. ಅದರ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.

ಇದೇ ವೇಳೆ 5ಡಿ ಚಿತ್ರದ ಕುರಿತು ಮಾತನಾಡಿದ ಅವರು, ಇದು ಬ್ಲಡ್ ಮಾಫಿಯಾ ಕುರಿತ ಚಿತ್ರ ಕಥೆ ಇದಾಗಿದೆ. ನಮ್ಮಲ್ಲಿ ಡ್ರಗ್ ಮಾಫಿಯಾ ಮತ್ತು ಇತರ ಅನೇಕ ಸಂಘಟಿತ ಅಪರಾಧಗಳಿವೆ, ಆದರೆ ಬ್ಲಡ್ ಮಾಫಿಯಾ ಕೂಡ ಇದೆ ಎಂಬುದನ್ನು ತಿಳಿದು ನನಗೆ ಆಘಾತವಾಗಿತ್ತು. ಇದೀಗ ಅದನ್ನು ಈ ಚಿತ್ರದ ಮೂಲಕ ಹೊರತಂದಿದ್ದೇನೆ. ಈ ಬಗ್ಗೆ ಸಾಕಷ್ಟ್ಯಗಳೂ ನನ್ನ ಬಳಿ ಇವೆ. ಚಿತ್ರದ ಬಳಿಕ ವ್ಯವಸ್ಥೆಯೇ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂಬ ನಂಬಿಕೆ ನನಗಿದೆ. ಇದು ಹೊಸ ಪ್ರಕಾರದ ಚಿತ್ರವಾಗಿದ್ದು, ಪ್ರತಿ ಹನಿ ರಕ್ತವು ಮೌಲ್ಯಯುತವಾಗಿದ್ದು, ಇಂದಿನ ಯುವ ಪೀಳಿಗೆಯ ಮನಮುಟ್ಟಲಿದೆ ಎಂದಿದ್ದಾರೆ

“ಒನ್‌ ಟು ಹಂಡ್ರೆಡ್‌ ಡ್ರೀಮ್ಸ್‌ ಮೂವೀಸ್‌’ ಬ್ಯಾನರ್‌ನಲ್ಲಿ ಸ್ವಾತಿ ಕುಮಾರ್‌ ನಿರ್ಮಿಸುತ್ತಿರುವ “5ಡಿ’ ಸಿನಿಮಾದಲ್ಲಿ ಆದಿತ್ಯ ಮತ್ತು ಅದಿತಿ ಪ್ರಭುದೇವ ಅವರೊಂದಿಗೆ ಜ್ಯೋತಿ ರೈ, ರಾಜೇಶ್‌ ರಾವ್‌, ಆಕಾಶ್‌, ರವಿಕುಮಾರ್‌ ಮೊದಲಾದವರು ತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

SCROLL FOR NEXT