ನಟ ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪ್ರೀತಿಸಿ ಮದುವೆಯಾಗಿದ್ದ ಯುವ ಮತ್ತು ಶ್ರೀದೇವಿ ಜೋಡಿ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಪತ್ನಿ ಶ್ರೀದೇವಿ ಡಿವೋರ್ಸ್ ನೀಡಲು ಜೂನ್ 6ರಂದು ಬೆಂಗಳೂರಿನ ಫ್ಯಾಮಿಲಿ ಕೋರ್ಟ್ಗೆ ಯುವ ಅರ್ಜಿ ಸಲ್ಲಿಸಿದ್ದಾರೆ. ಶ್ರೀದೇವಿಗೆ ಕೋರ್ಟ್ನಿಂದ ಈಗಾಗಲೇ ಡಿವೋರ್ಸ್ ನೋಟಿಸ್ ಕೂಡ ಕಳುಹಿಸಲಾಗಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ 'ಯುವ' ಸಿನಿಮಾ ಮೂಲಕ ಸುದ್ದಿಯಾಗಿದ್ದ ದೊಡ್ಮನೆ ಕುಡಿ ಇದೀಗ ದಾಂಪತ್ಯದಲ್ಲಿನ ಬಿರುಕು ಹಾಗೂ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಟ ಯುವ ರಾಜಕುಮಾರ್ ಅವರ ಐದು ವರ್ಷದ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿ ಆಗಿದೆ.
ಜೂನ್ 6ರಂದು ಫ್ಯಾಮಿಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಯುವ ರಾಜ್ಕುಮಾರ್, ಜುಲೈ 4ರಂದು ವಿಚಾರಣೆಗೆ ನಿಗದಿಯಾಗಿದೆ. ಕಳೆದ 6 ತಿಂಗಳಿಂದ ಇಬ್ಬರ ಡಿವೋರ್ಸ್ ಸುದ್ದಿ ಹರಿದಾಡುತ್ತಿತ್ತು. ಕೆಲ ತಿಂಗಳುಗಳಿಂದ ಇಬ್ಬರೂ ಜೊತೆಯಾಗಿ ಕೂಡ ವಾಸಿಸುತ್ತಿಲ್ಲ. ಇನ್ನೂ ‘ಯುವ’ ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ಕೂಡ ಶ್ರೀದೇವಿ ಭಾಗಿಯಾಗಿರಲಿಲ್ಲ. ಸದ್ಯ ಶ್ರೀದೇವಿ ಅವರು ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಹಲವು ವರ್ಷಗಳ ಪ್ರೀತಿಗೆ ಮೈಸೂರು ಮೂಲದ ಶ್ರೀದೇವಿ ಜೊತೆ 2018ರಲ್ಲಿ ಯುವ ರಾಜ್ಕುಮಾರ್ ನಿಶ್ಚಿತಾರ್ಥ ಜರುಗಿತ್ತು. 2019ರ ಮೇ 26ರಂದು ಅದ್ಧೂರಿಯಾಗಿ ಇಬ್ಬರ ಮದುವೆ ಜರುಗಿತ್ತು. ಈಗ ಇಬ್ಬರೂ ಡಿವೋರ್ಸ್ಗೆ ಮುಂದಾಗಿದ್ದಾರೆ.
ದಾಂಪತ್ಯ ಕಲಹ ವಿಚಾರ, ವಿಚ್ಛೇದನ ವಿಚಾರವಾಗಿ ಮೇರು ನಟ ಡಾ.ರಾಜಕುಮಾರ್ ಕುಟುಂಬದಲ್ಲಿ ಮುನ್ನೆಲೆಗೆ ಬಂದ ಮೊದಲ ನಟ ಎನ್ನಬಹುದಾಗಿದೆ. ಈ ವರೆಗೆ ಅವರ ಕುಟುಂಬದಲ್ಲಿ ಈ ವಿಚಾರವಾಗಿ ಯಾರೊಬ್ಬರು ಮುನ್ನೆಲೆ ಬಂದಿಲ್ಲ.