ರಾಮನಗರ: ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಸೀಜ್ ಮಾಡಲಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯನ್ನು ಕೊನೆಗೂ ತೆರೆಯಲಾಗಿದ್ದು, ರಾತ್ರೋ ರಾತ್ರಿಯೇ ಸ್ಪರ್ಧಿಗಳೂ ಕೂಡ ವಾಪಸ್ ಆಗಿದ್ದಾರೆ.
ಹೌದು.. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮದ ಉಲ್ಲಂಘನೆ ಮೇರೆಗೆ ಮುಚ್ಚಲ್ಪಟ್ಟಿದ್ದ ಬಿಗ್ ಬಾಸ್ ಮನೆ ಕೊನಗೂ ತೆರೆಯಲಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರ ಮಧ್ಯ ಪ್ರವೇಶದ ಬೆನ್ನಲ್ಲೇ ಮಧ್ಯರಾತ್ರಿಯೇ ಸೀಜ್ ಮಾಡಲಾಗಿದ್ದ ಬಿಗ್ ಬಾಸ್ ಮನೆಯನ್ನು ತೆರೆಯಲಾಗಿದೆ.
ನಸುಕಿನ ಜಾವ 2:45ಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಎಸ್ಪಿ ಶ್ರೀನಿವಾಸ್ ಗೌಡ, ತಹಶಿಲ್ದಾರ್ ತೇಜಸ್ವಿನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಜಾಲಿವುಡ್ ಸ್ಟುಡಿಯೋದ ಗೇಟ್ ಸೀಲ್ ಓಪನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯಶವಂತ್ ವಿ ಗುರುಕರ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ತೆರೆದಿದ್ದೇವೆ. ಜಾಲಿವುಡ್ ಸಂಪೂರ್ಣ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿಲ್ಲ.
ಕೇವಲ ಬಿಗ್ ಬಾಸ್ ಶೋ ಸ್ಪರ್ಧಿಗಳು, ಸಿಬ್ಬಂದಿ ಓಡಾಟ ಹಾಗೂ ಅಗತ್ಯ ವಸ್ತುಗಳ ಬಳಕೆಗೆ ಮಾತ್ರ ಅವಕಾಶ ಕೊಡಲಾಗಿದೆ. ಬಿಗ್ ಬಾಸ್ ಶೂಟಿಂಗ್ ಆರಂಭದ ಬಗ್ಗೆ ನಾಳೆ ತೀರ್ಮಾನ ಆಗಲಿದೆ ಎಂದು ತಿಳಿಸಿದರು.
ರಾತ್ರೋರಾತ್ರಿ ಮನೆಗೆ ವಾಪಸ್ ಆದ ಸ್ಪರ್ಧಿಗಳು
ಇನ್ನು ಸದ್ಯಕ್ಕೆ ಬಿಗ್ಬಾಸ್ ಶೋ ನಡೆಯುವ ಜಾಗ ಮಾತ್ರ ತೆರೆಯಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಬಿಗ್ ಬಾಸ್ ಸಿಬ್ಬಂದಿ ಕ್ಯಾಬ್ ಮೂಲಕ ಆಗಮಿಸಿದ್ದಾರೆ. ಇದರ ಜೊತೆ ಬಿಡದಿಯ ರೆಸಾರ್ಟ್ನಲ್ಲಿರುವ ಸ್ಪರ್ಧಿಗಳು ಮನೆಗೆ ಬಂದಿದ್ದಾರೆ. ಈಗಾಗಲೇ ಈಗಲ್ಟನ್ ರೆಸಾರ್ಟ್ನಿಂದ ಸ್ಪರ್ಧಿಗಳನ್ನು ಕಾರಿನಲ್ಲಿ ಮತ್ತೆ ಬಿಗ್ಬಾಸ್ ಮನೆಗೆ ತಂದು ಬಿಡಲಾಗಿದೆ.
ಕರೆ ಮಾಡಿದ್ದ ಕಿಚ್ಚಾ ಸುದೀಪ್
ಬಿಗ್ಬಾಸ್ ಶೋ ಮತ್ತೆ ಪ್ರಾರಂಭ ಆಗುವಲ್ಲಿ ಕಿಚ್ಚ ಸುದೀಪ್ ಅವರ ಶ್ರಮ ಸಾಕಷ್ಟಿದೆ. ಅವರ ಕೆಲವು ಕರೆಗಳಿಂದಲೇ ಶೋ ಪುನಃ ಪ್ರಾರಂಭಕ್ಕೆ ಅವಕಾಶ ದೊರೆತಿದೆ ಎನ್ನಲಾಗಿದೆ. ಜಾಲಿವುಡ್ಗೆ ಬೀಗ ಹಾಕುವುದಕ್ಕೂ ಬಿಗ್ಬಾಸ್ ಶೋಗೂ ಸಂಬಂಧವಿಲ್ಲ ಎಂದ ಬಳಿಕ ಕಿಚ್ಚ ಸುದೀಪ್ ಅವರು ಕೆಲ ರಾಜಕಾರಣಿಗಳಿಗೆ ಕರೆ ಮಾಡಿ, ಏನೂ ತಪ್ಪಿಲ್ಲದ ಬಿಗ್ಬಾಸ್ ಶೋ ಅನ್ನು ಮತ್ತೆ ನಡೆಸಿಕೊಡಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ಅವರೇ ಹೇಳಿರುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದರಂತೆ. ಸುದೀಪ್ ಅವರ ಈ ಕಾರ್ಯದಲ್ಲಿ ನಲಪಾಡ್ ಸಹ ಸಹಾಯ ಮಾಡಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ.
ಡಿಕೆಶಿ ಟ್ವೀಟ್
ಬಿಗ್ ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ಅನ್ನು ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದರು.
ಪರಿಸರ ನಿರ್ವಹಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು.
ಪರಿಸರ ಸಂರಕ್ಷಣೆಯ ಕಡೆಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುವುದರ ಜೊತೆಗೆ ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದರು.
ಸುದೀಪ್ ಧನ್ಯವಾದ
ಡಿಸಿಎಂ ಅವರ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ‘ಅಗತ್ಯ ಸಮಯದಲ್ಲಿ ಅಗತ್ಯ ನೆರವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು, ಹಾಗೆಯೇ ಜಾಲಿವುಡ್ ಸ್ಟುಡಿಯೋನಲ್ಲಿ ಆಗಿರುವ ಸಮಸ್ಯೆಗೂ ಬಿಗ್ಬಾಸ್ ಕನ್ನಡಕ್ಕೂ ಸಂಬಂಧವಿಲ್ಲ, ಬಿಗ್ಬಾಸ್ ಕನ್ನಡ ಶೋನಿಂದ ಯಾವುದೇ ತಪ್ಪು ಆಗಿಲ್ಲವೆಂದು ಗುರುತಿಸಿದ ಅಧಿಕಾರಿಗಳಿಗೂ ಧನ್ಯವಾದಗಳು.
ನನ್ನ ಕರೆಗೆ ಶೀಘ್ರವೇ ಸ್ಪಂದಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಸಹಾಯ ಮಾಡಿದ ನಲಪಾಡ್ ಅವರಿಗೆ ಧನ್ಯವಾದಗಳು. ಬಿಗ್ಬಾಸ್ ಕನ್ನಡ ಸದಾ ಇರಲಿದೆ’ ಎಂದಿದ್ದಾರೆ.