ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿ ಒಂದು ವರ್ಷವನ್ನು ಪೂರೈಸಿದ್ದಾರೆ; ಈ ದೀರ್ಘಕಾಲದ ಕಾನೂನು ಹೋರಾಟದ ಬಗ್ಗೆ ಅಸಮಾಧಾನ ಹಾಗೂ ನೋವನ್ನು ವ್ಯಕ್ತಪಡಿಸಿರುವ ಅವರ ಪತ್ನಿ ವಿಜಯಲಕ್ಷ್ಮಿ, ಆ ನೋವು ಇನ್ನೂ ವಾಸಿಯಾಗಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರೊಂದಿಗಿನ ತಮ್ಮ ಫೋಟೊವನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ, ದರ್ಶನ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಿ ಒಂದು ವರ್ಷ ಕಳೆದಿದ್ದರೂ, ಆ ಭಾವನಾತ್ಮಕ ನೋವು ಮಾತ್ರ ಹಾಗೆಯೇ ಉಳಿದಿದೆ ಎಂದು ತಿಳಿಸಿದ್ದಾರೆ.
'ಈಗಾಗಲೇ ಒಂದು ವರ್ಷ ಕಳೆದಿದೆ. ನೋವು ಹಾಗೆಯೇ ಉಳಿದಿದೆ. ಗಾಯ ಇನ್ನೂ ವಾಸಿಯಾಗಿಲ್ಲ. ಈ ನೋವನ್ನು ಸಹಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ' ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಪ್ರಕರಣದ ಕುರಿತಾದ ಸಾರ್ವಜನಿಕ ಅಭಿಪ್ರಾಯಗಳ ಬಗ್ಗೆ ಪ್ರಸ್ತಾಪಿಸಿದ ವಿಜಯಲಕ್ಷ್ಮಿ, ಜನರು ಆಗಾಗ್ಗೆ ವಾಸ್ತವ ಪರಿಸ್ಥಿತಿಯನ್ನು ಅರಿಯದೆಯೇ ತೀರ್ಪು ನೀಡುತ್ತಾರೆ. ಆದರೆ, ನಾನು ನನ್ನನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಿದ್ದೇನೆ. ಈಗ ನಾನು ಕೇವಲ ನಗುತ್ತೇನೆ. ಉಳಿದುದ್ದನ್ನು ಕಾಲಕ್ಕೂ ಹಾಗೂ ದೇವರಿಗೂ ಬಿಟ್ಟಿದ್ದೇನೆ. ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ದರ್ಶನ್ ಅವರಿಗೆ ಮತ್ತೊಂದು ಹಿನ್ನಡೆಯಾದ ಮರುದಿನವೇ ಈ ಪೋಸ್ಟ್ ಬಂದಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ಪುರಸ್ಕರಿಸಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ (ಆಗಸ್ಟ್ 13) ವಜಾಗೊಳಿಸಿತ್ತು.
ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಈ ಅರ್ಜಿಯನ್ನು ವಿರೋಧಿಸಲು ದರ್ಶನ್ ಮತ್ತು ಇತರ ಆರೋಪಿಗಳು ಅವಕಾಶ ಕೋರಿದ್ದರು. ಆದರೆ, ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಅವರ ಈ ಮನವಿಯನ್ನು ತಿರಸ್ಕರಿಸಿತ್ತು. ನಂತರ ದರ್ಶನ್ ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಇದಕ್ಕೂ ಮುನ್ನ, ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಕಾಮಾಕ್ಯ ದೇವಿಯ ಚಿತ್ರವೊಂದನ್ನು ಹಂಚಿಕೊಂಡು, 'ದೇವರಿಗೆ ಗೊತ್ತು, ಅಷ್ಟೇ ಸಾಕು' ಎಂದು ಬರೆದುಕೊಂಡಿದ್ದರು. ಜೊತೆಗೆ, 'ಎಲ್ಲಿಗೆ ಓಡುವೆ ಓ ಮಾನವ? ನಿನ್ನ ಎಲ್ಲ ಕರ್ಮಗಳೂ ಇಲ್ಲಿಯೇ ಕೊನೆಗೊಳ್ಳುತ್ತವೆ' ಎಂಬ ಸಾಲುಗಳಿರುವ ಹಾಡೊಂದನ್ನೂ ಅವರು ಲಗತ್ತಿಸಿದ್ದರು.
ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಅವರ ಹತ್ಯೆಗೆ ಸಂಬಂಧಿಸಿದಂತೆ ಜೂನ್ 2024ರಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಈ ಹತ್ಯೆ ಹಾಗೂ ಸಂಬಂಧಿತ ಅಪರಾಧಗಳಲ್ಲಿ ದರ್ಶನ್ ಮತ್ತು ಇತರ ಹಲವರು ಭಾಗಿಯಾಗಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ದರ್ಶನ್ ಅವರಿಗೆ ಡಿಸೆಂಬರ್ 2024ರಲ್ಲಿ ಜಾಮೀನು ಮಂಜೂರಾಗಿತ್ತು. ಆದರೆ, ಆಗಸ್ಟ್ 2025ರಲ್ಲಿ ಸುಪ್ರೀಂ ಕೋರ್ಟ್ ಆ ಜಾಮೀನನ್ನು ರದ್ದುಗೊಳಿಸಿತು; ಇದರ ಪರಿಣಾಮವಾಗಿ ಕಳೆದ ವರ್ಷದ ಆಗಸ್ಟ್ 14ರಂದು ಅವರನ್ನು ಮತ್ತೆ ವಶಕ್ಕೆ ಪಡೆಯಲಾಯಿತು. ಅದಾದ ಒಂದು ವರ್ಷದ ನಂತರವೂ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಅವರು ಜೈಲಿನಲ್ಲಿಯೇ ಇದ್ದಾರೆ.