ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆದಿದ್ದು, ನಟಿ ಜಯಮಾಲ ಗೆಲುವು ಸಾಧಿಸಿದ್ದಾರೆ.
ಗುರುರಾಜ ಕಲ್ಯಾಣ ಮಂಟಪದಲ್ಲಿ ಈ ಚುನಾವಣೆ ನಡೆಯಿತು. ಈ ಭಾರಿಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟಿ ಜಯಮಾಲಾ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 512 ಮತ ಪಡೆದು ಜಯಮಾಲಾ ಜಯಗಳಿಸಿದ್ದಾರೆ.
ಶನಿವಾರ(ಜ.31) ರೇಸ್ ಕೋರ್ಸ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ 2026–27ನೇ ಸಾಲಿನ ವಾರ್ಷಿಕ ಚುನಾವಣೆ ನಡೆಯಿತು. ಈ ಬಾರಿಯ ಅಧ್ಯಕ್ಷ ಸ್ಥಾನ ನಿರ್ಮಾಪಕರ ವಲಯಕ್ಕೆ ಮೀಸಲಾಗಿತ್ತು.
ಈಗಾಗಲೇ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ನಟಿ ಜಯಮಾಲಾ ಹಾಗೂ ನಿರ್ಮಾಪಕ ಭಾ.ಮಾ.ಹರೀಶ್ ಅವರು ಈ ವರ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದರು. ಒಟ್ಟು 846 ಮತಗಳು ಚಲಾವಣೆಯಾಗಿದ್ದು, ಜಯಮಾಲಾ ಅವರು 512 ಮತಗಳನ್ನು ಪಡೆದುಕೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ನಟ ಸುಂದರ್ರಾಜ್, ವಿತರಕ ವಲಯದಿಂದ ನಿರ್ಮಾಪಕ ಕೆ.ಮಂಜು ಹಾಗೂ ಪ್ರದರ್ಶಕರ ವಲಯದಿಂದ ಕಿಶೋರ್ ಕುಮಾರ್ ಎಂ.ಎನ್. ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಎ.ಗಣೇಶ್, ಪ್ರದರ್ಶಕ ವಲಯದಿಂದ ಅಶೋಕ್ ಕೆ.ಸಿ., ವಿತರಕ ವಲಯದಿಂದ ರಮೇಶ್ ಬಾಬು ಎಂ.ಆರ್. ಚುನಾಯಿತರಾದರು.
ಖಜಾಂಚಿಯಾಗಿ ಜಯಸಿಂಹ ಮುಸುರಿ ಬಿ.ಕೆ. ಆಯ್ಕೆಯಾದರು. ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಗೆ ಮೂರು ವಲಯದಿಂದ 48 ಮಂದಿ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ.
ಈ ಹಿಂದೆ 2008 ರಿಂದ 2010 ರ ವರೆಗೆ ಜಯಮಾಲಾ ಕೆಎಫ್ಸಿಸಿ ಅಧ್ಯಕ್ಷೆ ಆಗಿದ್ದರು. ಇದೀಗ 2ನೇ ಬಾರಿಗೆ ಜಯಮಾಲಾ ಅಧ್ಯಕ್ಷೆ ಆಗಿದ್ದಾರೆ.