ಬೆಂಗಳೂರು: ನಟ ದರ್ಶನ್ ಮತ್ತು ನಟ ಧನ್ವೀರ್ ಗೌಡ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ಇದೀಗ ತೆರೆ ಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದ್ದೂ, ಮಂಗಳವಾರ (ಜು. 28) ನಡೆದ ಬೆಳವಣಿಗೆ ಆ ಎಲ್ಲ ಊಹಾಪೋಹಗಳಿಗೆ ಹೊಸ ತಿರುವು ನೀಡಿದೆ.
ದರ್ಶನ್ ಅವರನ್ನು ಭೇಟಿಯಾಗಲು ಧನ್ವೀರ್ ಗೌಡ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದು, ಈ ಮೂಲಕ ಇಬ್ಬರ ನಡುವಿನ ಸಂಬಂಧದಲ್ಲಿ ಯಾವುದೇ ವೈಮನಸ್ಸಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದಂತಾಗಿದೆ.
ದರ್ಶನ್ ಅವರ ಕಷ್ಟದ ಸಮಯದಲ್ಲೂ ಧನ್ವೀರ್ ಬೆಂಬಲವಾಗಿ ನಿಂತಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಅಂತರ ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಧನ್ವೀರ್ ಅವರ ಭೇಟಿಗೆ ಅಭಿಮಾನಿಗಳ ವಲಯದಲ್ಲಿ ಹೆಚ್ಚಿನ ಮಹತ್ವ ಸಿಕ್ಕಿದೆ.
ಧನ್ವೀರ್ ಪರಪ್ಪನ ಅಗ್ರಹಾರಕ್ಕೆ ಆಗಮಿಸಿ ದರ್ಶನ್ ಅವರನ್ನು ಭೇಟಿಯಾದ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬೆಳವಣಿಗೆಯನ್ನು ಸ್ವಾಗತಿಸಿರುವ ಅಭಿಮಾನಿಗಳು, ದರ್ಶನ್ ಮತ್ತು ಧನ್ವೀರ್ ನಡುವಿನ ಸ್ನೇಹ ಹಾಗೆಯೇ ಮುಂದುವರಿದಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇಬ್ಬರು ನಟರು ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ, ಇವರ ನಡುವಿನ ಸಂಬಂಧದ ಬಗ್ಗೆ ಹರಿದಾಡಿದ್ದ ವದಂತಿಗಳಿಗೆ ಈ ಭೇಟಿ ಹೊಸ ಚರ್ಚೆಗೆ ಕಾರಣವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾದ ನಂತರ, ಅವರ ಕುಟುಂಬದ ಜೊತೆ ಸದಾ ಓಡಾಡಿಕೊಂಡಿದ್ದರು ಧನ್ವೀರ್. ಒಂದು ಅರ್ಥದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಾವಲಾಗಿದ್ದರು. ಧನ್ವೀರ್ ಹೊರತಾಗಿ ವಿಜಯಲಕ್ಷ್ಮಿ ಎಲ್ಲಿಯೂ ಹೋಗುತ್ತಿರಲಿಲ್ಲ. ಜೈಲಿಗೆ ಬರಲಿ, ದೇವಸ್ಥಾನಕ್ಕೆ ಹೋಗಲಿ ವಿಜಯಲಕ್ಷ್ಮಿ ಜೊತೆ ಧನ್ವೀರ್ ಇರುತ್ತಿದ್ದರು. ಆದರೆ ಇತ್ತೀಚೆಗೆ ಒಂಟಿಯಾಗಿಯೇ ವಿಜಯಲಕ್ಷ್ಮಿ ಓಡಾಡುತ್ತಿದ್ದರು.