ದಂಗಲ್ ನಿರ್ದೇಶಕ ನಿತೇಶ್ ತಿವಾರಿ ಅವರ ರಾಮಾಯಣ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಣಬೀರ್ ಕಪೂರ್ ಅವರ ರಾಮನ ಪಾತ್ರ ಮತ್ತು ಯಶ್ ಅವರ ರಾವಣ ಪಾತ್ರವು ಪ್ರಮುಖ ಚರ್ಚಾಸ್ಪದ ಅಂಶಗಳಾಗಿ ಹೊರಹೊಮ್ಮಿದ್ದರೂ, ಸಾಯಿ ಪಲ್ಲವಿ ಸೀತಾದೇವಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಆನ್ಲೈನ್ನಲ್ಲಿ ಪ್ರತಿಕ್ರಿಯೆಗಳ ಅಲೆಯನ್ನು ಹುಟ್ಟುಹಾಕಿದೆ.
ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಪರದೆಯ ಉಪಸ್ಥಿತಿಯನ್ನು ಶ್ಲಾಘಿಸಿದ್ದಾರೆ. ಮತ್ತೊಂದು ವರ್ಗ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಅಭಿಪ್ರಾಯಗಳು ರಾಮಾಯಣ ಟ್ರೇಲರ್ನ ಹೆಚ್ಚು ಚರ್ಚಿಸಲ್ಪಟ್ಟ ಅಂಶಗಳಲ್ಲಿ ಒಂದಾಗಿದೆ. ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಮಾಡಿದ್ದು ಕೆಟ್ಟ ನಿರ್ಧಾರ ಎಂದು ಹಲವಾರು ಪೋಸ್ಟ್ಗಳನ್ನು ಮಾಡುತ್ತಿದ್ದಾರೆ.
ಮತ್ತೆ ಕೆಲವರು ಸಾಯಿ ಪಲ್ಲವಿಗಿಂತ ಶೂರ್ಪನಖಿ ಪಾತ್ರ ನಿರ್ವಹಿಸಿರುವ ರಾಕುಲ್ ಪ್ರೀತ್ ಸಿಂಗ್ ಚೆನ್ನಾಗಿ ಕಾಣಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ರಾಮಾಯಣದ ಇತರ ಧಾರವಾಹಿ, ಚಿತ್ರಗಳಿಗಿಂತಲೂ ಕೆಟ್ಟ ಆಯ್ಕೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.