ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಲವ್ ಮಾಕ್ಟೇಲ್ 3 ಚಿತ್ರದ ಸ್ಕ್ರಿಪ್ಟ್ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ.
ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ದೇಶಕ ಗುರು ದೇಶಪಾಂಡೆ ನಡುವಿನ ಭಿನ್ನಾಭಿಪ್ರಾಯಗಳು ಈಗ ಶಮನಗೊಂಡಿದ್ದು, ಇಬ್ಬರೂ ಪರಸ್ಪರ ಮನಸ್ತಾಪ ಮರೆತು ಕೈಜೋಡಿಸಿದ್ದಾರೆ.
ಈ ಹಿಂದೆ ಲವ್ ಮಾಕ್ಟೇಲ್ 3 ಕಥೆ ಹಾಗೂ ಸ್ಕ್ರಿಪ್ಟ್ ಹಕ್ಕುಗಳ ಬಗ್ಗೆ ಉಂಟಾದ ಗೊಂದಲ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಹೇಳಿಕೆಗಳು ಮತ್ತು ಪ್ರತಿಕ್ರಿಯೆಗಳು ಇಬ್ಬರ ನಡುವಿನ ಸಂಬಂಧವನ್ನು ಹದಗೆಡಿಸಿದ್ದವು. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ, ಇಬ್ಬರೂ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.
ಮಾರ್ಚ್ 27ರಂದು ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಕೃಷ್ಣ, ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಇನ್ನಿತರು ಹಾಜರಿದ್ದರು. ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ವಾದ ಮುಂದಿಟ್ಟಿದ್ದಾರೆ.
ಇದೇ ವೇಳೆ ಸುದ್ದಿಗೋಷ್ಠಿಯ ಭರದಲ್ಲಿ ಗುರು ದೇಶಪಾಂಡೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಕ್ಕೆ ಡಾರ್ಲಿಂಗ್ ಕೃಷ್ಣ ಅವರು ಸಭೆಯಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿ, ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಇದರೊಂದಿಗೆ ಪ್ರಕರಣವು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ.
ಫಿಲ್ಮ್ ಚೇಂಬರ್ ಪ್ರಕಟಣೆ
ಸ್ಯಾಂಡಲ್ವುಡ್ನ ಖ್ಯಾತ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಚಿತ್ರದ ಕಥೆಗೆ ಸಂಬಂಧಿಸಿದ ವಿವಾದವು ಈಗ ಅಧಿಕೃತವಾಗಿ ಸುಖಾಂತ್ಯ ಕಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ.ಜಯಮಾಲ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ಇಬ್ಬರ ನಡುವಿನ ಮನಸ್ತಾಪವನ್ನು ಬಗೆಹರಿಸಲಾಗಿದ್ದು, ಈ ಕುರಿತು ಮಂಡಳಿಯು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.
ಸಭೆಯಲ್ಲಿ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರು ಹಾಜರಿದ್ದರು. ವಿವಾದದ ಪ್ರಮುಖ ವ್ಯಕ್ತಿಗಳಾದ ಡಾರ್ಲಿಂಗ್ ಕೃಷ್ಣ, ನಿರ್ಮಾಪಕ ಗುರು ದೇಶಪಾಂಡೆ ಹಾಗೂ ಬರಹಗಾರ ರಾಘವೇಂದ್ರ ನಾಯಕ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು,
ಸಭೆಯ ಉಭಯರ ಅಭಿಪ್ರಾಯ ಸಂಗ್ರಹಿಸಿ ಸುದೀರ್ಘ ಚರ್ಚೆಯ ನಂತರ ಒಂದು ತೀರ್ಮಾನಕ್ಕೆ ಬರಲಾಯಿತು.
ಡಾರ್ಲಿಂಗ್ ಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಗುರು ದೇಶಪಾಂಡೆ ಅವರ ಬಗ್ಗೆ ನೀಡಿದ್ದ ವೈಯಕ್ತಿಕ ಹೇಳಿಕೆಗಳು. ಈ ಹೇಳಿಕೆಗಳಿಂದ ಗುರು ದೇಶಪಾಂಡೆ ಅವರ ಮನಸ್ಸಿಗೆ ನೋವಾಗಿದ್ದನ್ನು ಗಮನಿಸಿದ ಸಭೆಯು, ಕೃಷ್ಣ ಅವರಿಂದ ಸ್ಪಷ್ಟನೆ ಕೋರಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಾರ್ಲಿಂಗ್ ಕೃಷ್ಣ ಅವರು, ಸಭೆಯಲ್ಲಿ ಗುರು ದೇಶಪಾಂಡೆ ಅವರ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸಿದರು.
ಇನ್ನು ಕಥೆಯ ಹಕ್ಕಿನ ಕುರಿತು ಚರ್ಚಿಸಿದ ಮಂಡಳಿಯು, ಇಬ್ಬರ ಚಿತ್ರಕಥೆಗಳನ್ನು ಸೂಕ್ಷ್ಮವಾಗಿ ಗಮನಿಸಿತು. ಈ ಕಥೆಯ ತಿರುಳನ್ನು ಇಬ್ಬರೂ ಒಂದೇ ಮೂಲದಿಂದ ಸ್ಫೂರ್ತಿ ಪಡೆದಿದ್ದರೂ, ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಚಿತ್ರಕಥೆ ಮತ್ತು ಗುರು ದೇಶಪಾಂಡೆ ಅವರ ಬಳಿಯಿರುವ ಚಿತ್ರಕಥೆ ಸಂಪೂರ್ಣ ಭಿನ್ನವಾಗಿದೆ ಎಂಬ ನಿರ್ಧಾರಕ್ಕೆ ಬರಲಾಯಿತು. ಅಂತಿಮವಾಗಿ ಇವರಿಬ್ಬರ ಕಥೆಯೂ ಬೇರೆ ಬೇರೆಯಾಗಿರುವುದರಿಂದ ಯಾವುದೇ ಕಥೆ ಕಳವು ನಡೆದಿಲ್ಲ ಎಂದು ಮಂಡಳಿಯು ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿತು ಎಂದು ಹೇಳಿದೆ.