ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಥೈರಾಯ್ಡ್ ಸಮಸ್ಯೆ ಇದ್ದರೆ ಕೆಲವರು ದಪ್ಪವಾಗುತ್ತಾರೆ ಇನ್ನೂ ಕೆಲವರು ಸಣ್ಣ ಆಗುತ್ತಾ ಹೋಗುತ್ತಾರೆ. ಈಗಾಗಲೇ ಹಲವಾರು ಸಮಸ್ಯೆಗಳಿಗೆ ಕಾರಣವಾಗಿರುವ ಇಂದಿನ ಜಡ ಜೀವನ ಶೈಲಿ ಮತ್ತು ಆಹಾರ ಕ್ರಮದ ಬದಲಾವಣೆಗಳೇ ಈ ಸಮಸ್ಯೆಯ ಮೂಲವಾಗಿದೆ. ಇದಲ್ಲದೇ ಸಾಮಾನ್ಯವಾಗಿ ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ಬಗೆಯ ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತವಾಗಿ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದೇ ಇರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.
ಥೈರಾಯ್ಡ್ ನಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗ್ರಂಥಿ. ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಉತ್ಪಾದಿಸುವುದೇ ಈ ಗ್ರಂಥಿಯ ಮುಖ್ಯ ಕಾರ್ಯ. ಮೂಲತ: ಥೈರಾಕ್ಸಿನ್ ಅಯೋಡಿನ್ನಿನಿಂದ ಕೂಡಿದ ಅಮೈನೋ ಆಮ್ಲ. ಇದು ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಉತ್ಕರ್ಷಣದ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಇದನ್ನೂ ಓದಿ: ಜಿಂಜೈವೈಟಿಸ್ ಅಥವಾ ವಸಡಿನ ಉರಿಯೂತ (ಕುಶಲವೇ ಕ್ಷೇಮವೇ)
ಥೈರಾಯ್ಡ್ ಸಮಸ್ಯೆ ಇದ್ದರೆ ಪದೇ ಪದೇ ಆಯಾಸವಾಗುವುದು, ಮಹಿಳೆಯರಲ್ಲಿ ಅನಿಯಮಿತ ಮುಟ್ಟು ಸಮಸ್ಯೆ, ಕೂದಲು ಉದುರುವುದು, ಆಗಾಗ ನಡುಕ ಉಂಟಾಗುವುದು, ಬೆವರುವಿಕೆ ಜಾಸ್ತಿ ಇರುವುದು, ಅನಿರೀಕ್ಷಿತವಾಗಿ ತೂಕ ಏರಿಕೆ ಆಗುವುದು, ಸಣ್ಣಸಣ್ಣ ವಿಷಯಕ್ಕೂ ಕೋಪ ಬರುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಗಾಯಿಟರ್: ಇದನ್ನು ಗಳಗಂಡ ರೋಗ ಎಂದೂ ಕರೆಯುತ್ತಾರೆ. ಥೈರಾಯ್ಡ್ ಗ್ರಂಥಿಯು ದೊಡ್ಡದಾಗಿ ಬೆಳೆದು ಊದಿಕೊಳ್ಳುವ ಸ್ಥಿತಿ.
ಹೈಪೋಥೈರಾಯ್ಡಿಸಮ್: ಥೈರಾಯ್ಡ್ ಗ್ರಂಥಿಯು ಅಗತ್ಯಕ್ಕಿಂತ ಕಡಿಮೆ ಹಾರ್ಮೋನ್ ಉತ್ಪಾದನೆ ಮಾಡಿದಾಗ ಕಂಡುಬರುವ ಸಮಸ್ಯೆ ಇದರ ಲಕ್ಷಣಗಳು ಆಯಾಸ, ತೂಕ ಹೆಚ್ಚಾಗುವುದು, ಶೀತ ಅಸಹಿಷ್ಣುತೆ, ಒಣ ಚರ್ಮ, ಮಲಬದ್ಧತೆ ಮತ್ತು ಖಿನ್ನತೆ.
ಹೈಪರ್ ಥೈರಾಯ್ಡಿಸಮ್: ಥೈರಾಯ್ಡ್ ಗ್ರಂಥಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪಾದನೆ ಮಾಡಿದರೆ ಕಂಡುಬರುವ ಸಮಸ್ಯೆ. ಇದರ ಲಕ್ಷಣಗಳು ತೂಕ ನಷ್ಟ, ತ್ವರಿತ ಹೃದಯ ಬಡಿತ, ಕಿರಿಕಿರಿ, ಶಾಖವನ್ನು ಸಹಿಸದಿರುವುದು ಮತ್ತು ಆತಂಕ.
ಥೈರಾಯ್ಡೈಟಿಸ್: ಥೈರಾಯ್ಡ್ ಗ್ರಂಥಿಯಲ್ಲಿ ಊತ ಉಂಟಾಗಿ ಥೈರಾಕ್ಸಿನ್ ಹಾರ್ಮೋನಿನ ಸಂಗ್ರಹವು ರಕ್ತಕ್ಕೆ ಸೋರಿಕೆಯಾಗುವ ಸಾಧ್ಯತೆಗಳಿವೆ. ಈ ರೀತಿ ಆದಾಗ ರಕ್ತದಲ್ಲಿನ ಹಾರ್ಮೋನ್ ಮಟ್ಟ ಹೆಚ್ಚಾಗಬಹುದು.
ಥೈರಾಯ್ಡ್ ಗ್ರಂಥಿಯ ಗೆಡ್ಡೆಗಳು: ಕೆಲವೊಮ್ಮೆ ಸಾಮಾನ್ಯ ಗೆಡ್ಡೆಗಳಾಗಿರುತ್ತವೆ. ಕೆಲವೊಮ್ಮೆ ಇದರಿಂದ ಕ್ಯಾನ್ಸರ್ ಕೂಡ ಆಗಿರಬಹುದು.
ನಮ್ಮಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ದಿನವೂ ಬಿರುಸಾದ ನಡಿಗೆ ಮತ್ತು ವ್ಯಾಯಾಮದಂತ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಸಮತೋಲನ ಆಹಾರ ಸೇವನೆ ಬಹಳ ಮುಖ್ಯ. ನಮ್ಮ ಒಟ್ಟಾರೆ ಆರೋಗ್ಯಕ್ಕೆ ವಿಟಮಿನ್ ಡಿ ಅತ್ಯಗತ್ಯ ಮತ್ತು ಇದು ಥೈರಾಯ್ಡ್ ಗ್ರಂಥಿಯ ಕಾರ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಕೊಬ್ಬು ಇರುವ ಮೀನು, ಡೈರಿ ಉತ್ಪನ್ನಗಳು ಮತ್ತು ಸೂರ್ಯನ ಬೆಳಕಿನಲ್ಲಿ ವಿಟಮಿನ್ ಡಿ ಇದೆ. ಕಂದು ಅಕ್ಕಿ ಮತ್ತು ಗೋಧಿಯಂತಹ ಸಂಪೂರ್ಣ ಧಾನ್ಯಗಳು ಜೀರ್ಣಕಾರಿ. ಜೊತೆಗೆ ಆರೋಗ್ಯಕ್ಕೆ ಮುಖ್ಯವಾದ ಫೈಬರ್ ಸೇರಿದಂತೆ ಪೋಷಕಾಂಶಗಳ ಉತ್ತಮ ಮೂಲವನ್ನು ಒದಗಿಸುತ್ತವೆ. ಆದಷ್ಟೂ ಜಂಕ್ ಪದಾರ್ಥಗಳು ಮತ್ತು ಹೆಚ್ಚು ಸಕ್ಕರೆ ಇರುವ ಪಾನೀಯಗಳನ್ನು ಸೇವಿಸದೇ ಇರುವುದು ಒಳಿತು.
ಪ್ರತಿದಿನ ಸೇಬು, ದಾಳಿಂಬೆ, ಸೀಬೆ, ಬಾಳೆಹಣ್ಣು, ಕಿತ್ತಲೆ ಹೀಗೆ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಂದರೆ ಮಜ್ಜಿಗೆ, ಮೊಸರು ಮತ್ತು ತುಪ್ಪವನ್ನು ನಿಯಮಿತವಾಗಿ ಹಿತಮಿತವಾಗಿ ಸೇವಿಸಬೇಕು. ಅಗಸೆ ಬೀಜ, ಸೂರ್ಯಕಾಂತಿ ಬೀಜ, ಒಣ ಹಣ್ಣುಗಳು, ಕಾಲಕಾಲಕ್ಕೆ ಸಿಗುವ ತಾಜಾ ಹಸಿರು ಸೊಪ್ಪುಗಳು, ಧಾನ್ಯಗಳು, ಕಾಳುಗಳು, ಸಾರ್ಡಿನ್,ಸಾಲ್ಮನ್ ಮೀನು, ಮೊಟ್ಟೆ ಮತ್ತು ಮಾಂಸಾಹಾರಿಗಳಾಗಿದ್ದರೆ ಕೋಳಿಯ ಮಾಂಸವನ್ನು ಸೇವಿಸಬೇಕು.
ಅಯೋಡಿನ್ ಇರುವ ಉಪ್ಪನ್ನು ದಿನನಿತ್ಯ ಬಳಸಬೇಕು. ಏಕೆಂದರೆ ಅಯೋಡಿನ್ ಥೈರಾಯ್ಡ್ ಗ್ರಂಥಿಗೆ ಅಗತ್ಯವಾದ ಮೂಲ ಖನಿಜವಾಗಿದೆ. ಹಾಗೆಯೇ ಸತುವಿನ ಸಮೃದ್ಧ ಮೂಲವಾಗಿರುವ ಕುಂಬಳಕಾಯಿ ಬೀಜಗಳು, ಕರಿಬೇವಿನ ಸೊಪ್ಪು, ಹೆಸರುಬೇಳೆ ಮತ್ತು ಮೊಳಕೆ ಬರಿಸಿದ ಹೆಸರುಕಾಳು, ಕಡಲೆಕಾಳು, ಹುರುಳಿಕಾಳಿನ ಸೇವನೆ ಹಿತಕಾರಿ. ಒಟ್ಟಾರೆಯಾಗಿ ಹೇಳುವುದಾದರೆ ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇರಿಸುವುದು ಬಹಳ ಮುಖ್ಯವಾಗಿದೆ.
ಇದನ್ನೂ ಓದಿ: ಸೀಸವೆಂಬ ವಿಷ ಅಥವಾ Lead Poisoning (ಕುಶಲವೇ ಕ್ಷೇಮವೇ)
ಈ ಪೌಷ್ಟಿಕ ಆಹಾರ ಸೇವನೆಯ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಸರಿಯಾದ ರೋಗನಿರ್ಣಯ ಮತ್ತು ವೈಯಕ್ತಿಕ ಸಲಹೆಗಾಗಿ ವೈದ್ಯರನ್ನು ಕಂಡು ಅವರೊಡನೆ ಸಮಾಲೋಚಿಸುವುದು ಬಹಳ ಮುಖ್ಯ. ನಿರ್ದಿಷ್ಟ ಪರಿಸ್ಥಿತಿಯ ಆಧಾರದ ಮೇಲೆ ಉತ್ತಮ ಆಹಾರದ ಆಯ್ಕೆಗಳ ಕುರಿತು ಅವರು ನಿಮಗೆ ಮಾರ್ಗದರ್ಶನ ನೀಡಬಹುದು. ಆಯುರ್ವೇದದಲ್ಲಿಯೂ ಥೈರಾಯಿಡ್ ಸಮಸ್ಯೆ ಉತ್ತಮ ಪರಿಹಾರೋಪಾಯಗಳಿವೆ. ಆರಂಭಿಕ ಹಂತದಲ್ಲಿ ಪಂಚಕರ್ಮ ಮತ್ತು ಔಷಧಿಗಳು ಲಭ್ಯವಿವೆ
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com